ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ನನಗೂ ಈಗಿನ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಒಕ್ಕೂಟದ ಅಧ್ಯಕ್ಷ ಸಂಜಯ್ ಸಿಂಗ್ ಸಂಬಂಧಿಯಲ್ಲ ಎಂದು ತಿಳಿಸಿದ್ದಾರೆ.
ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಸಾರ ನಡೆದಿದೆ. ಇನ್ನೂ ಹೇಳುವುದಾದದರೆ, ಸಂಜಯ್ ಸಿಂಗ್ ನನ್ನ ಸಂಬಂಧಿಯಲ್ಲ. ಈ ವರ್ಷ ಯುವ ಕುಸ್ತಿಪಟುಗಳ ಭವಿಷ್ಯವನ್ನು ಹಾಳುಮಾಡದೆ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ನಂದಿನಿ ನಗರದಲ್ಲಿ ಕ್ರೀಡೆಗಳನ್ನು ಆಯೋಜಿಸಲು ನಿರ್ಧಿರಿಸಲಾಗಿತ್ತು. ಈಗ ನನಗೂ ಕುಸ್ತಿಗೂ ಯಾವುದೇ ಸಂಬಂಧವಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಯತ್ತ ಹೆಚ್ಚು ಗಮನ ನೀಡುವುದು. ನೂತನ ಒಕ್ಕೂಟ ಯಾವುದೇ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು” ಎಂದರು.
ಆದಾಗ್ಯೂ ಹಲವಾರು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್, 15ರ ಒಳಗಿನ ಮತ್ತು 20ರ ಒಳಗಿನ ರಾಷ್ಟ್ರೀಯ ಕ್ರೀಡೆಗಳನ್ನು ಘೋಷಿಸುವ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
ಕ್ರೀಡಾ ಸಚಿವಾಲಯವು ಮುಂದಿನ ಆದೇಶದವರೆಗೆ ಡಬ್ಲ್ಯುಎಫ್ಐ ಅನ್ನು ಅಮಾನತುಗೊಳಿಸಿದ ನಂತರ ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಿದ್ದ ಬ್ರಿಜ್ ಭೂಷಣ್, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಸ್ತಿ ಒಕ್ಕೂಟದ ಚುನಾವಣೆಗಳು ಡಿಸೆಂಬರ್ 21 ರಂದು ನಡೆದಿದ್ದು, ಬ್ರಿಜ್ ಭೂಷಣ್ ಅವರ ಬೆಂಬಲಿಗ ಸಂಜಯ್ ಸಿಂಗ್ ಮತ್ತು ಅವರ ಗುಂಪು ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿತ್ತು.
ಈ ನಡೆಯನ್ನು ವಿರೋಧಿಸಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರೆ, ಇನ್ನಿಬ್ಬರು ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ನೀರೇಂದ್ರ ಸಿಂಗ್ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿದರು.





