ದುರ್ನಡತೆ, ಅನಧಿಕೃತ ಅಧಿಕಾರ ಚಲಾಯಿಸುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ ಎಂದು ಯಾರ ವಿರುದ್ಧ ನಾನು ಧನಿ ಎತ್ತಿದ್ದೆನೋ, ಅದೇ ಹಿರಿಯ ಸಯೋದ್ಯೋಗಿಯೊಬ್ಬರನ್ನು ಮಧ್ಯಪ್ರದೇಶ ಹೈಕೋರ್ಟ್ಗೆ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಸಿವಿಲ್ ಕೋರ್ಟ್ನ ನ್ಯಾಯಾಧೀಶೆ ಅದಿತಿ ಕುಮಾರ್ ಶರ್ಮಾ ಆರೋಪಿಸಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಶಾಧೋಲ್ ಕಿರಿಯ ಡಿವಿಷನ್ ಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅದಿತಿ ಅವರು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. “ನ್ಯಾಯಾಂಗ ಸೇವೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಸಂಸ್ಥೆಯನ್ನು ಅನುತ್ತೀರ್ಣಗೊಳಿಸಿಲ್ಲ. ಆದರೆ, ಸಂಸ್ಥೆ ನನ್ನನ್ನು ಅನುತ್ತೀರ್ಣಗೊಳಿಸಿದೆ” ಎಂದು ಬರೆದಿದ್ದಾರೆ.
“ದುರ್ವರ್ತನೆ ತೋರುತ್ತಿದ್ದ ಹಿರಿಯ ನ್ಯಾಯಾಧೀಶರ ವಿರುದ್ಧ ನಾನು ಧ್ವನಿ ಎತ್ತುವ ಧೈರ್ಯ ತೋರಿದ್ದೆ. ಹಲವು ವರ್ಷಗಳ ಕಾಲ ನಿರಂತರ ಕಿರುಕುಳ ಎದುರಿಸಿದ್ದೇನೆ. ಆದರೂ, ಇಲ್ಲಿಯವರೆಗೆ ಕಾನೂನುಬದ್ಧ ಮಾರ್ಗವನ್ನೇ ಅನುಸರಿಸಿದ್ದೇನೆ. ನನಗೆ ನ್ಯಾಯ ಒದಗಿಸದಿದ್ದರೂ, ವಿಚಾರಣೆಯನ್ನಾದರೂ ಮಂಜೂರು ಮಾಡುವ ನಿರೀಕ್ಷೆ ಇತ್ತು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?
“ದಾಖಲೆ ಸಹಿತ ನ್ಯಾಯಾಧೀಶರ ವಿರುದ್ಧ ದೂರು ನೀಡಿದ್ದೇನೆ. ಆದರೂ, ವಿಚರಣೆ ನಡೆಸಿಲ್ಲ. ಯಾವುದೇ ನೋಟಿಸ್ ನೀಡಿಲ್ಲ. ಬಾಧ್ಯಸ್ಥರನ್ನಾಗಿ ಮಾಡಲಾಗಿಲ್ಲ. ನನ್ನ ನೋವಿಗೆ ಕಾರಣರಾದ ನ್ಯಾಯಾಧೀಶರನ್ನು ಪ್ರಶ್ನಿಸುವ ಬದಲು ಅವರಿಗೆ ಬಹುಮಾನ ನೀಡಿ, ಶಿಫಾರಸ್ಸು ಮಾಡಿ ಪದೋನ್ನತಿ ನೀಡಲಾಗಿದೆ. ಸಮನ್ಸ್ ಬದಲು ಪೀಠವನ್ನು ನೀಡಲಾಗಿದೆ. ಇದೊಂದು ವಿಕಟ ಪ್ರಹಸನ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




