ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ ತೀವ್ರ ಒತ್ತಡ ಹೇರುತ್ತಿದ್ದರೂ, ಭಾರತಕ್ಕೆ ‘ನಿರಂತರ ಇಂಧನ ಪೂರೈಕೆ’ಯನ್ನು ಖಾತ್ರಿಪಡಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ವೇಳೆ ಅವರು ಈ ಮಹತ್ವದ ಭರವಸೆ ನೀಡಿದರು. ಇಂಧನ ಭದ್ರತೆಯು ಭಾರತ-ರಷ್ಯಾ ಪಾಲುದಾರಿಕೆಯ ಪ್ರಬಲ ಆಧಾರಸ್ತಂಭವಾಗಿದ್ದು, ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ ಪೂರೈಕೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಉತ್ಪನ್ನಗಳ ಮೇಲೆ ಶೇ 50ರಷ್ಟು ಭಾರೀ ಸುಂಕ ವಿಧಿಸಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿರುವ ಪುಟಿನ್, ಅಮೆರಿಕದ ಇಬ್ಬಗೆ ನೀತಿಯನ್ನು ಕಟುವಾಗಿ ಟೀಕಿಸಿದರು.
“ಅಮೆರಿಕ ತನ್ನ ಅಣು ವಿದ್ಯುತ್ ಸ್ಥಾವರಗಳಿಗಾಗಿ ನಮ್ಮಿಂದ ಅಣು ಇಂಧನವನ್ನು ಖರೀದಿಸುತ್ತಿದೆ. ಅವರಿಗಿರುವ ಹಕ್ಕು ಭಾರತಕ್ಕೆ ಏಕಿಲ್ಲ?” ಎಂದು ಪ್ರಶ್ನಿಸಿದ ಅವರು, ಅಮೆರಿಕಕ್ಕೆ ಇರುವ ಸವಲತ್ತುಗಳೇ ಭಾರತಕ್ಕೂ ದೊರೆಯಬೇಕು ಎಂದು ಪ್ರತಿಪಾದಿಸಿದರು.
ಇದೇ ವೇಳೆ, ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವತ್ತ ರಷ್ಯಾ ಕಾರ್ಯಪ್ರವೃತ್ತವಾಗಿದೆ ಎಂದು ಪುಟಿನ್ ತಿಳಿಸಿದರು. ಆದರೆ, ಡಾನ್ಬಾಸ್ ಪ್ರಾಂತ್ಯದಿಂದ ಉಕ್ರೇನ್ ಸೈನ್ಯ ಹಿಂದೆಗೆಯದಿದ್ದರೆ ಬಲಪ್ರಯೋಗದ ಮೂಲಕ ಆ ಪ್ರದೇಶಗಳನ್ನು ಮುಕ್ತಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಭಾರತವು ತಟಸ್ಥವಾಗಿಲ್ಲದಿದ್ದರೂ ಯುದ್ಧದ ಪರವಾಗಿಲ್ಲ, ಬದಲಿಗೆ ಸದಾ ಶಾಂತಿಯ ಪರವಾಗಿ ನಿಲ್ಲುತ್ತದೆ ಎಂದು ಪುನರುಚ್ಚರಿಸಿದರು ಹಾಗೂ ಯುದ್ಧಕ್ಕೆ ಅಂತ್ಯ ಹಾಡುವ ಶಾಶ್ವತ ಪರಿಹಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ‘ದೇವರ’ ದಾಖಲೆ ಮುರಿದು ಮುನ್ನುಗ್ಗುತ್ತಿರುವ ಕೊಹ್ಲಿ
ಉಭಯ ನಾಯಕರು ಇದೇ ಸಂದರ್ಭದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಷ್ಯಾದ ಪ್ರವಾಸಿಗರಿಗೆ ಭಾರತಕ್ಕೆ ಭೇಟಿ ನೀಡಲು 30 ದಿನಗಳ ಎರಡು ಹೊಸ ವೀಸಾ ಸೌಲಭ್ಯಗಳನ್ನು ಮೋದಿ ಘೋಷಿಸಿದರು. ಅಲ್ಲದೆ, ರಷ್ಯಾದಲ್ಲಿ ಎರಡು ಹೊಸ ಭಾರತೀಯ ರಾಯಭಾರ ಕಚೇರಿಗಳನ್ನು (ಕಾನ್ಸುಲೇಟ್) ತೆರೆಯಲಾಗುವುದು ಎಂದು ತಿಳಿಸಿದರು. ಮುಂದಿನ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ 60 ಬಿಲಿಯನ್ ಡಾಲರ್ನಿಂದ 100 ಬಿಲಿಯನ್ ಡಾಲರ್ಗೆ ಏರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಉಭಯ ನಾಯಕರು ನಿಗದಿಪಡಿಸಿದರು.
ಭವಿಷ್ಯದ ಸಹಕಾರದ ದೃಷ್ಟಿಯಿಂದ, 2030ರವರೆಗಿನ ಆರ್ಥಿಕ ಕಾರ್ಯಕ್ರಮವೊಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿದವು. ಇದು ಉದ್ಯೋಗ ಸೃಷ್ಟಿ, ಹಡಗು ಉದ್ಯಮ ಮತ್ತು ಆರೋಗ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಇದಲ್ಲದೆ, ಭಾರತದಲ್ಲಿ ಬೃಹತ್ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ರಷ್ಯಾ ನೆರವು ನೀಡಲಿದೆ. ಹಾಗೆಯೇ ರಕ್ಷಣಾ ಕ್ಷೇತ್ರದಲ್ಲಿ ಕೇವಲ ಖರೀದಿದಾರ-ಮಾರಾಟಗಾರ ಸಂಬಂಧದ ಬದಲಿಗೆ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಯಿತು.





