ಆ್ಯಸಿಡ್ ದಾಳಿ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ತೀವ್ರ ವಿಳಂಬವಾಗುತ್ತಿದ್ದು, ದೀರ್ಘಕಾಲದ ವಿಳಂಬ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೇಶಾದ್ಯಂತ ಬಾಕಿ ಇರುವ ಆ್ಯಸಿಡ್ ದಾಳಿ ಪ್ರಕರಣ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಎಲ್ಲ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳಿಗೆ ನಿರ್ದೇಶನ ನೀಡಿದೆ.
ಗುರುವಾರ, ಆ್ಯಸಿಡ್ ದಾಳಿ ಪ್ರಕರಣಗಳ ವಿಳಂಬದ ಕುರಿತು ಆ್ಯಸಿಡ್ ದಾಳಿ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಗಳನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ವಿಚಾರಣೆಗಳ ವಿಳಂಬವು ವ್ಯವಸ್ಥೆಯ ವೈಫಲ್ಯ ಮತ್ತು ಚಾಚಿಕೆಗೇಡಿಗೆ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿದ್ದ, 2009ರಲ್ಲಿ ಆ್ಯಸಿಡ್ ದಾಳಿಗೆ ಗುರಿಯಾಗಿದ್ದ ದೆಹಲಿ ಸಂತ್ರಸ್ತೆ, “ನನ್ನ ಮೇಲೆ 2009ರಲ್ಲಿ ಆ್ಯಸಿಡ್ ದಾಳಿ ನಡೆದಿದೆ. ಆದರೆ, ಪ್ರಕರಣ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ನಡೆಯುತ್ತಲೇ ಇದೆ” ಎಂದು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು ತೀರಿಸಿಕೊಳ್ಳುವ ಕುತಂತ್ರಕ್ಕೆ ಸರ್ಕಾರ ಕೈಹಾಕಿದೆಯೇ?
ಪ್ರಕರಣವು 2013ರವರೆಗೆ ಯಾವುದೇ ಪ್ರಗತಿಯನ್ನೂ ಕಂಡಿರಲಿಲ್ಲ. ಪ್ರಕರಣವು ಪ್ರಸ್ತುತ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಯ ಹಂತದಲ್ಲಿದೆ. ಆದಾಗ್ಯೂ, ತೀರ್ಪು ಇನ್ನೂ ಪ್ರಕಟವಾಗಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
“ರಾಷ್ಟ್ರದ ರಾಜಧಾನಿಯಲ್ಲಿಯೇ 16 ವರ್ಷಗಳ ಹಿಂದಿನ ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದರೆ, ದೇಶದ ಇತರ ಭಾಗಗಳ ಸ್ಥಿತಿ ಹೇಗಿರಬಹುದು? ಇದು ಸಮಗ್ರ ವ್ಯವಸ್ಥೆಗೆ ನಾಚಿಕೆಗೇಡು” ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ ಸೂರ್ಯ ಕಾಂತ್, “ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸುವುದೇ ಸೂಕ್ತ” ಎಂದಿದ್ದಾರೆ. ದಿನನಿತ್ಯದ ವಿಚಾರಣೆ ಕೋರಿ ಅರ್ಜಿ ಸಲ್ಲಿಸುವಂತೆ ಸಂತ್ರಸ್ತೆಗೆ ಸಲಹೆ ನೀಡಿದ್ದಾರೆ.




