ಉತ್ತರಾಖಂಡದ ಕೋಟ್ದ್ವಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಕಿರುಕುಳ ನೀಡಿದಾಗ ವೃದ್ಧ ಮುಸ್ಲಿಂ ವ್ಯಾಪಾರಿಯ ಪರವಾಗಿ ನಿಂತ ಜಿಮ್ ಮಾಲಕ ದೀಪಕ್ ಕುಮಾರ್ ಅವರನ್ನು ಹತ್ಯೆ ಮಾಡಿದ ವ್ಯಕ್ತಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಆರೋಪದ ಮೇಲೆ ಉತ್ತರಾಖಂಡ ಪೊಲೀಸರು ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೀಪಕ್ ಕುಮಾರ್ ಅವರ ದೂರಿನ ಮೇರೆಗೆ ರವಿವಾರ ತಡರಾತ್ರಿ ಬಿಎನ್ಎಸ್ ಸೆಕ್ಷನ್ 351 (3)ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
“ನಾನು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಗಮನಿಸಿದ್ದೇನೆ. ಅದರಲ್ಲಿ ಒಬ್ಬ ವ್ಯಕ್ತಿ ನನಗೆ ಬೆದರಿಕೆ ಹಾಕುತ್ತಿರುವುದು ಮತ್ತು ನನ್ನನ್ನು ಹತ್ಯೆ ಮಾಡುವವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸುತ್ತಿರುವುದು ಕಂಡುಬಂದಿದೆ. ಕೊಲೆ ಬೆದರಿಕೆಯಿಂದಾಗಿ ನಾನು ಮತ್ತು ನನ್ನ ಕುಟುಂಬ ಭಯದಲ್ಲಿ ಜೀವನ ನಡೆಸುತ್ತಿದೆ. ಈ ವೀಡಿಯೊ ಫೇಸ್ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ” ಎಂದು ದೀಪಕ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?
ವೈರಲ್ ವೀಡಿಯೊದಲ್ಲಿ, ಹಣೆಯ ಮೇಲೆ ತಿಲಕ ಇಟ್ಟಿರುವ ವ್ಯಕ್ತಿ ಎಡಗೈಯಲ್ಲಿ 500 ಮುಖಬೆಲೆಯ ನೋಟುಗಳ ಬಂಡಲ್ ಹಿಡಿದಿರುವುದು ಕಂಡು ಬಂದಿದೆ. ಮುಹಮ್ಮದ್ ದೀಪಕ್ ನನ್ನು ಹತ್ಯೆ ಮಾಡಿ ಆತನಿಗೆ ಸನಾತನ ಧರ್ಮದ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುವವರಿಗೆ 2 ಲಕ್ಷ ನೀಡಲಾಗುವುದು ಎಂದು ಆತ ವೀಡಿಯೊದಲ್ಲಿ ಹೇಳುವುದು ಕಂಡು ಬಂದಿದೆ.
“ದೀಪಕ್ ಕುಮಾರ್ ನೀಡಿದ ದೂರು ಆಧರಿಸಿ ನಾವು ಎಫ್ಐಆರ್ ದಾಖಲಿಸಿದ್ದೇವೆ. ವೀಡಿಯೊದಲ್ಲಿ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿ ಉತ್ಕರ್ಷ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಕುರಿತು ನಾವು ಮುಂದಿನ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ” ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಮೋಹನ್ ಸಿಂಗ್ ಹೇಳಿದ್ದಾರೆ.
ಜನವರಿ 26ರಂದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಮುಸ್ಲಿಂ ವ್ಯಾಪಾರಿಯ ಮಳಿಗೆಗೆ ಬಂದು ‘ಬಾಬಾ’ ಹೆಸರನ್ನು ಕೈಬಿಡುವಂತೆ ಕಿರುಕುಳ ನೀಡುತ್ತಿದ್ದ ಬಜರಂಗದಳದ ಕಾರ್ಯಕರ್ತರನ್ನು ದೀಪಕ್ ಒಬ್ಬಂಟಿಯಾಗಿ ಎದುರಿಸಿದ್ದರು. ಘರ್ಷಣೆಯ ವೇಳೆ ತನ್ನ ಹೆಸರು ಕೇಳಿದವರಿಗೆ “ಮುಹಮ್ಮದ್ ದೀಪಕ್” ಎಂದು ಅವರು ಹೇಳಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು





