ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ನ ರೋಪರ್ ರೇಂಜ್ನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಹುದ್ದೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿದೆ. ಆರಂಭದಲ್ಲಿ ರೂ. 8 ಲಕ್ಷ ಲಂಚಕ್ಕೆ ಬೇಡಿಕೆಯೊಂದಿಗೆ ಪ್ರಾರಂಭವಾದ ಈ ಪ್ರಕರಣ, ಬಳಿಕ ನಡೆದ ಶೋಧದಲ್ಲಿ ಅಪಾರ ಸಂಪತ್ತಿನ್ನು ಬಯಲುಮಾಡಿದೆ. ಇದರಲ್ಲಿ ರೂ. 5 ಕೋಟಿ ನಗದು, ಐಷಾರಾಮಿ ವಾಹನಗಳು, ಆಭರಣಗಳು ಮತ್ತು ದುಬಾರಿ ಗಡಿಯಾರಗಳು ಸೇರಿವೆ.
2009ರ ಬ್ಯಾಚ್ನ ಐಪಿಎಸ್ ಅಧಿಕಾರಿ ಡಿಐಜಿ ಹರಚರಣ್ ಸಿಂಗ್ ಭುಲ್ಲರ್ ಅವರನ್ನು, ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವ್ಯಕ್ತಿ ಕೃಷ್ಣ ಎಂಬಾತನೊಂದಿಗೆ ಬಂಧಿಸಲಾಗಿದೆ. ಸ್ಥಳೀಯ ವ್ಯಾಪಾರಿಯೊಬ್ಬರ ವಿರುದ್ಧದ ಅಪರಾಧ ಪ್ರಕರಣವನ್ನು “ಸರಿಪಡಿಸುವ” ಬದಲಿಗೆ ಲಂಚಕ್ಕಾಗಿ ಈ ಮಧ್ಯವರ್ತಿಯ ಮೂಲಕ ಬೇಡಿಕೆ ಇಡುತ್ತಿದ್ದರು ಮತ್ತು ಮಾಸಿಕ ಪಾವತಿಗಳನ್ನು ನಿಯಮಿತವಾಗಿ ಕೇಳುತ್ತಿದ್ದರು ಎಂದು ಸಿಬಿಐ ಹೇಳಿದೆ.
ಪಂಜಾಬ್ನ ಫತೇಹ್ಗಢ ಸಾಹಿಬ್ನ ಸ್ಕ್ರ್ಯಾಪ್ ವ್ಯಾಪಾರಿ ಆಕಾಶ್ ಬತ್ತಾ ಎಂಬಾತ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಗುರುವಾರ ಸಿಬಿಐ ಪ್ರಕರಣ ದಾಖಲಿಸಿತು. ಡಿಐಜಿ ಭುಲ್ಲರ್ ಅವರು ತಮ್ಮ ವ್ಯಾಪಾರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಕಲಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ, ಆರಂಭದಲ್ಲಿ ರೂ. 8 ಲಕ್ಷ ಲಂಚವನ್ನು ಬೇಡಿಕೆಯಿಟ್ಟಿದ್ದರು ಮತ್ತು ನಂತರ ಮಾಸಿಕ “ಸೆಟಲ್ಮೆಂಟ್” ಪಾವತಿಗಳನ್ನು ಕೇಳುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದರು.
ಸಿಬಿಐಯ ಮೊದಲ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಭುಲ್ಲರ್ ಅವರು ಪಾವತಿಗಳನ್ನು ತಮ್ಮ ಸಹಾಯಕ ಕೃಷ್ಣನ ಮೂಲಕ ನಿರ್ವಹಿಸುತ್ತಿದ್ದರು. ಕೃಷ್ಣ ದೂರುದಾರರನ್ನು ಪದೇ ಪದೇ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಒಂದು ಕರೆಯಲ್ಲಿ ಕೃಷ್ಣ ಹೇಳಿದ್ದು, “ಆಗಸ್ಟ್ ಪಾವತಿ ಮಾಡಿಲ್ಲ, ಸೆಪ್ಟೆಂಬರ್ ಪಾವತಿ ಮಾಡಿಲ್ಲ” ಎಂದು.
ಪ್ರಾಥಮಿಕ ಪರಿಶೀಲನೆ ನಂತರ, ಸಿಬಿಐ ಚಂಡೀಗಢದ ಸೆಕ್ಟರ್ 21ರಲ್ಲಿ ಬಲೆ ಬೀಸಿತು. ಕಾರ್ಯಾಚರಣೆಯಲ್ಲಿ, ಡಿಐಜಿಯ ಪರವಾಗಿ ದೂರುದಾರರಿಂದ ರೂ. 8 ಲಕ್ಷ ಸ್ವೀಕರಿಸುತ್ತಿದ್ದ ಕೃಷ್ಣನನ್ನು ಸಾಕ್ಷಿ ಸಮೇತ ಹಿಡಿದು ಬಂಧಿಸಲಾಯಿತು. ಹಸ್ತಾಂತರದ ನಂತರ ತಕ್ಷಣ, ದೂರುದಾರ ಮತ್ತು ಡಿಐಜಿ ನಡುವೆ ನಿಯಂತ್ರಿತ ಕರೆಯನ್ನು ಏರ್ಪಡಿಸಲಾಯಿತು. ಅದರಲ್ಲಿ ಅಧಿಕಾರಿ ಲಂಚವನ್ನು ಸ್ವೀಕರಿಸುವುದನ್ನು ಒಪ್ಪಿಕೊಂಡು, ಇಬ್ಬರನ್ನೂ ತಮ್ಮ ಕಚೇರಿಗೆ ಬರಲು ಸೂಚಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಿತಿ ಮೀರಿದ ಭ್ರಷ್ಟಾಚಾರ ನೈತಿಕತೆಯ ಅಧಃಪತನದ ಸಂಕೇತವೇ?
ಈ ಸಾಕ್ಷ್ಯದ ಆಧಾರದಲ್ಲಿ, ಸಿಬಿಐ ತಂಡ ಮೊಹಾಲಿಯಲ್ಲಿರುವ ಭುಲ್ಲರ್ ಅವರ ಕಚೇರಿಗೆ ತಲುಪಿ ಇಬ್ಬರನ್ನೂ ಔಪಚಾರಿಕವಾಗಿ ಬಂಧಿಸಿತು.
2009ರ ಬ್ಯಾಚ್ನ ಐಪಿಎಸ್ ಅಧಿಕಾರಿ ಭುಲ್ಲರ್ ಅವರು ಪಟಿಯಾಲಾ ರೇಂಜ್ನ ಡಿಐಜಿ, ವಿಜಿಲೆನ್ಸ್ ಬ್ಯೂರೋದ ಜಂಟಿ ನಿರ್ದೇಶಕ ಮತ್ತು ಮೊಹಾಲಿ, ಸಂಗ್ರೂರ್, ಖನ್ನಾ, ಹೊಶಿಯಾರ್ಪುರ್, ಫತೇಹ್ಗಢ ಸಾಹಿಬ್ ಮತ್ತು ಗುರ್ದಾಸ್ಪುರ್ಗಳಲ್ಲಿ ಹಿರಿಯ ಪೊಲೀಸ್ ಅಧೀಕ್ಷಕರಾಗಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಭುಲ್ಲರ್ ಅವರು 2024ರ ನವೆಂಬರ್ನಲ್ಲಿ ರೋಪರ್ ರೇಂಜ್ನ ಡಿಐಜಿ ಹುದ್ದೆಯನ್ನು ವಹಿಸಿಕೊಂಡಿದ್ದರು, ಮೊಹಾಲಿ, ರೂಪನಗರ್ ಮತ್ತು ಫತೇಹ್ಗಢ ಸಾಹಿಬ್ ಜಿಲ್ಲೆಗಳ ಮೇಲ್ವಿಚಾರಣೆ ಮಾಡುತ್ತಿದ್ದರು. ಅವರು ಮಾಜಿ ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎಸ್. ಭುಲ್ಲರ್ ಅವರ ಪುತ್ರರಾಗಿದ್ದಾರೆ.
ಶೋಧನೆದಲ್ಲಿ ವಶಪಡಿಸಿಕೊಂಡ ವಸ್ತುಗಳು
ಸುಮಾರು ರೂ. 5 ಕೋಟಿ ನಗದು (ಎಣಿಕೆ ಇನ್ನೂ ನಡೆಯುತ್ತಿದೆ)
1.5 ಕೆಜಿ ಚಿನ್ನ ಮತ್ತು ಆಭರಣಗಳು
ಪಂಜಾಬ್ನಾದ್ಯಂತ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು
ಎರಡು ಐಷಾರಾಮಿ ವಾಹನಗಳ ಕೀಗಳು – ಮರ್ಸಿಡೀಸ್ ಮತ್ತು ಆಡಿ
22 ದುಬಾರಿ ಹ್ಯಾಂಡ್ವಾಚ್ಗಳು
ಲಾಕರ್ ಕೀಗಳು ಮತ್ತು 40 ಲೀಟರ್ ಆಮದು ಮದ್ಯ
ಆಯುಧಗಳು ಮತ್ತು ಮದ್ದುಗುಂಡುಗಳು, ಇದರಲ್ಲಿ ಡಬಲ್ ಬ್ಯಾರಲ್ ಶಾಟ್ಗನ್, ಪಿಸ್ತೂಲ್, ರಿವಾಲ್ವರ್ ಮತ್ತು ಏರ್ಗನ್ ಸೇರಿವೆ
ಅಲ್ಲದೆ, ಮಧ್ಯವರ್ತಿ ಕೃಷ್ಣನ ಮನೆಯಿಂದ ಹೆಚ್ಚುವರಿ ರೂ. 21 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.





