ತಿರುಪತಿ ಭಕ್ತರಿಗೆ ಶಾಕ್ ನೀಡುವಂತಹ ವಿಚಾರವು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ. ಉತ್ತರಾಖಂಡದ ಡೇರಿಯೊಂದು ತಿರುಪತಿ ಲಡ್ಡು ತಯಾರಿಕೆಗಾಗಿ ತಿರುಮಲ ತಿರುಪತಿ ದೇವಸ್ಥಾನಂಗೆ (ಟಿಟಿಡಿ) ಒಟ್ಟು ಐದು ವರ್ಷ ಕಾಲ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿರುವುದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ.
ಭೋಲೆ ಬಾಬಾ ಆರ್ಗಾನಿಕ್ ಡೇರಿ ಟಿಟಿಡಿಗೆ 2019ರಿಂದ 2024ರವರೆಗಿನ ಐದು ವರ್ಷ ಅವಧಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ 68 ಲಕ್ಷ ಕೆಜಿ ತುಪ್ಪವನ್ನು ಸರಬರಾಜು ಮಾಡಿದೆ. ಡೇರಿ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಖರೀದಿಸಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ತಿರುಪತಿ ಲಡ್ಡು ಪ್ರಸಾದ ಬಳಸದಿರಲು ಕರ್ನಾಟಕದ ಅರ್ಚಕರ ಸಂಘ ನಿರ್ಧಾರ
ಇನ್ನು ಮೊನೊಡಿಗ್ಲಿಸರೈಡ್ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್ನಂತಹ ವಿವಿಧ ರಾಸಾಯನಿಕಗಳನ್ನೂ ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದೆ. ಆರೋಪಿ ಅಜಯ್ ಕುಮಾರ್ ಸುಗಂಧ್ ಬಂಧನದ ನಂತರ ಈ ಮಾಹಿತಿ ಬಹಿರಂಗವಾಗಿದೆ. ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಲಾದ ಎಸ್ಐಟಿಯ ವರದಿ ಪ್ರಕಾರ ಡೇರಿಯನ್ನು ಉತ್ತರಾಖಂಡದ ಭಗವಾನ್ಪುರದಲ್ಲಿ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸಿಬಿಐ ಪ್ರಕಾರ ಆರೋಪಿಗಳು ನಕಲಿ ತುಪ್ಪ ಉತ್ಪಾದನಾ ಘಟಕವನ್ನು ಸ್ಥಾಪಿಸಿ, ಹಾಲು ಸಂಗ್ರಹಣೆ ಮತ್ತು ಪಾವತಿ ಮಾಡಿದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಈ ಡೇರಿಯನ್ನು 2022ರಲ್ಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ ಇತರ ಡೇರಿಗಳ ಒಪ್ಪಂದದೊಂದಿಗೆ ಬಿಡ್ ಗೆದ್ದು ಭೋಲೆ ಬಾಬಾ ಆರ್ಗಾನಿಕ್ ಡೇರಿ ಟಿಟಿಡಿಗೆ ತುಪ್ಪ ಪೂರೈಸುವುದನ್ನು ಮುಂದುವರೆಸಿತ್ತು. ಹಾಗೆಯೇ ಈ ಬಿಡ್ಗಾಗಿ ತಿರುಪತಿ ಮೂಲದ ವೈಷ್ಣವಿ ಡೇರಿ, ಉತ್ತರ ಪ್ರದೇಶ ಮೂಲದ ಮಾಲ್ ಗಂಗಾ ಮತ್ತು ತಮಿಳುನಾಡು ಮೂಲದ ಎಆರ್ ಡೇರಿ ಫುಡ್ಸ್ ಅನ್ನು ಬಳಸಿಕೊಂಡಿತ್ತು.
ಈ ಡೇರಿಯಿಂದ ಸರಬರಾಜು ಮಾಡಲಾದ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ತುಪ್ಪದ ದಾಸ್ತಾನುಗಳ ನಾಲ್ಕು ಕಂಟೇನರ್ಗಳನ್ನು ಕಳೆದ ವರ್ಷ ಟಿಟಿಡಿ ತಿರಸ್ಕರಿಸಿತ್ತು. ಆದರೆ ಭೋಲೆ ಬಾಬಾ ಡೇರಿಯು ಇದೇ ಕಂಟೇನರ್ ಅನ್ನು ಭೋಲೆ ಬಾಬಾ ಡೇರಿ, ವೈಷ್ಣವಿ ಡೇರಿ ಮೂಲಕ ಟಿಟಿಡಿಗೆ ಹಿಂತಿರುಗಿಸಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ತಿರುಪತಿ ಲಡ್ಡು ವಿವಾದ: ಸಿಬಿಐ ಒಳಗೊಂಡ ಎಸ್ಐಟಿ ತಂಡದಿಂದ ತನಿಖೆಗೆ ಸುಪ್ರೀಂ ಆದೇಶ
ಎಫ್ಎಸ್ಎಸ್ಎಐ ಅಧಿಕಾರಿಗಳು ಮತ್ತು ಎಸ್ಐಟಿ ನಡೆಸಿದ ತನಿಖೆಯ ನಂತರ ಕಲಬೆರಕೆ ತುಪ್ಪದ ಕಂಟೇನರ್ಗಳನ್ನು ಒಳಗೊಂಡ ಟ್ಯಾಂಕರ್ಗಳು ಭೋಲೆ ಬಾಬಾ ಡೇರಿ ಬದಲಾಗಿ ನೇರವಾಗಿ ವೈಷ್ಣವಿ ಡೇರಿ ಸ್ಥಾವರಕ್ಕೆ ಸಮೀಪವಿರುವ ಸ್ಥಳೀಯ ಕಲ್ಲುಗಣಿಗಾರಿಕೆ ಘಟಕಕ್ಕೆ ತಲುಪಿಸಲಾಗಿದೆ. ಅದಾದ ಬಳಿಕ ವೈಷ್ಣವಿ ಡೇರಿಯು ಟ್ರಕ್ಗಳ ಮೇಲಿನ ಲೇಬಲ್ಗಳನ್ನು ಬದಲಾಯಿಸಿ ಅದೇ ತುಪ್ಪದ ಗುಣಮಟ್ಟವನ್ನು ಕೊಂಚ ಹೆಚ್ಚಿಸಿ 2024ರಲ್ಲಿ ತಿರುಪತಿಗೆ ಹಿಂತಿರುಗಿಸಿದೆ. ಸಿಬಿಐ ಪ್ರಕಾರ ತಿರುಪತಿಯಲ್ಲಿ ಭಕ್ತಾದಿಗಳಿಗೆ ನೀಡಲಾಗುವ ಲಡ್ಡು ಪ್ರಸಾದಗಳ ತಯಾರಿಕೆಯಲ್ಲಿ ಅದೇ ತುಪ್ಪವನ್ನು ಬಳಸಲಾಗಿದೆ.
ಏನಿದು ತಿರುಪತಿ ಲಡ್ಡು ವಿವಾದ?
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಹಿಂದಿನ YSRCP ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಸಲು ಕಳಪೆ ಗುಣಮಟ್ಟದ, ಪ್ರಾಣಿಗಳ ಕೊಬ್ಬು ಮಿಶ್ರಿತ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು 2024ರ ಸೆಪ್ಟೆಂಬರ್ನಲ್ಲಿ ಆರೋಪಿಸಿದ್ದಾರೆ. ಪ್ರಯೋಗಾಲಯ ವರದಿಯೂ ಇದನ್ನು ಸಾಬೀತುಪಡಿಸಿದೆ ಎಂದು ಹೇಳಲಾಗಿದೆ.
ಈ ವಿವಾದವು ಆಂಧ್ರಪ್ರದೇಶದಲ್ಲಿ ರಾಜಕೀಯ ಮೇಲಾಟಕ್ಕೂ ಕಾರಣವಾಗಿತ್ತು. ಈಗಾಗಲೇ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ರಾಜಕೀಯಕ್ಕಾಗಿ ದೇವಸ್ಥಾನದ ಹೆಸರನ್ನು ಬಳಸದಂತೆ ಸೂಚಿಸಿದೆ. ಸದ್ಯ, ಈ ಪ್ರಕರಣದ ಬಗ್ಗೆ ಸಿಬಿಐ ಒಳಗೊಂಡ ಎಸ್ಐಟಿ ತಂಡ ತನಿಖೆ ಮುಂದುವರೆದಿದೆ.





