ಸಂಸತ್ ಭವನದ ಆವರಣದ ಮಹಾತ್ಮ ಗಾಂಧಿ ಪ್ರತಿಮೆ, ಗುಜರಾತ್ನಲ್ಲಿರುವ 182 ಮೀಟರ್ ಎತ್ತರದ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ಸೇರಿ ದೇಶ ಹಾಗೂ ವಿದೇಶಗಳಲ್ಲಿ ಸಾವಿರಾರು ಪ್ರತಿಮೆಗಳನ್ನು ವಿನ್ಯಾಸಗೊಳಿಸಿದ್ದ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರು ಬುಧವಾರ ಮಧ್ಯರಾತ್ರಿ ನೋಯ್ಡಾದ ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ 100 ವರ್ಷ ವಯಸ್ಸಾಗಿತ್ತು. ವಯೋಸಹೋಜ ಕಾಯಿಲೆಯಿಂದ ಬಳಲುತ್ತಿದ್ದ ರಾಮ್ ಸುತಾರ್ ಅವರು ತಮ್ಮ ನಿವಾಸದಲ್ಲಿ ನಿಧನರಾದರು” ಎಂದು ಅವರ ಪುತ್ರ ಅನಿಲ್ ಸುತಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಮ್ ಸುತಾರ್ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
1925ರ ಫೆ.19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದ್ದ ಸುತಾರ್ ಅವರು ಬಾಲ್ಯದಿಂದಲೇ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್ನಿಂದ ಚಿನ್ನದ ಪದಕ ಪಡೆದಿರುವ ರಾಮ್ ಸುತಾರ್ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಆರಂಭದಲ್ಲಿ ಅವರು ಅಜಂತಾ-ಎಲ್ಲೋರಾದಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆಯೊಂದಿಗೆ ಕಾರ್ಯ ನಿರ್ವಹಿಸಿದ್ದರು. ದೆಹಲಿಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಸ್ವಲ್ಪ ಸಮಯದವರೆಗೆ ಕಾರ್ಯನಿರ್ವಹಿಸಿದ ಅವರು, ಮುಂದೆ 1959 ರಲ್ಲಿ ಪೂರ್ಣಾವಧಿಯ ಸ್ವತಂತ್ರ ಶಿಲ್ಪಿಯಾಗಲು ಸರ್ಕಾರಿ ನೌಕರಿಯನ್ನು ತೊರೆದಿದ್ದರು. ಮುಂದೆ ದೆಹಲಿಯಲ್ಲಿ ತಮ್ಮದೇ ಆದ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ಸುಮಾರು 8000 ಕ್ಕೂ ಅಧಿಕ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?
ಸಂಸತ್ ಭವನದ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದ್ದು, ಫ್ರಾನ್ಸ್, ಅಮೆರಿಕ, ಇಟಲಿ, ಅರ್ಜೆಂಟೀನಾ, ರಷ್ಯಾ, ಇಂಗ್ಲೆಂಡ್, ಮಲೇಷ್ಯಾ, ಜರ್ಮನಿ, ಆಸ್ಟ್ರೇಲಿಯಾ, ಚೀನಾ, ಈಜಿಪ್ಟ್, ಪೋಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇನ್ನೂ ಅನೇಕ ದೇಶಗಳು ಸೇರಿದಂತೆ ವಿಶ್ವದಾದ್ಯಂತ 450 ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಮೆ ಸ್ಥಾಪನೆಗೆ ಆಯ್ಕೆಯಾಗಿದೆ.
ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ, ಮುಂಬೈ ಬಳಿ ನಿರ್ಮಿಸಲಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ 120 ಮೀಟರ್ ಎತ್ತರದ ಅಶ್ವಾರೋಹಿ ಪ್ರತಿಮೆ, ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ, ಮಧ್ಯಪ್ರದೇಶದ ಗಾಂಧಿ ಸಾಗರ್ ಅಣೆಕಟ್ಟಿನಲ್ಲಿರುವ 45 ಅಡಿ ಎತ್ತರದ ಚಂಬಲ್ ದೇವಿಯ ಪ್ರತಿಮೆ ಮತ್ತು ಕುರುಕ್ಷೇತ್ರದ ಬ್ರಹ್ಮ ಸರೋವರದಲ್ಲಿ ಸ್ಥಾಪಿಸಲಾದ ಕೃಷ್ಣ-ಅರ್ಜುನ ರಥದಂತಹ ಕೃತಿಗಳು ಅವರ ಅದ್ಬುತ ಕಲಾ ಸಾಧನೆಗೆ ಹಿಡಿದ ಕನ್ನಡಿಯಾಗಿವೆ.
ಕೇವಲ ಇದಷ್ಟೇ ಅಲ್ಲದೆ ಬೆಂಗಳೂರಿನಲ್ಲಿರುವ ಶಿವನ ಪ್ರತಿಮೆ, ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಪುಣೆಯ ಮೋಶಿಯಲ್ಲಿರುವ ಸಂಭಾಜಿ ಮಹಾರಾಜರ ಪ್ರತಿಮೆ ಮತ್ತು ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕದಲ್ಲಿರುವ ಬೃಹತ್ ವೀಣೆ ರಾಮ ಸುತಾರ್ ಅವರ ವಿಶಿಷ್ಟ ಪ್ರತಿಭೆಗೆ ಸಾಕ್ಷಿಗಳಾಗಿವೆ. ಅವರ ಇತ್ತೀಚಿನ ಮಹತ್ವದ ಕೃತಿಗಳಲ್ಲಿ ದಕ್ಷಿಣ ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿರುವ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆಯೂ ಸೇರಿದೆ.
ಡಾ. ಸುತಾರ್ ಅವರ ಕೃತಿಗಳು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿವೆ. ಶಿಲ್ಪಕಲೆಯ ತಂತ್ರಗಳನ್ನು ನೋಡಲು ಮತ್ತು ಕಲಿಯಲು ಪ್ರಪಂಚದಾದ್ಯಂತದ ಕಲಾವಿದರು ಅವರ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ.
ಸುತಾರ್ ಅವರ ಡಾ. ಅನಿಲ್ ಸುತಾರ್ ಅವರ ಮಗ ಒಬ್ಬ ಶಿಲ್ಪಿ ಮತ್ತು ವರ್ಣಚಿತ್ರಕಾರರಾಗಿದ್ದಾರೆ.
ಸುತಾರ್ ಅವರಿಗೆ ಕೇಂದ್ರ ಸರ್ಕಾರ 1999ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇತ್ತೀಚೆಗೆ ಮಹಾರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಮಹಾರಾಷ್ಟ್ರ ಭೂಷಣ್ ಪುರಸ್ಕಾರ’ವನ್ನು ನೀಡಿ ಗೌರವಿಸಲಾಗಿತ್ತು.






