ಪಾಕಿಸ್ತಾನದ ಪರ ಗೂಢಚಾರಿಕೆ ಮಾಡಿ ದೇಶದ್ರೋಹ ಎಸಗಿದ ಆರೋಪದಲ್ಲಿ ಐಎಎಫ್ನ ನಿವೃತ್ತ ಅಧಿಕಾರಿ ಕುಲೇಂದ್ರ ಶರ್ಮ ಎಂಬಾತನನ್ನು ಅಸ್ಸಾಂನ ತೇಜ್ಪುರದಲ್ಲಿ ಬಂಧಿಸಲಾಗಿದೆ. ಇನ್ನೂ ನಾಲ್ವರನ್ನು ಕಳೆದ ಕೆಲವು ದಿನಗಳಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ದೇಶದ ವಿರುದ್ಧ ಯುದ್ಧಕ್ಕೆ ಬೆಂಬಲಿಸುವುದು, ಕ್ರಿಮಿನಲ್ ಪಿತೂರಿ, ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವುದು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಕ್ಕಾಗಿ ಅಸ್ಸಾಂನ ಕುಲೇಂದ್ರ ಶರ್ಮ ವಿರುದ್ಧ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನದ ಪರ ಬೇಹುಗಾರಿಕೆ; ಗುಜರಾತ್ನ ಸಹದೇವ್ ಗೋಹಿಲ್ ಬಂಧನ
ಈ ಬಗ್ಗೆ ಮಾಹಿತಿ ನೀಡಿದ ಸೋನಿತ್ಪುರ ಜಿಲ್ಲಾ ಡಿಎಸ್ಪಿ (ಗಡಿ) ಹರಿಚರಣ್ ಭೂಮಿಜ್, “ಶರ್ಮ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶರ್ಮ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯೊಂದಿಗೆ ಸೂಕ್ಷ್ಮ ರಕ್ಷಣಾ ಸಂಬಂಧಿತ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದು ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದೆ. ಸದ್ಯ ಶರ್ಮ ಮಾಹಿತಿ ಹಂಚಿಕೊಂಡವರು ಯಾರು ಎಂಬ ಬಗ್ಗೆ ಗುರುತನ್ನು ಪರಿಶೀಲಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಗೂಢಚಾರಿಕೆಯ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆ ಪೈಕಿ ಮೂವರು ಕಾಶ್ಮೀರದ ಕುಪ್ವಾರಾ ಜಿಲ್ಲೆಯವರಾಗಿದ್ದರೆ, ನಾಲ್ಕನೆ ಆರೋಪಿಯ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಶರ್ಮಗೆ ವಾಟ್ಸಾಪ್ನಿಂದ ಯಾರೋ ಸೂಚನೆಗಳನ್ನು ಕಳುಹಿಸಿದ್ದು, ಆ ಸೂಚನೆಯಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ಶರ್ಮ ತನ್ನ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಹಂಚಿಕೊಂಡಿರುವುದು ಬಹಿರಂಗವಾಗಿದೆ. ವಶಪಡಿಸಿಕೊಂಡ ಮೊಬೈಲ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದೂ ಡಿಎಸ್ಪಿ ಭೂಮಿಜ್ ಹೇಳಿದರು.
2002ರಲ್ಲಿ ಐಎಎಫ್ನಿಂದ ನಿವೃತ್ತರಾದ ಶರ್ಮ, ತೇಜ್ಪುರ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡಿದ್ದು, ಮೂರು ವರ್ಷಗಳ ಹಿಂದೆ ಕೆಲಸ ತೊರೆದಿದ್ದಾರೆ. ತೇಜ್ಪುರವು ಸೈನ್ಯದ IV ಕಾರ್ಪ್ಸ್ನ ಪ್ರಧಾನ ಕಚೇರಿಯಾಗಿದ್ದು, ತವಾಂಗ್ ಗಡಿ ಸೇರಿದಂತೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ವಿಶಾಲ ಭಾಗಗಳಲ್ಲಿ ಕಾರ್ಯಾಚರಣೆಯ ವ್ಯಾಪ್ತಿಯಿದೆ. ತೇಜ್ಪುರದ ಹೊರವಲಯದಲ್ಲಿರುವ ಸಲೋನಿಬಾರಿಯಲ್ಲಿ, IAFನ ಸುಖೋಯ್ ನೆಲೆ ಇದೆ.





