ಗುರುಕುಲ ವಸತಿ ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಗುರುಕುಲದ ಮುಖ್ಯಸ್ಥ ಮತ್ತು ಓರ್ವ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವಾರ್ಕರಿಯಲ್ಲಿರುವ ಗುರುಕುಲ ಶಾಲೆಯಲ್ಲಿ ದೌರ್ಜನ್ಯ ನಡೆದಿದೆ. ಗುರುಕುಲದ ಮುಖ್ಯಸ್ಥ ಭಗವಾನ್ ಕೊಕರೆ ಮಹಾರಾಜ್ ಮತ್ತು ಶಿಕ್ಷಕ ಪ್ರಿತೇಶ್ ಪ್ರಭಾಕರ್ ಕದಮ್ ಆರೋಪಿಗಳು ಎಂದು ವರದಿಯಾಗಿದೆ.
ಈ ಗುರುಕುಲ ಶಾಲೆಗೆ ಮಹಾರಾಷ್ಟ್ರದ ಹಲವಾರು ಭಾಗಗಳ ಬಾಲಕ ಮತ್ತು ಬಾಲಕಿಯರು ಆಧ್ಯತ್ಮಿಕ ಶಿಕ್ಷಣ ಪಡೆಯಲು ದಾಖಲಾಗುತ್ತಾರೆ. ಸಂತ್ರಸ್ತೆ ಕೂಡ ಅದೇ ರೀತಿ ದಾಖಲಾಗಿದ್ದರು. ಇದೇ ವರ್ಷದ ಜೂನ್ 12ರಂದು ಗುರುಕುಲ ಶಾಲೆಗೆ ಪ್ರವೇಶ ಪಡೆದಿದ್ದರು. ಆಕೆ ದಾಖಲಾದ ಒಂದೇ ವಾರದಲ್ಲಿ ಆಕೆಗೆ ಭಗವಾನ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದರೆಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಪಾಕ್-ಅಫ್ಘನ್ ಗಡಿ ಬಿಕ್ಕಟ್ಟು: 130 ವರ್ಷಗಳ ಗಡಿ ಇತಿಹಾಸ ಹೇಳುವುದೇನು?
“ನಾನು ವಸತಿ ಕೊಠಡಿಯಲ್ಲಿ ಒಬ್ಬಂಟಿಯಾಗಿದ್ದಾಗಲೆಲ್ಲ ಆತ ನಮ್ಮ ಕೋಣೆಗೆ ಬಂದು, ನನ್ನನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು. ಎನ್ನ ಎದೆ ಮುಟ್ಟುತ್ತಿದ್ದರು. ನಾನು ವಿರೋಧ ವ್ಯಕ್ತಪಡಿಸಿದಾಗ, ನನಗೆ ಶಿಕ್ಷಕ ಪ್ರಿತೇಶ್ ಪ್ರಭಾಕರ್ ಕದಮ್ ಬೆದರಿಕೆ ಹಾಕಿದ್ದರು. ಭಗವಾನ್ಗೆ ದೊಡ್ಡವರ ಸಂಪರ್ಕವಿದ್ದು, ನನ್ನ ತಂದೆಯನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ, ಕುಟುಂಬಕ್ಕೆ ತೊಂದರೆ ಕೊಡಬಹುದು ಮತ್ತು ನನ್ನ ಸಹೋದರನನ್ನು ಕೊಲ್ಲಬಹುದು’ ಎಂಬುದಾಗಿ ಬೆದರಿಕೆ ಹಾಕಿದ್ದರು” ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ನಿರಂತರವಾಗಿ ಕಿರುಕುಳವನ್ನು ಅನುಭವಿಸಿದ್ದ ಸಂತ್ರಸ್ತೆ ಸೋಮವಾರ ತನ್ನ ತಂದೆಯ ಬಳಿ ತನಗಾಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಳಿಕ, ಸಂತ್ರಸ್ತೆ ಮತ್ತು ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಮತ್ತು 17ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




