ದೇಶಾದ್ಯಂತ ಸಂಕ್ರಾಂತಿ ಸಡಗರ ಮನೆ ಮಾಡಿದೆ. ಹಲವಾರು ಭಾಗಗಳಲ್ಲಿ ಗಾಳಿಪಟ ಹಾರಿಸಿ ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇದೇ ಸಮಯದಲ್ಲಿ ಕೆಲವೆಡೆ ಗಾಳಿಪಟದ ದಾರದಿಂದಾಗಿ ಸೂತಕದ ಛಾಯೆ ಆವರಿಸಿದೆ. ಗಾಜುಲೇಪಿತ ಗಾಳಿಪಟ ದಾರದಿಂದ ಕತ್ತು ಸೀಳಿ ಈವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಜೌನಪುರ ಮತ್ತು ಲಖೀಂಪುರ ಹಾಗೂ ಕರ್ನಾಟಕದಲ್ಲಿ ಬೀದರ್ ಜಿಲ್ಲೆಗಳಲ್ಲಿ ಸಾವಿನ ಘಟನೆಗಳು ಸಂಭವಿಸಿವೆ. ಅಲ್ಲದೆ, ಗಾಳಿಪಟ ಹಾರಿಸುವ ವೇಳೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ.
ರಸ್ತೆ ಮತ್ತು ಸೇತುವೆಗಳ ಮೇಲೆ ಅಡ್ಡವಾಗಿ ತೂಗುವ ಗಾಳಿಪಟದ ದಾರಗಳು ದ್ವಿಚಕ್ರ ವಾಹನ ಸವಾರರ ಕತ್ತಿಗೆ ಸುತ್ತಿಕೊಂಡು, ಕುತ್ತು ಸೀಳಿಕೊಂಡು ದುರ್ಘಟನೆಗಳು ಸಂಭವಿಸಿವೆ ಎಂದು ಹೇಳಲಾಗಿದೆ.
ಉತ್ತರಪ್ರದೇಶದಲ್ಲಿ ಜೌನಪುರ ಜಿಲ್ಲೆಯ ಶಾಲಾ ಕ್ಯಾಂಪಸ್ನಲ್ಲಿ ಸಮೀರ್ ಹಂಶಿ (28) ಮೃತಪಟ್ಟಿದ್ದಾರೆ. ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಂತೆಯೇ, ಕೆಲ ದಿನಗಳ ಹಿಂದೆ, ಅದೇ ಜಿಲ್ಲೆಯ ಶಾಲಾ ಶಿಕ್ಷಕ ಸಂದೀಪ್ ತ್ರಿಪಾಠಿ (45) ಗಾಜುಲೇಪಿತ ದಾರದಿಂದ ಕತ್ತು ಸೀಳಿ ಮೃತಪಟ್ಟಿದ್ದರು.
ಬುಧವಾರ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯಲ್ಲಿ ತಲೆಂಗಾಣ ಮೂಲದ ವಲಸೆ ಕಾರ್ಮಿಕ ಅವಧೀಶ್ ಕುಮಾರ್ (38) ಕೂಡ ಮೃತಪಟ್ಟಿದ್ದಾರೆ.
ಕರ್ನಾಟಕದ ಬೀದರ್ ಜಿಲ್ಲೆಯ ಬಂಬುಳಗಿ ಗ್ರಾಮದಲ್ಲಿ ಸಂಜೀವ ಕುಮಾರ್ (48) ಎಂಬವರು ಕೂಡ ಗಾಳಿಪಟ ದಾರುವ ಕತ್ತಿಗೆ ಸುತ್ತಿಕೊಂಡು, ಕತ್ತು ಸೀಳಿ ಸಾವನ್ನಪ್ಪಿದ್ದಾರೆ.




