ಇತ್ತೀಚಿನ ದಿನಗಳಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಸ್ಥಾನದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿವೆ. ಇದನ್ನು ದುರದೃಷ್ಟಕರ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಸ್ಯಾಮ್ಸನ್ ಮೂರು ಬಾರಿ 5ನೇ ಕ್ರಮಾಂಕದಲ್ಲಿ, ಒಮ್ಮೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಅಲ್ಲದೆ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅವರಿಗೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಲಾಯಿತು. ಇದು ಓರ್ವ ಆಟಗಾರನಿಗೆ ತೀರಾ ಬೇಸರವಾಗುತ್ತದೆ. ಆದರೂ, ಸ್ಯಾಮ್ಸನ್ ಮೌನವಾಗಿದ್ದಾರೆ. ಮುಂದೊಂದು ದಿನ ಅವರನ್ನು 11ನೇ ಕ್ರಮಾಂಕದಲ್ಲಿ ಕಡೆಯದಾಗಿ ಬ್ಯಾಟಿಂಗ್ ಮಾಡಲು ಕಳಿಸಬಹುದು ಎಂದು ಶ್ರೀಕಾಂತ್ ಹೇಳಿದ್ದಾರೆ.
“ಅತ್ಯಂತ ದುರದೃಷ್ಟಕರ ವ್ಯಕ್ತಿ ಸಂಜು ಸ್ಯಾಮ್ಸನ್. ಅವರು ಆರಂಭಿಕ ಆಟಗಾರನಾಗಿ ಶತಕಗಳನ್ನು ಗಳಿಸುತ್ತಿದ್ದರು. ಆದರೆ, ಈಗ ಅವರು ಅವರನ್ನು 3 ರಿಂದ 8ನೇ ಕ್ರಮಾಂಕದರೆಗೂ ಇಳಿಸಲಾಗಿದೆ. ಅವರನ್ನು ಬಿಸಿಸಿಐ 11ನೇ ಸ್ಥಾನದಲ್ಲಿಯೂ ಕಳುಹಿಸಬಹುದು. ಆದರೆ, ಅವರಿಗೆ ಮೌನವಾಗಿರುವುದು ಮತ್ತು ತಂಡ ಕೇಳುವಲ್ಲೆಲ್ಲ ಬ್ಯಾಟಿಂಗ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
“ಏಷ್ಯಾ ಕಪ್ನಲ್ಲಿ ಅವರು 5ನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದು ಅವರಿಗೆ ಒಳ್ಳೆಯ ಸಂಕೇತ. ಏಕೆಂದರೆ, ಈಗ ಸಂಜು ಟಿ20 ವಿಶ್ವಕಪ್ಗಿಂತ ಮೊದಲ ವಿಕೆಟ್ಕೀಪರ್ ಆಗಿ ಸ್ವಯಂಚಾಲಿತ ಆಯ್ಕೆಯಾಗಿದ್ದಾರೆ. ಅವರು 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಖಚಿತ” ಎಂದು ಹೇಳಿದ್ದಾರೆ.




