50 ರೂ. ಲಂಚ ಪಡೆದಿದ್ದಾರೆಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಬರೋಬ್ಬರಿ 40 ವರ್ಷಗಳ ನಂತರ ಆರೋಪಿ ರೈಲ್ವೇ ಟಿಟಿಇ ಅವರನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ. ಆರೋಪದಿಂದಾಗಿ ಕೆಲಸ, ಗೌರವ ಹಾಗೂ ನೆಮ್ಮದಿಯನ್ನು ಕಳೆದುಕೊಂಡಿದ್ದ ಅಧಿಕಾರಿಯನ್ನು ನಿರ್ದೋಷಿಯೆಂದು ಘೋಷಿಸಲಾಗಿದೆ. ಆದರೆ, ಈ ತೀರ್ಪನ್ನು ಸಂಭ್ರಮಿಸಲು ಆ ಅಧಿಕಾರಿಯೇ ಜೀವಂತವಾಗಿಲ್ಲ.
ವಿ.ಎಂ ಸೌದಾಗರ್ ಎಂಬವರು ಖುಲಾಸೆಗೊಂಡಿರುವ ಅಧಿಕಾರಿ. 1988ರಲ್ಲಿ, ದಾದರ್-ನಾಗ್ಪುರ ಎಕ್ಸ್ಪ್ರೆಸ್ನಲ್ಲಿ ‘ಟಿಕೆಟ್ ಪರಿಶೀಲಕ’ರಾಗಿ (ಟಿಟಿಇ) ಕಾರ್ಯನಿರ್ವಹಿಸುತ್ತಿದ್ದಾಗ ಅವರು ಪ್ರಯಾಣಿಕರಿಂದ ರೂ. 50 ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇಲಾಖಾ ವಿಚಾರಣೆಯ ನಂತರ 1996ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಪ್ರಕರಣವು ಸುಪ್ರೀಂ ಕೋರ್ಟ್ವರೆಗೆ ಹೋಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು, ‘ವಿ.ಎಂ ಸೌದಾಗರ್ ವಿರುದ್ಧ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ’ ಎಂದು ಹೇಳಿದೆ. ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಅಲ್ಲದೆ, ಅವರಿಗೆ ಸಲ್ಲಬೇಕಾದ ಗೌರವ, ಪಿಂಚಣಿ ಸೇರಿದಂತೆ ಎಲ್ಲ ರೀತಿಯ ಹಣಕಾಸು ಪ್ರಯೋಜನಗಳನ್ನು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಮೂರು ತಿಂಗಳೊಳಗೆ ಒದಗಿಸುವಂತೆ ರೈಲ್ವೇ ಇಲಾಖೆಗೆ ನಿರ್ದೇಶನ ನೀಡಿದೆ.
ಪ್ರಕರಣವೇನು? ಸುದೀರ್ಘ ಅವಧಿಯಲ್ಲಿ ಆದ ಬೆಳವಣಿಗೆಗಳೇನು?
1988ರ ಮೇ 31ರಂದು ಸೌದಾಗರ್ ಅವರು ಮೂವರು ಪ್ರಯಾಣಿಕರ ಬಳಿ ಒಟ್ಟು 50 ರೂ. ಲಂಚ ಬೇಡಿಕೆ ಇಟ್ಟಿದ್ದರು. ಆ ಮೂವರಲ್ಲಿ ಒಬ್ಬರಿಗೆ ಶುಲ್ಕದ ಬಾಕಿಯಲ್ಲಿ 18 ರೂ.ಗಳನ್ನು ಹಿಂದಿರುಗಿಸಿರಲಿಲ್ಲ ಎಂದು ರೈಲ್ವೆ ವಿಜಿಲೆನ್ಸ್ ತಂಡವು ಹೇಳಿತ್ತು. ಆ ಹೇಳಿಕೆಯ ಆಧಾರದ ಮೇಲೆ, ರೈಲ್ವೇ ಇಲಾಖೆಯು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿತು. 8 ವರ್ಷಗಳ ನಂತರ, 1996ರಲ್ಲಿ, ಸೌದಾಗರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಆದಾಗ್ಯೂ, ಪ್ರಕರಣಕ್ಕೆ ನಿರ್ದಿಷ್ಟ ಪುರಾವೆಗಳ ಕೊರತೆಯಿತ್ತು. ವಿಜಿಲೆನ್ಸ್ ತಂಡವು ದೃಢವಾದ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿತ್ತು. ಪ್ರಯಾಣಿಕರ ಸಾಕ್ಷ್ಯಗಳು ಕೂಡ ಲಂಚದ ಆರೋಪವನ್ನು ದೃಢಪಡಿಸಿರಲಿಲ್ಲ. ವಾಸ್ತವವಾಗಿ, ಮೂವರು ಪ್ರಯಾಣಿಕರಲ್ಲಿ ಇಬ್ಬರು, “ಸೌದಾಗರ್ ಯಾವುದೇ ಕಾನೂನುಬಾಹಿರ ಪ್ರತಿಫಲ (ಲಂಚ) ಕೇಳಿಲ್ಲ. ಅವರು ಇತರ ಬೋಗಿಗಳಲ್ಲಿ ಪರಿಶೀಲನೆ ನಡೆಸಿದ ನಂತರ ರಶೀದಿ ನೀಡುವುದಾಗಿ ಮತ್ತು ಬಾಕಿ ಹಣವನ್ನು ಹಿಂದಿರುಗಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದರು” ಎಂದು ವಿವರಿಸಿದ್ದರು.
ಯಾರಿಂದ ಲಂಚ ಪಡೆಯಲಾಗಿದೆ ಎಂದು ಹೇಳಲಾಗಿತ್ತೋ, ಅವರೇ ತಾವು ಯಾವುದೇ ಲಂಚ ನೀಡಿಲ್ಲ ಎಂದು ಪ್ರತಿಪಾದಿಸಿದ್ದರು. ಹೀಗಾಗಿ, 2002ರಲ್ಲಿ, ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಪ್ರಕರಣವನ್ನು ಪರಿಶೀಲಿಸಿ, ಸೌದಾಗರ್ ಅವರನ್ನು ವಜಾವನ್ನು ರದ್ದುಗೊಳಿಸಿ, ಅವರ ಉದ್ಯೋಗವನ್ನು ಮರಳಿ ನೀಡುವಂತೆ ಭಾರತೀಯ ರೈಲ್ವೆಗೆ ನಿರ್ದೇಶನ ನೀಡಿತ್ತು. ಆದರೆ, ಸಿಎಟಿ ಆದೇಶವನ್ನು ಸರ್ಕಾರವು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿತು. ಸಿಐಟಿ ತೀರ್ಪಿಗೆ ಹೈಕೋರ್ಟ್ ತಡೆಯೊಡ್ಡಿತು.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ: ಮಾಡಿದ್ದೇನು? ಮಾಡಬೇಕಿರುವುದೇನು?
ಇದಾದ ನಂತರ, ಬರೋಬ್ಬರಿ 15 ವರ್ಷಗಳ ಕಾಲ ಪ್ರಕರಣವು ಹೈಕೋರ್ಟ್ನಲ್ಲಿಯೇ ಸಿಲುಕಿಕೊಂಡಿತು. ಇದೆಲ್ಲದರ ನಡುವೆ, ಸೌದಾಗರ್ ನಿಧನರಾದರು. 2017ರಲ್ಲಿ, ಸಿಎಟಿ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಅವರ ವಜಾಗೊಳಿಸುವಿಕೆಯನ್ನು ಎತ್ತಿಹಿಡಿಯಿತು. ಆದರೆ, ಸೌದಾಗರ್ ಇಲ್ಲದಿದ್ದರೂ, ಅವರ ಕುಟುಂಬವು ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ಕೊಂಡೊಯ್ಯಿತು.
ದಶಕಗಳಷ್ಟು ಹಳೆಯ ಪ್ರಕರಣವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, “ಸೌದಾಗರ್ ವಿರುದ್ಧದ ಆರೋಪಗಳು ಆಧಾರರಹಿತವಾಗಿದೆ. ತನಿಖಾ ಅಧಿಕಾರಿಯ ತನಿಖೆಯು ದಾರಿತಪ್ಪಿಸುವ ಸಂಗತಿಗಳನ್ನು ಮಾತ್ರವೇ ಆಧರಿಸಿವೆ. ತನಿಖಾ ಅಧಿಕಾರಿಯ ತೀರ್ಮಾನಗಳು ಸಾಕ್ಷ್ಯಗಳಿಂದ ಬೆಂಬಲಿತವಾಗಿಲ್ಲ. ಹೀಗಿರುವಾಗ, ಶಿಕ್ಷೆಯನ್ನು ರದ್ದುಗೊಳಿಸುವ ಎಲ್ಲ ಹಕ್ಕನ್ನು CAT ಹೊಂದಿದೆ ಎಂಬುದನ್ನು ಗುರುತಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ” ಎಂದು ಹೇಳಿದೆ. ಪ್ರಕರಣದಲ್ಲಿ ಸೌದಾಗರ್ ಅವರನ್ನು ಖುಲಾಸೆಗೊಳಿಸಿದ್ದು, ಅವರ ಗೌರವ-ಘನತೆಯನ್ನು ಪುನಃಸ್ಥಾಪಿಸಿದೆ.




