ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ. 10 ರಾಜ್ಯಗಳ ಶಾಸಕರು ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ನಾಲ್ಕು ರಾಜ್ಯಸಭಾ ಸದಸ್ಯರನ್ನು ಒಡಿಶಾದ ಶಾಸಕರು ಚುನಾಯಿಸಲಿದ್ದಾರೆ. ಈ ಪೈಕಿ, ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾಬಲವಿಲ್ಲದ ಕಾರಣ, ಒಡಿಶಾ ರಾಜಕೀಯದಲ್ಲಿ ಅಡ್ಡಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅಡ್ಡಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ 14 ಶಾಸಕರಲ್ಲಿ 9 ಮಂದಿಯನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್ಗೆ ಸ್ಥಳಾಂತರಿಸಿದೆ. ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಸ್ತುವಾರಿಯಲ್ಲಿ ಈ ಶಾಸಕರನ್ನು ಸ್ಥಳಾಂತರಿಸಲಾಗಿದೆ.
ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋತಾ ಅವರನ್ನು ಕಣಕ್ಕಿಳಿಸಿವೆ. ಪ್ರಖ್ಯಾತ ಹೋಟೆಲ್ ಉದ್ಯಮಿ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ, ಬಿಜೆಪಿಗರು ಬಿಜೆಡಿ ಮತ್ತು ಕಾಂಗ್ರೆಸ್ ಶಾಸಕರನ್ನು ಅಡ್ಡಮತದಾನಕ್ಕೆ ಪ್ರಚೋದಿಸಬಹುದು ಎಂಬ ಆತಂಕ ಎರಡೂ ಪಕ್ಷಗಳಲ್ಲಿದೆ.
ಆದ್ದರಿಂದಲೇ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ತಮ್ಮ ಒಂಬತ್ತು ಶಾಸಕರನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಎದುರಾಳಿ ಪಕ್ಷಗಳು ತಮ್ಮ ಶಾಸಕರನ್ನು ಸೆಳೆಯದಂತೆ ತಡೆಯುವುದು ಕಾಂಗ್ರೆಸ್ನ ತಂತ್ರ ಮತ್ತು ಉದ್ದೇಶವಾಗಿದೆ.
“ಕಾಂಗ್ರೆಸ್ ಶಾಸಕರ ಜೊತೆಗಿನ ಸಭೆ ಮತ್ತು ಉನ್ನತ ಮಟ್ಟದ ಸಭೆಗಳಲ್ಲಿ ಚರ್ಚೆಯಾದ ಬಳಿಕ, ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಶಾಸಕರನ್ನು ಬೆಂಗಳೂರಿಗೆ ಕಳಿಸಲಾಗಿದೆ. ಉಳಿದ ಶಾಸಕರನ್ನು ಹೈದರಾಬಾದ್ ಅಥವಾ ನವದೆಹಲಿಗೆ ಕರೆದೊಯ್ಯುವ ಸಾಧ್ಯತೆಯಿದೆ” ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಮಚಂದ್ರ ಕದಮ್ ಅವರು ರಾಜ್ಯಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿ ‘ಕುದುರೆ ವ್ಯಾಪಾರ’ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. “ತಮ್ಮ ಶಾಸಕರು ಯಾವುದೇ ಕಾರಣಕ್ಕೂ ಅಡ್ಡಮತದಾನ ಮಾಡುವುದಿಲ್ಲ,” ಎಂದು ಕದಮ್ ಹೇಳಿದ್ದಾರೆ.
#WATCH | Karnataka: 6 Odisha Congress MLAs reached Bengaluru last night and are staying in a private resort near Bidadi, Ramnagar. More details awaited.
— ANI (@ANI) March 13, 2026
Visuals from Bengaluru airport. pic.twitter.com/MGxrY49l5z
ಒಡಿಶಾದ ಕಾಂಗ್ರೆಸ್ ಶಾಸಕರಾದ ಮಂಗು ಖಿಲ್ಲಾ, ಪವಿತ್ರ ಸೌಂತಾ, ಕದ್ರಕಾ ಅಪ್ಪಲ ಸ್ವಾಮಿ, ರಾಜನ್ ಎಕ್ಕಾ ಮತ್ತು ಪ್ರಫುಲ್ಲ ಪ್ರಧಾನ್ ಬೆಂಗಳೂರಿಗೆ ಬಂದಿದ್ದಾರೆ. ಅವರೆಲ್ಲರನ್ನೂ ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ಗೆ ಕಳುಹಿಸಲಾಗಿದೆ. ಸೋಮವಾರ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಎಲ್ಲ ಶಾಸಕರು ಒಡಿಶಾಗೆ ಮರಳಲಿದ್ದಾರೆ.
ಇತ್ತ, ಬಿಜೆಡಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ತಮ್ಮ ಶಾಸಕರನ್ನು ಒಗ್ಗಟ್ಟಾಗಿ ಇರಿಸಲು ತಂತ್ರ ರೂಪಿಸಿದ್ದಾರೆ. ಶುಕ್ರವಾರದಿಂದ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ತಮ್ಮ ನಿವಾಸದಲ್ಲಿ ನಡೆಯಲಿರುವ ಎರಡು ಗಂಟೆಗಳ ಸಭೆಗೆ ಹಾಜರಾಗುವಂತೆ ಬಿಜೆಡಿ ಶಾಸಕರಿಗೆ ಪಟ್ನಾಯಕ್ ಪತ್ರ ಬರೆದಿದ್ದಾರೆ.
ಪಟ್ನಾಯಕ್ ಅವರ ಪತ್ರದ ಪ್ರಕಾರ, ರಾಜ್ಯಸಭಾ ಚುನಾವಣಾ ವಿಧಾನ ಮತ್ತು ಮತದಾನದ ಪ್ರಕ್ರಿಯೆಯ ಬಗ್ಗೆ ಶಾಸಕರಿಗೆ ತರಬೇತಿ ನೀಡಲಾಗುತ್ತದೆ. “ಒಡಿಶಾದಲ್ಲಿ 12 ವರ್ಷಗಳ ನಂತರ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ನಡೆಯುತ್ತಿದೆ. ಕಳೆದ ಬಾರಿ 2014ರ ಫೆಬ್ರವರಿಯಲ್ಲಿ ಚುನಾವಣೆ ನಡೆದಿತ್ತು. ಆ ಬಳಿಕ, ರಾಜಸಭಾ ಚುನಾವಣೆ ನಡೆಯದ ಕಾರಣ, ಅನೇಕ ಶಾಸಕರಿಗೆ ಮತದಾನದ ಪ್ರಕ್ರಿಯೆ ತಿಳಿದಿಲ್ಲ. ಆದ್ದರಿಂದ ಮತಗಳು ತಿರಸ್ಕೃತವಾಗದಂತೆ ಅವರಿಗೆ ತರಬೇತಿ ನೀಡುವುದು ಮುಖ್ಯವಾಗಿದೆ” ಎಂದು ಬಿಜೆಡಿ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಇಸ್ರೇಲ್ ದೋಸ್ತಿ; ಎಫೆಕ್ಟ್ ಮಾತ್ರ ಭಾರತಕ್ಕೆ!
ಒಡಿಶಾ ವಿಧಾನಸಭೆಯ ಸಂಖ್ಯಾಬಲದ ಪ್ರಕಾರ, ಉಳಿದ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಎರಡನ್ನು ಬಿಜೆಪಿ ಗೆಲ್ಲಲಿದೆ. ಬಿಜೆಡಿ ಒಂದು ಸ್ಥಾನವನ್ನು ಗೆಲ್ಲುವಷ್ಟು ಶಾಸಕರನ್ನು ಹೊಂದಿದೆ. ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯು ನಾಲ್ಕನೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗುತ್ತದೆ.
147 ಸದಸ್ಯರ ಒಡಿಶಾ ವಿಧಾನಸಭೆಯಲ್ಲಿ, ಆಡಳಿತಾರೂಢ ಬಿಜೆಪಿ 79 ಶಾಸಕರನ್ನು ಹೊಂದಿದ್ದು, ಮೂವರು ಪಕ್ಷೇತರ ಶಾಸಕರ ಬೆಂಬಲವನ್ನೂ ಹೊಂದಿದೆ. ಇತ್ತೀಚೆಗೆ, ಪಕ್ಷವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಇಬ್ಬರು ಶಾಸಕರನ್ನು ಅಮಾನತುಗೊಳಿಸಿದ ನಂತರ ಬಿಜೆಡಿ ಬಲ 48ಕ್ಕೆ ಇಳಿದಿದೆ. ಕಾಂಗ್ರೆಸ್ 14 ಮತ್ತು ಸಿಪಿಐ(ಎಂ) ಒಬ್ಬ ಶಾಸಕರನ್ನು ಹೊಂದಿದೆ. ಚುನಾವಣಾ ಆಯೋಗದ ಸೂತ್ರದ ಪ್ರಕಾರ, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಅಭ್ಯರ್ಥಿಗೆ ಕನಿಷ್ಠ 30 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.




