ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆತ ಪ್ರಕರಣಕ್ಕೆ ವಾರದಷ್ಟು ಮುನ್ನವೇ ಬಲಪಂಥೀಯ ಯೂ ಟ್ಯೂಬರ್ ಗಳು ಗವಾಯಿ ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ‘ಹಿಂದೂಗಳನ್ನು’ ಪ್ರಚೋದಿಸಿದ್ದ ವಿವರಗಳು ಬೆಳಕಿಗೆ ಬಂದಿವೆ.
ಮುಖ್ಯ ನ್ಯಾಯಮೂರ್ತಿಯವರ ತಲೆಬುರುಡೆಯನ್ನು ಸೀಳಿ ಹೋಗುವಂತೆ ಜಜ್ಜಬೇಕು, ಅವರ ಮುಖಕ್ಕೆ ಉಗಿಯಬೇಕು, ಅವರ ಕಾರಿಗೆ ಮುತ್ತಿಗೆ ಹಾಕಬೇಕು ಎಂದೆಲ್ಲ ವಕೀಲರನ್ನು ಪ್ರಚೋದಿಸಲಾಗಿದೆ. ಕೊಳೆಗೇರಿಯಿಂದ ಬಂದವರೆಂದು ತೆಗಳಲಾಗಿದೆ.
ಇವರ ಮಾತುಗಳು ಅಪ್ಪಟ ದ್ವೇಷಭಾಷಣಗಳು, ಪ್ರಚೋದನೆಯ ಪರಮಾವಧಿ. ಕಾನೂನಿನ ಆಳ್ವಿಕೆಗೆ ಎಸೆದ ನೇರ ಸವಾಲು. ಸಂವಿಧಾನ ರಚಿಸಿರುವುದೇ ಬದಲಾಯಿಸಲು ಎನ್ನುತ್ತಾರೆ.
ಎಂಟು ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋಗೆ CJI Vs Sleeping Hindus ಎಂಬ ಶೀರ್ಷಿಕೆ ನೀಡಲಾಗಿದೆ.
ಬಲಪಂಥೀಯ ಯೂ ಟ್ಯೂಬರ್ ಅಜೀತ್ ಭಾರತಿ ಅವರು ಮತ್ತಿಬ್ಬರು ಕಟ್ಟರ್ ಬಲಪಂಥೀಯರಾದ ಕೌಶಲೇಶ್ ರಾಯ್ ಮತ್ತು ಬಲಪಂಥೀಯ ಅಂತರ್ಜಾಲ ತಾಣ ‘ಓಪ್ ಇಂಡಿಯಾ’ ಸಂಪಾದಕ ಅನುಪಮ್ ಸಿಂಗ್ ಜೊತೆ ಸೇರಿ ಈ ಚರ್ಚೆ ನಡೆಸಲಾಗಿದೆ.
“ತಮ್ಮನ್ನು ಯಾರೂ ಮುಟ್ಟಲಾಗುವುದಿಲ್ಲವೆಂದು ಎಂದು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಮುಖ್ಯನ್ಯಾಯಮೂರ್ತಿ. ನಮ್ಮ ಸಹನೆಯನ್ನು ಪರೀಕ್ಷಿಸಲಾಗುತ್ತಿದೆ. ಹಿಂದುಗಳು ತಮ್ಮ ಮಹಿಮೆಯನ್ನು ಅವರಿಗೆ ತೋರಿಸಬೇಕು”.
“ನಾನು ಕಟ್ಟರ್ ಗಾಂಧೀವಾದಿ. ಹಿಂಸೆಯನ್ನು ಬೆಂಬಲಿಸುವುದಿಲ್ಲ. ಒಂದು ವೇಳೆ ನಾನು ಹಿಂಸೆಯನ್ನು ಬೆಂಬಲಿಸಿದ್ದೇ ಆಗಿದ್ದಲ್ಲಿ, ಗವಾಯಿ ಅವರು ಕೋರ್ಟ್ ಹೌಸ್ ನಲ್ಲಿರುತ್ತಾರೆ. ಅವರು ಜಗಳಕ್ಕೆ ಬಿದ್ದರೆ, ಅಲ್ಲಿ ಹಿಂದೂ ಲಾಯರುಗಳು ಇದ್ದಾರೆ. ಕನಿಷ್ಠ ಪಕ್ಷ ಒಬ್ಬ ಹಿಂದೂ ಲಾಯರ್ ಗವಾಯಿ ಅವರ ತಲೆಬುರುಡೆ ಹಿಡಿದು ಅದು ಎರಡು ಭಾಗ ಆಗುವಂತೆ ಅದನ್ನು ಗೋಡೆಗೆ ಜಜ್ಜಬೇಕು. ಆದರೆ ನಾನು ಹಿಂಸೆಯನ್ನು ಬೆಂಬಲಿಸುವುದೇ ಇಲ್ಲ” ಎಂದು ಕೌಶಲೇಶ್ ಹೇಳುತ್ತಾರೆ.
ಈ ಹಂತದಲ್ಲಿ ಗವಾಯಿ ಅವರ ಕಾರಿಗೆ ಮುತ್ತಿಗೆ ಹಾಕಬೇಕೆಂದು ಅಜೀತ್ ಭಾರತಿ ಸಲಹೆ ನೀಡುತ್ತಾರೆ.
ಕೌಶಲೇಶ್ ರಾಯ್ ಮುಂದುವರೆದು ಹೇಳುತ್ತಾರೆ- “ಅಕ್ಟೋಬರ್ ಎರಡರ ಗಾಂಧೀ ಜಯಂತಿ ಹತ್ತಿರ ಬರುತ್ತಿದೆ. ಗೋಡ್ಸೆ ಮಾಡಿದ್ದನ್ನು ಮಾಡುವ ಸಾಮರ್ಥ್ಯವಂತೂ ನಿಮಗಿಲ್ಲ. ಗೋಡ್ಸೆ ಆಗುವ ಯೋಗ್ಯತೆ ನಿಮಗಿಲ್ಲ. ಗಾಂಧೀ ಆದರೂ ಆಗಿ. ಗವಾಯಿ ಮುಖದ ಮೇಲೆ ಉಗುಳಿಬಿಡಿ… ಮುಖಕ್ಕೆ ಉಗುಳಿದರೆ ಐಪಿಸಿಯ (ಇಂಡಿಯನ್ ಪೀನಲ್ ಕೋಡ್) ಪ್ರಕಾರ ಏನು ಮಹಾ ಶಿಕ್ಷೆಯಾಗಬಹುದು? ಆರು ತಿಂಗಳ ಸಜೆ ಆದೀತು. ಅದಕ್ಕಿಂತ ಹೆಚ್ಚಿರಲಾರದು. ಹಿಂದೂಗಳು ಇಷ್ಟನ್ನು ಕೂಡ ಮಾಡಲಾರರೇನು?”
ಅಜೀತ್ ಭಾರತಿ- “ಗವಾಯಿ ಮುಖ್ಯನ್ಯಾಯಮೂರ್ತಿ ಆದಾಗ ಉಕ್ಕಿನ ಹಸ್ತದಿಂದ ನಡೆಸಿಕೊಳ್ಳಬೇಕೆಂದು ಹಿಂದೂವಾದಿಗಳ ಕುರಿತು ಹೇಳಿದ್ದರು. ನಾವು ಈತನನ್ನು ಡೈಮಂಡ್ ಹ್ಯಾಂಡ್ ನಿಂದ ನಡೆಸಿಕೊಳ್ಳೋಣ. ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ ಈ ನ್ಯಾಯಮೂರ್ತಿಗಳು. ಮೈಲಾರ್ಡ್ ಎಂದು ತಮ್ಮನ್ನು ತಾವೇ ಕರೆಯಿಸಿಕೊಳ್ಳುತ್ತಾರೆ”.
ಇದನ್ನೂ ಓದಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
ಕೌಶಲೇಶ್ ರಾಯ್- “ಜಾತಿಪದ್ಧತಿ ತಪ್ಪೆಂದು ನಿತ್ಯ ಭಾಷಣ ಹೊಡೆಯುತ್ತಾರೆ ಸಿಜೆಐ ನ್ಯಾಯಾಂಗದಲ್ಲಿ ಜಾತಿಪದ್ಧತಿ, ಸಾಮಂತವಾದ ಕುರಿತು ಯಾರೂ ತುಟಿ ಬಿಚ್ಚುವುದಿಲ್ಲ. ಅವರ ಪಾಳೇಗಾರಶಾಹಿ ಎಷ್ಟಿದೆಯೆಂದರೆ ಸುಪ್ರೀಮ್ ಕೋರ್ಟಿನಲ್ಲಿ ಯಾರೂ ಹಿಂದೀ ಮಾತಾಡುವಂತೆ ಕೂಡ ಇಲ್ಲ”.
ಉಮರ್ ಖಾಲಿದ್ ಅಂತಹ ಜನಪರ ವ್ಯಕ್ತಿಯ ಮೇಲೆ ಕರಾಳ ಕಾಯಿದೆಯಡಿ ಕೇಸು ಹಾಕಿ ಜಾಮೀನನ್ನು ಕೂಡ ತಿರಸ್ಕರಿಸಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯಿಸಲಾಗುತ್ತಿದೆ. ಆದರೆ ಈ ಗೋಡ್ಸೆ ಆರಾಧಕರ ಪ್ರಚೋದನಕಾರಿ ಕೃತ್ಯಗಳನ್ನು ನಿರ್ಲಕ್ಷಿಸಲಾಗಿದೆ.





