ದಟ್ಟ ಮಂಜು ಆವರಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿದ್ದು, 7 ಬಸ್ಗಳು ಮತ್ತು ಮೂರು ಕಾರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಗಳವಾರ ಮುಂಜಾನೆ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ನಡೆದಿದೆ. ದುರ್ಘಟನೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದ ನಂತರ ಬಸ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ, ಮೃತರ ದೇಹಗಳು ಸುಟ್ಟು ಕರಕಲಾಗಿವೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬಾಲ್ಡಿಯೊ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಿಗಲ್ಲು 127ರ ಬಳಿ ಬೆಳಿಗ್ಗೆ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಭಾರೀ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಹಲವಾರು ವಾಹನಗಳು ಡಿಕ್ಕಿಹೊಡೆದುಕೊಂಡಿದ್ದು, ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿವರಿಸಿರುವ ಮಥುರಾ ಎಸ್ಎಸ್ಪಿ ಶ್ಲೋಕ್ ಕುಮಾರ್, “ದಟ್ಟವಾದ ಮಂಜಿನಿಂದಾಗಿ ಪರಿಪೂರ್ಣವಾಗಿ ರಸ್ತೆ ಗೋಚರಿಸದ ಕಾರಣ, ಎದುರಿದ್ದ ವಾಹನಗಳು ಕಾಣದೆ, ವಾಹನಗಳು ಡಿಕ್ಕಿಹೊಡೆದುಕೊಂಡು ಅಪಘಾತ ಸಂಭವಿಸಿದೆ. ಸುಮಾರು ಏಳು ಬಸ್ಗಳು ಮತ್ತು ಮೂರು ಸಣ್ಣ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯ ಆಡಳಿತ ಮತ್ತು ತುರ್ತು ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ನಡೆಸಿವೆ” ಎಂದು ಹೇಳಿದ್ದಾರೆ.
#WATCH | Mathura, UP | Several buses catch fire on the Delhi-Agra Expressway. Casualties feared. Further details awaited. pic.twitter.com/9J3LVyeR3P
— ANI (@ANI) December 16, 2025
“ಇಲ್ಲಿಯವರೆಗೆ, ನಾಲ್ಕು ಸಾವುಗಳು ದೃಢಪಟ್ಟಿವೆ. ಸುಮಾರು 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಎಕ್ಸ್ಪ್ರೆಸ್ವೇಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ವಾಹಸ ಸಂಚಾರವನ್ನು ಪುನರಾರಂಭಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಮಥುರಾ ಗ್ರಾಮೀಣ ಎಸ್ಪಿ ಸುರೇಶ್ ಚಂದ್ರ ರಾವತ್ ಹೇಳುವಂತೆ, “ಮೊದಲು ಮೂರು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ನಂತರ ಏಳು ಬಸ್ಗಳು ಅಪಘಾತಕ್ಕೀಡಾಗಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿವೆ. ಎಲ್ಲ ಬಸ್ಗಳು ಬೆಂಕಿಗೆ ಆಹುತಿಯಾಗಿವೆ. ಹನ್ನೊಂದು ಅಗ್ನಿಶಾಮಕ ದಳಗಳು ಸ್ಥಳದಲ್ಲಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.
ಇದೇ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಬನಾರ್ಸಿ ಗ್ರಾಮದ ಬಳಿ ಏಳರಿಂದ ಎಂಟು ವಾಹನಗಳನ್ನು ಒಳಗೊಂಡ ಮತ್ತೊಂದು ಅಪಘಾತ ವರದಿಯಾಗಿದೆ. ಆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳು ವರದಿಯಾಗಿಲ್ಲ. ಅಲ್ಲದೆ, ದೆಹಲಿ-ಆಲ್ವಾರ್ ರಸ್ತೆಯಲ್ಲಿ ಘಾಸೇಡಾ ಗ್ರಾಮದ ಬಳಿ ಹರಿಯಾಣ ರೋಡ್ವೇಸ್ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.




