ಕುಟುಂಬದ ಸದಸ್ಯರು- ತಾಯಂದಿರು ದುಷ್ಟ ಗಂಡು ಮಕ್ಕಳನ್ನೂ ‘ರಾಜಾ ಬೇಟಾ’ ಎಂದು ಕುರುಡಾಗಿ ಮುದ್ದಿಸುತ್ತಾರೆ. ದೇಶದ ಈ ಭಾಗದಲ್ಲಂತೂ ಇದು ಸರ್ವೇಸಾಮಾನ್ಯ. ಇಂತಹ ವಿಕೃತ ವ್ಯಕ್ತಿ ಪುರುಷತ್ವ ಅಳಿಯುವ ತನಕ ಜೈಲಲ್ಲಿ ಕೊಳೆಯಬೇಕು ಎಂದು ಟೀಕಿಸಿದೆ ಪಂಜಾಬ್- ಹರಿಯಾಣ ಹೈಕೋರ್ಟ್.
ಐದು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನಿಗೆ 30 ವರ್ಷ ಸಜೆ ನೀಡಿದೆ ಪಂಜಾಬ್ ಹರಿಯಾಣ ಹೈಕೋರ್ಟು. ಅಷ್ಟೇ ಅಲ್ಲ, 30 ಲಕ್ಷ ರುಪಾಯಿಗಳ ಜುಲ್ಮಾನೆಯನ್ನು ಅತ್ಯಾಚಾರ-ಹತ್ಯೆಗೀಡಾದ ಮಗುವಿನ ಕುಟುಂಬಕ್ಕೆ ನೀಡುವಂತೆ ತಾಕೀತು ಮಾಡಿದೆ.
2025ರ ಮೇ 31ರಂದು ಮಗುವಿನ ತಂದೆಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ನೌಕರನೇ ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಮಗುವಿನ ತಂದೆ ಸಣ್ಣಪುಟ್ಟ ಟೆಂಟುಗಳನ್ನು ಹಾಕಿ ಹೊಟ್ಟೆ ಹೊರೆಯುತ್ತಿದ್ದ ವ್ಯಕ್ತಿ. ನೌಕರನು ಮಗುವನ್ನು ತನ್ನ ಮನೆಗೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿ ಅಡುಗೆಗೆ ಬಳಸುವ ಚಾಕುವಿನಿಂದ ಹತ್ಯೆಗೈದಿದ್ದಾನೆ. ತರುವಾಯ ಹಸುಳೆಯ ಮೃತ ದೇಹವನ್ನು ಅಡುಗೆ ಕೋಣೆಯ ದೊಡ್ಡ ಡಬ್ಬವೊಂದರಲ್ಲಿ ಅಡಗಿಸಿಟ್ಟಿದ್ದಾನೆ. ಈ ಹತ್ಯೆ ನಡೆದಾಗ ನೌಕರನ ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ದಳು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ
ಸುಳಿವು ತಿಳಿದ ಮಗುವಿನ ಪೋಷಕರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಹಸುಳೆಯಾಗಲಿ, ಮಗನಾಗಲಿ ಮನೆಯಲ್ಲಿಲ್ಲ ಎಂದು ಬಾಗಿಲಿಗೆ ಅಡ್ಡ ನಿಂತಳು ತಾಯಿ. ಅಂಗಳದಲ್ಲಿದ್ದ ಡಬ್ಬದಲ್ಲಿ ಹಸುಳೆಯ ದೇಹ ಪತ್ತೆಯಾಯಿತು. ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಲಾಗಿದೆ. ಅಪರಾಧಿಯ ರಕ್ಷಣೆಗೆ ಮುಂದಾದ ತಾಯಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಸಜೆ ವಿಧಿಸಲಾಯಿತು. ತಾಯಿ-ಮಗ ಇಬ್ಬರೂ ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದರು. ತಾಯಿಯು ಮಗನನ್ನು ವಹಿಸಿಕೊಳ್ಳುವ ಸಾಮಾಜಿಕ ಧೋರಣೆಯು ಪಂಜಾಬ್-ಹರಿಯಾಣ ಸೀಮೆಯ ಪುರುಷಾಧಿಪತ್ಯದ ಮನಸ್ಥಿತಿ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿದೆ ಎಂದು ಹೈಕೋರ್ಟ ಹೇಳಿತು.
“ತನ್ನ ರಾಜಾ ಬೇಟಾ ತಾನು ತಿಳಿದಂತೆ ಅಮಾಯನಕನಲ್ಲವೆಂದೂ, ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಾಗಿ ಗೊತ್ತಾದ ನಂತರವೂ ತಾಯಿ ಅವನ ರಕ್ಷಣೆಗೆ ನಿಂತಳು. ನಾಗರಿಕ ಸಮಾಜವೊಂದರಲ್ಲಿ ಇಂತಹ ಘಟನೆ ನಡೆಯುತ್ತಲೇ ಇರಲಿಲ್ಲ. ತನ್ನ ರಾಜಾ ಬೇಟಾನನ್ನು ಕಾಪಾಡಿಕೊಳ್ಳುವ ಬದಲಿಗೆ ಹಸುಳೆಗೆ ನ್ಯಾಯ ಒದಗಿಸಲು ಮುಂದಾಗಬೇಕಿತ್ತು ಈ ತಾಯಿ. ಈಕೆಯ ವರ್ತನೆ ಖಂಡನೀಯ. ಪುಟ್ಟ ಬಾಲಕಿಯು ಅಪಾದಿತನಲ್ಲಿ ಅಪರಿಮಿತ ವಿಶ್ವಾಸ ಇಟ್ಟಿದ್ದಳು. ಇತರೆ ಮಕ್ಕಳು ಮತ್ತು ಮಹಿಳೆಯರನ್ನು ಕಾಪಾಡಬೇಕಿದ್ದರೆ, ಅಪರಾಧಿಯು ಜೈಲಿನ ನಾಲ್ಕು ಗೋಡೆಗಳ ನಡುವೆ ಕೊಳೆಯಬೇಕು. ಈ ವಿಕೃತ ವ್ಯಕ್ತಿ, ತನ್ನ ಪುರುಷತ್ವ ಅಳಿಯುವ ತನಕವೂ ಬಂಧನದಲ್ಲೇ ಇರಬೇಕು” ಎಂದು ನ್ಯಾಯಾಲಯ ವಿಧಿಸಿದೆ.





