ನ್ಯಾಯಾಂಗವನ್ನೇ ದಿಗ್ಭ್ರಮೆಗೊಳಿಸುವಂತಹ ವರದಿಯೊಂದನ್ನು ಜಾರ್ಖಂಡ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ಸುಮಾರು 1 ಕೋಟಿ ರೂ. ಮೌಲ್ಯದ 200 ಕೆ.ಜಿ. ಗಾಂಜಾವನ್ನು ಇಲಿಗಳು ನಾಶಪಡಿಸಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರ ವರದಿ ಕಂಡು ಕೋರ್ಟ್ ದಿಗ್ಭ್ರಮೆ ವ್ಯಕ್ತಪಡಿಸಿದೆ. ಮಾದಕವಸ್ತು ಪ್ರಕರಣದ ಪ್ರಮುಖ ಆರೋಪಿಯನ್ನು ಖುಲಾಸೆಗೊಳಿಸಿದೆ.
2022ರ ಜನವರಿಯಲ್ಲಿ, ರಾಂಚಿ ಬಳಿಯ ರಾಷ್ಟ್ರೀಯ ಹೆದ್ದಾರಿ-20ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ 200 ಕೆ.ಜಿ ಗಾಂಜಾವನ್ನು ಓರ್ಮಾಂಜಿ ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೆ, ಗಾಂಜಾವನ್ನು ಸಾಗಿಸುತ್ತಿದ್ದ ಬಿಹಾರದ ವೈಶಾಲಿ ಜಿಲ್ಲೆಯ ಬಿರ್ಪುರ್ ಗ್ರಾಮದ ನಿವಾಸಿ ಇಂದ್ರಜಿತ್ ರೈ ಅಲಿಯಾಸ್ ಅನುರ್ಜೀತ್ ರೈ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದರು.
ಬಂಧಿತ ಇಂದ್ರಜಿತ್ ರೈ ವಿರುದ್ಧ NDPS ಕಾಯ್ದೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಚಾರ್ಜ್ಶೀಟ್ಅನ್ನು ಪೊಲೀಸರು ಸಲ್ಲಿಸಿದ್ದರು. ಆದಾಗ್ಯೂ, ವಿಚಾರಣೆ ಮುಂದುವರೆದಂತೆ, ಪ್ರಕರಣವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಲಾರಂಭಿಸಿತು. ಗಾಂಜಾವನ್ನು ವಶಪಡಿಸಿಕೊಂಡ ಸಮಯ, ಸ್ಥಳ ಹಾಗೂ ವಿಧಾನದ ಬಗ್ಗೆ ಸಾಕ್ಷಿಗಳ ಸಾಕ್ಷ್ಯಗಳು ವಿರೋಧಾಭಾಸಗಳಿಂದ ತುಂಬಿದ್ದವು. ಆಘಾತಕಾರಿ ಸಂಗತಿಯೆಂದರೆ, ಆರೋಪಿಯನ್ನು ಯಾರು ಬಂಧಿಸಿದರು, ವಾಹನವನ್ನು ಯಾವ ಸ್ಥಳದಲ್ಲಿ ತಡೆಹಿಡಿಯಲಾಯಿತು, ಶೋಧ ಕಾರ್ಯಾಚರಣೆ ಎಷ್ಟು ಸಮಯದವರೆಗೆ ನಡೆಯಿತು ಎಂಬುದನ್ನು ಯಾವುದೇ ಸಾಕ್ಷಿಗಳು ಸ್ಪಷ್ಟವಾಗಿ ವಿವರಿಸಲಿಲ್ಲ.
ಇದೆಲ್ಲದರ ನಡುವೆ, ವಶಕ್ಕೆ ಪಡೆಯಲಾಗಿದ್ದ ಗಾಂಜಾವನ್ನು ಮಲ್ಖಾನಾದಲ್ಲಿ ಸಂಗ್ರಹಿಸಿದ್ದೆವು. ಆದರೆ, ಆ ಗಾಂಜಾವನ್ನು ಇಲಿಗಳು ನಾಶಪಡಿಸಿವೆ ಎಂದು ಪೊಲೀಸರು ಈಗ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದು, ಪ್ರಾಸಿಕ್ಯೂಷನ್ಗೆ ಭಾರೀ ಹಿನ್ನಡೆಯನ್ನು ಉಂಟುಮಾಡಿದೆ. ಪೊಲೀಸರ ವಿವರಣೆಯಿಂದ ಆಶ್ಚರ್ಯಗೊಂಡ ನ್ಯಾಯಾಲಯವು, ‘ಇದೊಂದು ತೀವ್ರ ನಿರ್ಲಕ್ಷ್ಯ ಪ್ರಕರಣ’ ಎಂದು ಕರೆದಿದೆ. ವಶಪಡಿಸಿಕೊಂಡ ವಸ್ತುಗಳನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲವಾದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಈ ಲೇಖನ ಓದಿದ್ದೀರಾ?: ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!
“ವಶಪಡಿಸಿಕೊಳ್ಳಲಾದ ವಾಹನವು ಆರೋಪಿಗೆ ಸಂಬಂಧಿಸಿದ್ದು ಎಂಬುದನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ವಶಪಡಿಸಿಕೊಳ್ಳುವಿಕೆ, ಸಂಗ್ರಹಣೆ ಮತ್ತು ಅನುಸರಿಸಬೇಕಾದ ಕಾರ್ಯವಿಧಾನಗಳಲ್ಲಿ ಸ್ಪಷ್ಟ ಲೋಪಗಳು ಕಂಡುಬಂದಿವೆ. ಪ್ರಕರಣದಲ್ಲಿ ಯಾವುದೇ ವಸ್ತು ಪುರಾವೆಗಳು ಉಳಿದಿಲ್ಲ. ಯಾವುದೇ ಸ್ಪಷ್ಟ ಪುರಾವೆಗಳಿಲ್ಲದ ಈ ಪ್ರಕರಣದಲ್ಲಿ ಅನುಮಾನದ ಲಾಭವು ಆರೋಪಿಗೆ ದೊರಕುತ್ತದೆ” ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ಆರೋಪಿ ಇಂದ್ರಜಿತ್ ರೈ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ಅಲ್ಲದೆ, ಪೊಲೀಸರ ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೋರ್ಟ್, “ಕಾನೂನು ಜಾರಿ ಸಂಸ್ಥೆಗಳು ಹೆಚ್ಚಿನ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಾಗ, ಅವುಗಳನ್ನು ಹೇಗೆ ಸಗ್ರಹಿಸುತ್ತವೆ ಮತ್ತು ರಕ್ಷಿಸುತ್ತವೆ” ಎಂದು ಪ್ರಶ್ನಿಸಿದೆ.




