ಕಾನೂನುಬದ್ಧ ಹಕ್ಕು-ಆಧಾರಿತ ಮನರೇಗಾ ಕಾಯ್ದೆ, ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿ ನೀಡುತ್ತದೆ. ಇದರಿಂದಾಗಿ ಕೋಟ್ಯಂತರ ಜನರು ಬಡತನದಿಂದ ಮೇಲೆದ್ದು, ಮಹಿಳೆಯರ ಸಬಲೀಕರಣ, ಗ್ರಾಮೀಣ ಮೂಲಸೌಕರ್ಯ ಸುಧಾರಣೆ ಮತ್ತು ಕೃಷಿ ಉತ್ಪಾದಕತೆ ಹೆಚ್ಚಳವಾಗಿದೆ.
ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ– ಜಿ ರಾಮ್ ಜಿ) ಕಾಯ್ದೆಯನ್ನು ಹಿಂಪಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕಾಯ್ದೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಜನವರಿ 10ರಿಂದ ಫೆಬ್ರವರಿ 25ರವರೆಗೆ ನಾಲ್ಕು ಹಂತಗಳಲ್ಲಿ ‘ಮನರೇಗಾ ಬಚಾವೋ ಅಭಿಯಾನ’ವನ್ನು ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮನರೇಗಾ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಕುರಿತು ಇತ್ತೀಚೆಗೆ ತೀವ್ರ ವಿವಾದಿತ ಹೇಳಿಕೆಗಳನ್ನು ನೀಡಿದ್ದು, “ಮನರೇಗಾ ಯೋಜನೆ ʼಭ್ರಷ್ಟಾಚಾರದ ಸಂಕೇತʼ ಎಂದಿದ್ದು, ಮನರೇಗಾ ಕಾರ್ಮಿಕರ ಹೆಸರಿನಲ್ಲಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ನಕಲಿ ಹಾಜರಾತಿ, ಯಂತ್ರಗಳ ಬಳಕೆ ಮತ್ತು ಒಂದೇ ರಸ್ತೆಗಳನ್ನು ಪದೇ ಪದೆ ಹೊಸದು ಎಂದು ತೋರಿಸಲಾಗುತ್ತಿತ್ತು. ಆದರೂ ಕಾಂಗ್ರೆಸ್ ಪಕ್ಷವು ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಭ್ರಷ್ಟಾಚಾರವನ್ನು ರಕ್ಷಿಸುತ್ತಿದೆ. ಹೊಸದಾಗಿ ಜಾರಿಗೆ ತಂದಿರುವ ವಿಕ್ಷಿತ್ ಭಾರತ್ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯ ವಿರುದ್ಧದ ಪ್ರಸ್ತಾವಿತ ಆಂದೋಲನವು ರಾಜಕೀಯ ಪ್ರೇರಿತವಾಗಿದೆ” ಎಂದು ಆರೋಪಿಸಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಮನರೇಗಾ ಯೋಜನೆಯ ಸಾಧನೆಗಳನ್ನು ಅಪಹಾಸ್ಯ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಚೌಹಾಣ್ ಅವರ ಆರೋಪಗಳು ಆಧಾರರಹಿತವಾಗಿದ್ದು, ಆಯ್ದ ಸತ್ಯಗಳ ಮೇಲೆ ನಿಂತಿವೆ. ಮನರೇಗಾ ಯೋಜನೆಯನ್ನು 2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತು. ಈ ಯೋಜನೆ ಗ್ರಾಮೀಣ ಭಾರತದಲ್ಲಿ ಬಡತನ ನಿರ್ಮೂಲನೆಗೆ ಮಹತ್ವದ ಕೊಡುಗೆ ನೀಡಿದೆ. ಇದು ಕಾನೂನುಬದ್ಧ ಹಕ್ಕು-ಆಧಾರಿತ ಮನರೇಗಾ ಕಾಯ್ದೆ, ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿ ನೀಡುತ್ತದೆ. ಇದರಿಂದಾಗಿ ಕೋಟ್ಯಂತರ ಜನರು ಬಡತನದಿಂದ ಮೇಲೆದ್ದು, ಮಹಿಳೆಯರ ಸಬಲೀಕರಣ, ಗ್ರಾಮೀಣ ಮೂಲಸೌಕರ್ಯ ಸುಧಾರಣೆ ಮತ್ತು ಕೃಷಿ ಉತ್ಪಾದಕತೆ ಹೆಚ್ಚಳವಾಗಿದೆ. ಅಲ್ಲದೆ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಮನರೇಗಾ ಯೋಜನೆಯನ್ನು ʼಬಡತನ ನಿರ್ಮೂಲನೆಯ ಮಾದರಿʼ ಎಂದು ಪ್ರಶಂಸಿಸಿವೆ.
ಚೌಹಾಣ್ ಅವರು ಮನರೇಗಾ ಯೋಜನೆಯನ್ನು ಟೀಕಿಸುತ್ತ, “ಮೋದಿ ಸರ್ಕಾರದ ಅಡಿಯಲ್ಲಿ ಮನರೇಗಾವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು. 2014ರ ನಂತರ ಮೋದಿ ಸರ್ಕಾರವು ಮನರೇಗಾ ಯೋಜನೆಗೆ 8.48 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ. ಆದರೆ ಯುಪಿಎ ಅವಧಿಯಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ ಕೇವಲ ₹2 ಲಕ್ಷ ಕೋಟಿ ಮಾತ್ರ ಎಂದು ಹೋಲಿಕೆ ಮಾಡಿದ್ದಾರೆ. ಆದರೆ ಅವರೇ ಹೇಳಿದಂತೆ ಭ್ರಷ್ಟಾಚಾರದ ಯೋಜನೆಯನ್ನು ಮುಂದುವರೆಸಿದ್ದೂ ಅಲ್ಲದೆ ಏಕೆ ಹೆಚ್ಚು ಹಣ ಖರ್ಚು ಮಾಡಿದರು. ವಾಸ್ತವವಾಗಿ, ಮೋದಿ ಸರ್ಕಾರದ ಅಡಿಯಲ್ಲಿ ಮನರೇಗಾ ಯೋಜನೆಯು ಕೋವಿಡ್ ಸಮಯದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಉಳಿಸಿದೆ. ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ. ಭ್ರಷ್ಟಾಚಾರದ ಆರೋಪಗಳು ಇದ್ದರೂ, ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ತಂತ್ರಜ್ಞಾನ ಬಳಕೆಯಿಂದ ಅದನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನು ಚೌಹಾಣ್ ಅವರೇ ಸ್ವೀಕರಿಸಿದ್ದಾರೆ.
ಈಗ ಹೊಸ VB-G RAM G ಕಾಯಿದೆಯನ್ನು ಪರಿಶೀಲಿಸೋಣ. ಚೌಹಾಣ್ ಅವರು ಇದನ್ನು ʼಭ್ರಷ್ಟಾಚಾರ ಮುಕ್ತ, ತಂತ್ರಜ್ಞಾನ ಆಧಾರಿತ ಮತ್ತು ಕಾರ್ಮಿಕ ಕೇಂದ್ರಿತ ಸುಧಾರಣೆʼ ಎಂದು ಕರೆದಿದ್ದಾರೆ. ಆದರೆ ವಿರೋಧ ಪಕ್ಷಗಳು ಇದನ್ನು ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಕ್ರಮ ಎಂದು ಟೀಕಿಸಿವೆ.
ಏಕೆಂದರೆ, ಹಣಕಾಸು ವಿಭಜನೆ ಬದಲಾವಣೆ: ಹಿಂದಿನ 90:10(ಕೇಂದ್ರ-ರಾಜ್ಯ) ಬದಲಿಗೆ 60:40 ಮಾಡಲಾಗಿದ್ದು, ರಾಜ್ಯಗಳ ಮೇಲೆ ಹೆಚ್ಚು ಹೊರೆ ಬೀಳುತ್ತದೆ. ಹಾಗಾಗಿ ಕಾಂಗ್ರೆಸ್ ಹೊರತುಪಡಿಸಿಯೂ ಎಲ್ಲ ಎಡಪಕ್ಷಗಳು ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಟೀಕಿಸಿವೆ.
ಗ್ರಾಮ ಸಭೆಗಳು ಮತ್ತು ಪಂಚಾಯತ್ಗಳ ಅಧಿಕಾರವನ್ನು ಕಡಿಮೆ ಮಾಡಿ, ಕೇಂದ್ರದ ಡಿಜಿಟಲ್ ನಿಯಂತ್ರಣವನ್ನು ಹೆಚ್ಚಿಸಲಾಗಿದೆ. ಇದರಿಂದ ಸ್ಥಳೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ. ಸ್ಥಳೀಯ ಆಡಳಿತಗಳಿಗೆ, ಅಧಿಕಾರಿಗಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇಲ್ಲದಂತಾಗುತ್ತದೆ.
ಕೆಲಸದ 100 ದಿನಗಳನ್ನು 125 ದಿನಗಳಿಗೆ ಹೆಚ್ಚಿಸಿದ್ದರೂ, ವರ್ಷಕ್ಕೆ 60 ದಿನಗಳ ಕಡ್ಡಾಯ ಕೆಲಸ ವಿರಾಮವನ್ನು ಜಾರಿಗೊಳಿಸಲಾಗಿದೆ. ಇದರಿಂದ ನಿರುದ್ಯೋಗ ಸಾಮಾನ್ಯವಾಗುತ್ತದೆ. ಉದ್ಯೋಗ ಖಾತರಿ ದುರ್ಬಲ ಆಗುವುದಲ್ಲದೆ, ಕಾರ್ಮಿಕರನ್ನು ಜಮೀನ್ದಾರರ ಗುಲಾಮರನ್ನಾಗಿ ಮಾಡುವ ಹುನ್ನಾರವಾಗಿದೆ.
ಚೌಹಾಣ್ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷವನ್ನು ʼಭ್ರಷ್ಟಾಚಾರದ ಡಿಎನ್ಎʼ ಎಂದು ಟೀಕಿಸುತ್ತಿದ್ದು, ಅವರ ಪ್ರತಿಭಟನೆಯನ್ನು ʼಭ್ರಷ್ಟಾಚಾರ ಬಚಾವೋ ಸಂಗ್ರಾಮʼ ಎಂದು ಕರೆದಿರುವುದು ರಾಜಕೀಯ ದಾಳಿ ಮಾತ್ರ.
ಕಾಂಗ್ರೆಸ್ ನಾಯಕರು ಮತ್ತು ಇತರರು ಕೇಂದ್ರದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು, ಗಾಂಧೀಜಿಯ ತತ್ವಗಳ ಮೇಲೆ ನಿಂತ ಯೋಜನೆಯಿಂದ ಅವರ ಹೆಸರನ್ನು ತೆಗೆಯುವುದು ರಾಜಕೀಯ ಪ್ರೇರಿತವಾಗಿದ್ದರೂ, ಗಾಂಧೀಜಿಯ ಆದರ್ಶಗಳ ಮೇಲಿನ ಆಕ್ರಮಣ. ಗ್ರಾಮೀಣ ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿದ್ದೀರಾ? ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಜ.8ರಿಂದ ಕಾಂಗ್ರೆಸ್ನಿಂದ ‘ಮನರೇಗಾ ಬಚಾವೋ ಅಭಿಯಾನ’
ಚೌಹಾಣ್ ಅವರ ಹೇಳಿಕೆಗಳು ಮನರೇಗಾ ಯೋಜನೆಯ ಸಾಧನೆಗಳನ್ನು ಕಡೆಗಣಿಸಿ, ಹೊಸ ಕಾಯಿದೆಯನ್ನು ಉತ್ತೇಜಿಸುವ ರಾಜಕೀಯ ತಂತ್ರವಾಗಿ ಕಾಣುತ್ತವೆ. ಮನರೇಗಾ ಗ್ರಾಮೀಣ ಭಾರತದ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಮೂಲಾಧಾರವಾಗಿದ್ದು, ಅದನ್ನು ದುರ್ಬಲಗೊಳಿಸುವುದು ಬಡವರ ಮೇಲಿನ ಆಕ್ರಮಣವೇ ಸರಿ. ಹೊಸ ಕಾಯಿದೆಯು ಉದ್ಯೋಗ ಖಾತರಿಯನ್ನು ಹೆಚ್ಚಿಸುವಂತೆ ಕಾಣುತ್ತದೆಯಾದರೂ, ಅದರ ಕೇಂದ್ರೀಕರಣ ಮತ್ತು ಹಣಕಾಸು ಬದಲಾವಣೆಗಳು ದೀರ್ಘಕಾಲೀನ ಹಾನಿಯನ್ನು ಉಂಟುಮಾಡಬಹುದು. ಗ್ರಾಮೀಣ ಭಾರತದ ಅಭಿವೃದ್ಧಿಗೆ ಮನರೇಗಾದಂತಹ ಹಕ್ಕು-ಆಧಾರಿತ ಯೋಜನೆಗಳು ಅಗತ್ಯ. ಹಾಗಾಗಿ ಅವುಗಳನ್ನು ರಾಜಕೀಯಕ್ಕೆ ಬಲಿಕೊಡಬಾರದು.





