ಅಂಗ ವೈಕಲ್ಯತೆಗೆ ತುತ್ತಾಗಿದ್ದ ವಿಶೇಷಚೇತನ ವ್ಯಕ್ತಿಯ ಮೇಲೆ ಸಂಬಂಧಿಕರೇ ಹಲ್ಲೆಗೈದು, ಆತನ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ರೈಸನ್ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ; ಪೆಟ್ರೋಲ್ ಪಂಪ್ವೊಂದರ ಬಳಿ ಸಂತ್ರಸ್ತನ ಮೇಲೆ ಆರೋಪಿಗಳಾದ ರಾಜ್ಕುಮಾರ್ ಲೋವಂಶಿ ಮತ್ತು ಗೋವಿಂದ್ ಲೋವಂಶಿ ಎಂಬವರು ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ಅಲ್ಲದೆ, ಹಲವಾರು ಜನರು ಘಟನೆಯನ್ನು ನೋಡುತ್ತಾ ನಿಂತಿರುವುದು ಮತ್ತು ಕೆಲವರು ಘಟನೆಯನ್ನು ಚಿತ್ರೀಕರಿಸಿರುವುದು ಕಂಡುಬಂದಿದೆ. ಆದರೆ, ಯಾರೊಬ್ಬರೂ ಸಂತ್ರಸ್ತನ ಸಹಾಯಕ್ಕೆ ಬಂದಿಲ್ಲ. ಅಲ್ಲಿದ್ದವರು ವರ್ತನೆಯನ್ನೂ ನೆಟ್ಟಿಗರು ಖಂಡಿಸಿದ್ದಾರೆ.
ದೌರ್ಜನ್ಯ ಎಸಿಗಿದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮತ್ತು ಸಂತ್ರಸ್ತ ಇಬ್ಬರೂ ಭತ್ತ ಮಾರಾಟ ಮಾಡಲು ಒಟ್ಟಿಗೆ ಹೋಗಿದ್ದರು. ಮದ್ಯ ಸೇವಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ, ದಾರಿ ಮಧ್ಯೆ, ಅವರ ನಡುವೆ ವಾಗ್ವಾದ ಶುರುವಾಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ನೆಲಕ್ಕೆ ಬಿದ್ದಾಗ, ಆರೋಪಿಗಳಲ್ಲಿ ಒಬ್ಬ ಸಂತ್ರಸ್ತನ ಮೇಲೆ ಹತ್ತಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಆರೋಪಿಯನ್ನು ದೂರ ಎಳೆಯಲು ಯತ್ನಿಸಿದ್ದಾನೆ.
“ಸಂತ್ರಸ್ತ ವ್ಯಕ್ತಿಯು ಆರೋಪಿಗಳ ಸಂಬಂಧಿಯೇ ಆಗಿದ್ದಾರೆ. ಅವರು ಭತ್ತ ಮಾರಾಟ ಮಾಡಿ, ಹಣ ಪಡೆದು, ಮದ್ಯ ಸೇವಿಸಿದ್ದರು. ಅವರ ನಡುವಿನ ಜಗಳವು ಅಮಾನವೀಯ ಕೃತ್ಯಕ್ಕೆ ಕಾರಣವಾಗಿದೆ” ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಶೀಲಾ ಸುರಾನಾ ಹೇಳಿದ್ದಾರೆ.
ಘಟನೆಯು ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದಾರೆ.
“ಹಿಂದೆ, ಬಿಜೆಪಿ ನಾಯಕರು ಜನರ ಮೇಲೆ ಮೂತ್ರ ವಿಸರ್ಜಿಸುತ್ತಿದ್ದರು. ಈಗ ಅವರು ಎಲ್ಲರಲ್ಲೂ ಅದೇ ಪ್ರವೃತ್ತಿಯನ್ನು ತುಂಬಿದ್ದಾರೆ” ಎಂದು ದೂರಿದ್ದಾರೆ.
“ಇಲ್ಲಿ ಕಾನೂನು ಎಂಬುದೇ ಇಲ್ಲ, ಗೃಹ ಸಚಿವಾಲಯವಿಲ್ಲ, ಗೃಹ ಸಚಿವರೂ ಇಲ್ಲ. ಪೊಲೀಸರನ್ನು ಕೊಲೆ ಮಾಡಲಾಗುತ್ತಿದೆ, ದಾಳಿ ಮಾಡಲಾಗುತ್ತಿದೆ ಹಾಗೂ ಭ್ರಷ್ಟಾಚಾರದಲ್ಲಿ ಸಿಲುಕಿಸಲಾಗುತ್ತಿದೆ. ಪದೇ ಪದೇ ಜನರ ಮೇಲೆ ಮೂತ್ರ ವಿಸರ್ಜಿಸುವ ಘಟನೆಗಳು ಮಧ್ಯಪ್ರದೇಶದಲ್ಲಿ ಮಾತ್ರ ನಡೆಯುತ್ತಿವೆ” ಎಂದು ಕಿಡಿಕಾರಿದ್ದಾರೆ.
2023ರಲ್ಲಿ, ವೈರಲ್ ಆಗಿದ್ದ ವೀಡಿಯೊದಲ್ಲಿ ಬಿಜೆಪಿ ನಾಯಕನೊಬ್ಬ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುತ್ತಿರುವುದು ಕಂಡುಬಂದಿತ್ತು. ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಗುರಿಯಾಗಿತ್ತು.




