ಚುನಾವಣಾ ವಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು, ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ (ECI) ನಡುವಿನ ಸ್ಪಷ್ಟ ಸಹಕಾರದ ಕೊರತೆಯಿಂದಾಗಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ದುರದೃಷ್ಟಕರ ದೋಷಣೆಯ ಆಟವನ್ನು ತಡೆಯಲು ನ್ಯಾಯಾಂಗದ ಅಧಿಕಾರಿಗಳ ನಿಯೋಜನೆ ಅಗತ್ಯವಾಗಿದೆ ಎಂದು ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠ ಹೇಳಿದೆ.
“ಆರೋಪಗಳು ಮತ್ತು ಪ್ರತಿ ಆರೋಪಗಳ ದುರದೃಷ್ಟಕರ ದೂಷಣೆಯ ಆಟ ನಡೆದಿದೆ. ಇದು ಎರಡು ಸಾಂವಿಧಾನಿಕ ಕಾರ್ಯನಿರ್ವಾಹಕರಾದ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ನಂಬಿಕೆಯ ಕೊರತೆಯನ್ನು ತೋರಿಸುತ್ತದೆ. ಈಗ ಎಸ್ಐಆರ್ ಪ್ರಕ್ರಿಯೆಯು ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿ ಸೇರಿಸಲಾದ ವ್ಯಕ್ತಿಗಳ ಹಕ್ಕು ಮತ್ತು ಆಕ್ಷೇಪಣೆಗಳ ಹಂತದಲ್ಲಿ ಸಿಲುಕಿಕೊಂಡಿದೆ. ಈ ಕಾರ್ಯವು ಸುಗಮವಾಗಿ ನಡೆಯಲು ನ್ಯಾಯಾಂಗ ಅಧಿಕಾರಿಗಳ ನೇಮಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಪೀಠ ಹೇಳಿದೆ.
“ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿನ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ಅಥವಾ ಮರುಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಸಹಾಯ ಮಾಡುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಥವಾ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯಲ್ಲಿರುವ ಕೆಲವು ಮಾಜಿ ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳನ್ನು ಎಸ್ಐಆರ್ ಪ್ರಕ್ರಿಯೆಗೆ ನೇಮಿಸುವಂತೆ ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಲ್ಲಿ ವಿನಂತಿ ಮಾಡುತ್ತೇವೆ” ಎಂದು ಪೀಠ ತಿಳಿಸಿದೆ.
ಫೆಬ್ರವರಿ 28ರೊಳಗೆ ಬಂಗಾಳದ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಗಮನಾರ್ಹವಾಗಿ, 2002ರ ಮತದಾರರ ಪಟ್ಟಿಯೊಂದಿಗೆ ಲಿಂಕ್ ಮಾಡುವಲ್ಲಿ ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿವೆ. ಇವುಗಳಲ್ಲಿ, ಪೋಷಕರ ಹೆಸರಿನಲ್ಲಿ ಅಕ್ಷರ ದೋಷ, ಮತದಾರರು ಮತ್ತು ಅವರ ಪೋಷಕರ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಕ್ಕಿಂತ ಕಡಿಮೆ ಅಥವಾ 50 ವರ್ಷಗಳಿಗಿಂತ ಹೆಚ್ಚು ಇರುವುದು ಸೇರಿವೆ. ಈ ಕಾರಣಗಳಿಗಾಗಿ, ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲು ಆಯೋಗ ಮುಂದಾಗಿದ್ದು, ಆಯೋಗದ ಧೋರಣೆಯನ್ನು ಪ್ರಶ್ನಿಸಿ ಬಂಗಾಳದ ಆಡಳಿತಾರೂಢ ಟಿಎಂಸಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿತ್ತು.




