ಮಹಾರಾಷ್ಟ್ರದ ಸತಾರಾದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದ ವೈದ್ಯೆ, ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ, ತನ್ನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ. ಸಂಸದ ಮತ್ತು ಅವರ ಇಬ್ಬರು ಸಹಚರರು ನಿರಂತರ ಒತ್ತಡ ಹೇರಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ.
ಸತಾರಾದ ಫಾಲ್ಟನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ವೈದ್ಯೆ (26 ವರ್ಷ) ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. “ಪೊಲೀಸ್ ಪ್ರಕರಣಗಳಲ್ಲಿ ಆರೋಪಿಗಳ ನಕಲಿ ಫಿಟ್ನೆಟ್ ಪ್ರಮಾಣಪತ್ರ ನೀಡುವಂತೆ ಪೊಲೀಸರು ಒತ್ತಡ ಹೇರಿದ್ದರು. ನಕಲಿ ಪ್ರಮಾಣಪತ್ರ ನೀಡಲು ನಿರಾಕರಿಸಿದಾಗ ನನಗೆ ಕಿರುಕುಳ ನೀಡಲು ಆರಂಭಿಸಿದರು. ಸಬ್-ಇನ್ಸ್ಪೆಕ್ಟರ್ ಗೋಪಾಲ್ ಬದ್ನೆ ಅವರು ನನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ. ಐದು ತಿಂಗಳಿಗೂ ಹೆಚ್ಚು ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ” ಎಂದು ಡೆತ್ನೋಟ್ನಲ್ಲಿ ಮತ್ತು ತಮ್ಮ ಹಂಗೈನಲ್ಲಿ ವೈದ್ಯೆ ಬರೆದಿದ್ದಾರೆ.
“ನಕಲಿ ಪ್ರಮಾಣಪತ್ರ ನೀಡಲು ನರಾಕರಿಸಿದ್ದಕ್ಕಾಗಿ ಸಂಸದರೊಬ್ಬರ ಇಬ್ಬರು ಸಹಚರರು ಆಸ್ಪತ್ರೆಗೆ ಬಂದಿದ್ದರು. ಅವರು ಸಂಸದರಿಗೆ ಕರೆ ಮಾಡಿ, ಮಾತನಾಡುವಂತೆ ಒತ್ತಡ ಹಾಕಿದರು. ನಕಲಿ ಪ್ರಮಾಣಪತ್ರ ನೀಡುವಂತೆ ಸಂಸದರು ನನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದರು” ಎಂದು ದೂರಿದ್ದಾರೆ.
“ವೈದ್ಯೆ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕಿರುಕುಳ ಸಂಬಂಧ ಎರಡು-ಮೂರು ಬಾರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ)ಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ವೈದ್ಯೆಯ ಸೋದರಸಂಬಂಧಿ ಹೇಳಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ.
ವೈದ್ಯೆ ತಮ್ಮ ಡೆತ್ನೋಟ್ನಲ್ಲಿ, ತನ್ನ ಮನೆಯ ಮಾಲೀಕ ಪ್ರಶಾಂತ್ ಬಂಕರ್ ಕೂಡ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬದ್ನೆ ಮತ್ತು ಬಂಕರ್ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬದ್ನೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಕೊಲ್ಹಾಪುರ ವಿಭಾಗ) ಸುನಿಲ್ ಫುಲಾರಿ ತಿಳಿಸಿದ್ದಾರೆ.
“ಇದುವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ನಾವು ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ. ಸತಾರಾ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಅವರು ಹೇಳಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ತೆರಿಗೆ ಹಂಚಿಕೆ | ಕರ್ನಾಟಕಕ್ಕೆ ಮತ್ತೆ ಕಾದಿದೆಯಾ ಭಾರೀ ಅನ್ಯಾಯ? ಕೇಂದ್ರದ ಸಮರ್ಥನೆಗೆ ರಾಜ್ಯ ಬಿಜೆಪಿ ಸಿದ್ದ
ವೈದ್ಯೆ ಆತ್ಮಹತ್ಯೆ ಪ್ರಕರಣವು ರಾಜಕೀಯ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸರ್ಕಾರವು ಆರೋಪಿ ಪೊಲೀಸರನ್ನು ರಕ್ಷಿಸುತ್ತಿದೆ ಎಂದು ಟೀಕಿಸಿದೆ.
“ರಕ್ಷಕರು ಪರಭಕ್ಷಕರಾಗಿದ್ದಾರೆ! ಪೊಲೀಸರ ಕರ್ತವ್ಯ ರಕ್ಷಣೆ ನೀಡುವುದು. ಆದರೆ, ಅವರೇ ವೈದ್ಯೆಯನ್ನು ಶೋಷಿಸುತ್ತಿದ್ದರೆ, ನ್ಯಾಯ ಹೇಗೆ ಸಿಗುತ್ತದೆ? ಈ ಹುಡುಗಿ ಈ ಹಿಂದೆ ದೂರು ನೀಡಿದಾಗ ಏಕೆ ಕ್ರಮ ಕೈಗೊಳ್ಳಲಿಲ್ಲ? ಮಹಾಯುತಿ ಸರ್ಕಾರವು ಪೊಲೀಸರನ್ನು ಪದೇ ಪದೇ ರಕ್ಷಿಸುತ್ತಿದೆ. ಇದು ಪೊಲೀಸ್ ದೌರ್ಜನ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ಹೇಳಿದೆ. “ಘಟನೆಯು ದುರದೃಷ್ಟಕರ, ನಾನು ಸತಾರಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ… ವೈದ್ಯರು ದೂರು ನೀಡಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಪ್ರಕರಣದಲ್ಲಿ ಎಲ್ಲವನ್ನೂ ತನಿಖೆ ಮಾಡಲಾಗುತ್ತದೆ…” ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಹೇಳಿದ್ದಾರೆ.




