ಹಣಕ್ಕಾಗಿ ಪ್ರಶ್ನೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡುವಂತೆ ಲೋಕಪಾಲರಿಗೆ ನಿರ್ದೇಶಿಸಿದ್ದ ದೆಹಲಿ ಹೈಕೋರ್ಟ್ನ 2025ರ ಡಿಸೆಂಬರ್ನ ಆದೇಶದ ಒಂದು ಭಾಗಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಹೈಕೋರ್ಟ್ ಆದೇಶದ ವಿರುದ್ಧ ಲೋಕಪಾಲ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿದ್ದು, ಸಿಬಿಐ, ಬಿಜೆಪಿ ಸಂಸದ ಮತ್ತು ದೂರುದಾರ ನಿಶಿಕಾಂತ್ ದುಬೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಸದ್ಯಕ್ಕೆ ಮೊಯಿತ್ರಾ ಅವರ ವಿರುದ್ಧದ ವಿಚಾರಣೆಯನ್ನು ಮುಂದುವರಿಸದಂತೆ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯರಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ
2025ರ ಡಿಸೆಂಬರ್ 19ರಂದು ಮೊಯಿತ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ ಲೋಕಪಾಲದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ ಲೋಕಪಾಲ ಕಾಯಿದೆಯ ಸೆಕ್ಷನ್ 20ರ ಅಡಿಯಲ್ಲಿ ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡುವ ಅಧಿಕಾರದ ಕುರಿತು ಹೈಕೋರ್ಟ್ ನೀಡಿರುವ ವ್ಯಾಖ್ಯಾನವು ಸರಿಯಾಗಿಲ್ಲ ಎಂದೂ ನ್ಯಾಯಪೀಠ ಅಭಿಪ್ರಾಯಿಸಿದೆ. ಈ ಕುರಿತು ಕಾನೂನು ಸ್ಪಷ್ಟನೆ ನೀಡುವುದಾಗಿ ತಿಳಿಸಿದೆ.
ಏನಿದು ಹಣಕ್ಕಾಗಿ ಪ್ರಶ್ನೆ ಪ್ರಕರಣ?
ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಅದಾನಿ ಸಮೂಹ ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಪ್ರಶ್ನೆಗಳನ್ನು ಕೇಳಲು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಹಣ ಮತ್ತು ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ. ಈ ವಿಚಾರದಲ್ಲಿ ಲೋಕಸಭೆಯಿಂದಲೇ ಮಹುವಾ ಅವರನ್ನು ಉಚ್ಚಾಟಿಸಲಾಗಿದೆ.
ಮಹುವಾ ಅವರು ತಮ್ಮ ಸಂಸತ್ತಿನ ಅಧಿಕೃತ ‘ಲಾಗಿನ್ ಐಡಿ’ ಮತ್ತು ‘ಪಾಸ್ವರ್ಡ್’ ಅನ್ನು ಹಿರಾನಂದನಿ ಅವರಿಗೆ ನೀಡಿದ್ದರು. ಹಿರಾನಂದನಿ ಅವರು ದುಬೈನಿಂದಲೇ ಲಾಗಿನ್ ಆಗಿ ಮಹುವಾ ಅವರ ಪರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನು ಮಹುವಾ ಅವರು ಒಪ್ಪಿಕೊಂಡಿದ್ದರೂ, ‘ಕೇವಲ ಟೈಪ್ ಮಾಡಲು ಮಾತ್ರ ಸಹಾಯ ಪಡೆದಿದ್ದೆ’ ಎಂದು ಸ್ಪಷ್ಟಪಡಿಸಿದ್ದಾರೆ. “ಅನೇಕ ಸಂಸದರು ತಮ್ಮ ಸಿಬ್ಬಂದಿ ಅಥವಾ ಪರಿಚಿತರ ಸಹಾಯದಿಂದ ಪ್ರಶ್ನೆಗಳನ್ನು ಟೈಪ್ ಮಾಡಿಸುತ್ತಾರೆ. ಇದರಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ” ಎಂದು ಮಹುವಾ ಹೇಳಿದ್ದಾರೆ.
ಹಾಗೆಯೇ ಅದಾನಿ ಸಮೂಹದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಸರ್ಕಾರವು ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಮಹುವಾ ದೂರಿದ್ದಾರೆ. ಲೋಕಸಭೆಯ ಎಥಿಕ್ಸ್ ಕಮಿಟಿ ತನಗೆ ಸರಿಯಾದ ವಿಚಾರಣೆಯ ಅವಕಾಶ ನೀಡದೆ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಉಚ್ಚಾಟಿಸಿದೆ ಎಂದೂ ಆರೋಪಿಸಿದ್ದಾರೆ. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅದೇ ಕೃಷ್ಣನಗರ ಕ್ಷೇತ್ರದಿಂದ ಭಾರಿ ಮತಗಳ ಅಂತರದಿಂದ ಗೆದ್ದು ಸಂಸತ್ತಿಗೆ ಮರಳಿದ್ದಾರೆ.





