ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮೃತಪಟ್ಟವರು ತಮ್ಮ ಕುಟುಂಬಗಳಿಗೆ ಆಧಾರಸ್ತಂಭರಾಗಿದ್ದರು. ಈ ದುರ್ಘಟನೆಯಿಂದ ಹಲವಾರು ಮನೆಗಳಲ್ಲಿ ದುಃಖ ಮಡುಗಟ್ಟಿದೆ. ಮೃತರ ಪೈಕಿ ಯುವಕರು, ಟ್ಯಾಕ್ಸಿ ಚಾಲಕರು, ಕಂಡಕ್ಟರ್ ಸೇರಿದ್ದಾರೆ.
ಮೃತರ ಪೈಕಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಜಿಂಝಾನಾ ಪಟ್ಟಣದ 18 ವರ್ಷದ ನೌಮನ್ ಅನ್ಸಾರಿ ಎಂಬ ಯುವಕರೊಬ್ಬರು ಸೇರಿದ್ದಾರೆ. ಅನ್ಸಾರಿ ಕುಟುಂಬದ ಆಧಾರ ಸ್ತಂಭವಾಗಿದ್ದ. ತನ್ನ ಅಂಗಡಿಗೆ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಸೋದರ ಸಂಬಂಧಿ ಅಮನ್ ಜೊತೆ ದೆಹಲಿಗೆ ಆಗಮಿಸಿದ್ದರು. ಸ್ಫೋಟದ ಸ್ಥಳದಲ್ಲೇ ಮೃತಪಟ್ಟರು. ಅಮನ್ ಗಂಭೀರವಾಗಿ ಗಾಯಗೊಂಡಿದ್ದು, ಲೋಕನಾಯಕ್ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಬ್ಬ ಸಂತ್ರಸ್ತ ಪಂಕಜ್ ಸಾಹ್ನಿ (22), ಮೂರು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ, ಅವರು ಓಡಿಸುತ್ತಿದ್ದ ವ್ಯಾಗನಾರ್ ಕಾರು ಸಂಪೂರ್ಣ ಹಾನಿಗೊಳಗಾಗಿದೆ ಎಂದು ಸಂಬಂಧಿಕ ರಾಮದೇವ್ ಕಣ್ಣೀರಿನೊಂದಿಗೆ ವಿವರಿಸಿದರು. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಡಿಟಿಸಿ ಕಂಡಕ್ಟರ್ ಅಶೋಕ್ ಕುಮಾರ್ (34) ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶವಾಗಾರದ ಬಳಿ ಕಾಯುತ್ತಿರುವ ಸಂಬಂಧಿಕರ ದೃಶ್ಯಗಳು ಹೃದಯ ವಿದ್ರಾವಕವಾಗಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?
ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮ್ ಪ್ರತಾಪ್, ಬಿಹಾರ ಮೂಲದವರು ಮತ್ತು ರಸ್ತೆಬದಿ ತಿನಿಸು ಅಂಗಡಿಯ ಮಾಲೀಕರು. ಅವರು ಘಟನೆಯನ್ನು ನೆನಪಿಸಿಕೊಳ್ಳುತ್ತಾ, “ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ಮೃತದೇಹಗಳು, ಸುರಿಯುತ್ತಿದ್ದ ರಕ್ತ… ನಾವು ಸಾವನ್ನು ಅತಿ ಹತ್ತಿರದಿಂದ ಅನುಭವಿಸಿದ್ದೇವೆ” ಎಂದು ನಡುಗುತ್ತಾ ಹೇಳಿದರು. ಅವರ ಬಲಗೈಗೆ ಗಂಭೀರ ಗಾಯವಾಗಿದ್ದು, ಸ್ಫೋಟದ ನಂತರ ಹೊಗೆ ಮತ್ತು ಕಿರುಚಾಟಗಳ ನಡುವೆ ಏನೂ ಕೇಳಿಸದ ಸ್ಥಿತಿಯಲ್ಲಿದ್ದೆವು ಎಂದರು.
ಅದೇ ರೀತಿ, ಟ್ಯಾಂಕರ್ ಮಾಲೀಕ ವಿಜೇಂದರ್ ಯಾದವ್ ಕೂಡ ಭಯಾನಕ ದೃಶ್ಯಗಳನ್ನು ವಿವರಿಸಿದರು. “ಸ್ಫೋಟದ ಆಘಾತಕ್ಕೆ ನೆಲಕ್ಕೆ ಬಿದ್ದೆ, ಮೇಲೆದ್ದಾಗ ಬಟ್ಟೆಗಳು ರಕ್ತಮಯವಾಗಿದ್ದವು. ರಸ್ತೆಯಲ್ಲಿ ಗಾಜಿನ ಚೂರುಗಳು ಮತ್ತು ಮೃತದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು. ನಾನು ಬದುಕುಳಿದದ್ದೇ ಪವಾಡ” ಎಂದು ಹೇಳಿದರು. ಬಿಹಾರದವರಾದ ಅವರು ಎರಡು ದಶಕಗಳಿಂದ ನೀರು ಸರಬರಾಜು ವ್ಯವಹಾರದಲ್ಲಿದ್ದು, ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.
ಕಾರು ರಾಜಧಾನಿ ಪ್ರವೇಶಿಸಿದ್ದು ಹೇಗೆ? ಮತ್ತೊಮ್ಮೆ ಬಯಲಾದ ಕೇಂದ್ರದ ಭದ್ರತಾ ವೈಫಲ್ಯ
ಈ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ಮತ್ತು ಗುಪ್ತಚರ ವ್ಯವಸ್ಥೆಯ ಗಂಭೀರ ವೈಫಲ್ಯಗಳು ಬೆಳಕಿಗೆ ಬಂದಿವೆ. ಫರೀದಾಬಾದ್ನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರವೂ, ಶಂಕಿತನು 2,900 ಕೆ.ಜಿ ಸ್ಫೋಟಕಗಳೊಂದಿಗೆ ಕಾರನ್ನು ದೆಹಲಿಯ ಮಧ್ಯಭಾಗಕ್ಕೆ ತಂದು ಮೂರು ಗಂಟೆಗಳ ಕಾಲ ಪಾರ್ಕ್ ಮಾಡಿಟ್ಟಿದ್ದು ಹೇಗೆ? ಇದು ‘ವೈಟ್ ಕಾಲರ್ ಭಯೋತ್ಪಾದಕ ಜಾಲ’ದ ಚಟುವಟಿಕೆಗಳನ್ನು ತಡೆಯಲು ಸರ್ಕಾರದ ಗುಪ್ತಚರ ವಿಭಾಗದ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ರಾಜಧಾನಿಯ ಭದ್ರತಾ ಕ್ರಮಗಳು ದುರ್ಬಲವಾಗಿದ್ದು, ಸಾರ್ವಜನಿಕರ ಜೀವಗಳನ್ನು ಅಪಾಯಕ್ಕೆ ತಳ್ಳಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಈ ವೈಫಲ್ಯಕ್ಕೆ ಉತ್ತರ ನೀಡಬೇಕಿದೆ.





