ಬಿಹಾರದಲ್ಲಿ ಭಾರೀ ವಿವಾದ, ಆತಂಕ ಸೃಷ್ಟಿಸಿ ಲಕ್ಷಾಂತರ ಮತದಾರರನ್ನು ಹೊರಗಿಟ್ಟಿದ್ದ ಮತದಾರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಈಗ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದೆ. ಚುನಾವಣಾ ಆಯೋಗವು ಬಂಗಾಳದಲ್ಲಿ ಎಸ್ಐಆರ್ ಆಋಂಭಿಸಿದ್ದು, ತಮ್ಮ ದಾಖಲೆಗಳನ್ನು ತಪ್ಪುಗಳು ಇರುವ ಕಾರಣಕ್ಕೇ ತಮ್ಮನ್ನು ಈ ದೇಶದ ನಾಗರಿಕರೇ ಅಲ್ಲ, ಮತದಾನಕ್ಕೆ ಅರ್ಹರಲ್ಲವೆಂದು ಹೊರಹಾಕಿಬಿಡಬಹುದು ಎಂಬ ಆತಂಕದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಐಆರ್ ಆರಂಭವಾದ ಬಳಿಕ ಬಂಗಾಳದಲ್ಲಿ, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾ ಪಟ್ಟಣದ ನಿವಾಸಿ ಜಹೀರ್ ಮಾಲ್ (30) ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಹೀರ್ ಅವರ ಅಧಿಕೃತ ದಾಖಲೆ ಪತ್ರವೊಂದರಲ್ಲಿ ‘ಸ್ಪೆಲ್ಲಿಂಗ್’ ತಪ್ಪು ಇರುವ ಕಾರಣಕ್ಕಾಗಿ, ಅವರು ಮತಪಟ್ಟಿಯಲ್ಲಿ ಹೆಸರು ಕಳೆದುಕೊಳ್ಳಬಹುದು ಎಂದು ಖಿನ್ನತೆಗೆ ಒಳಗಾಗಿದ್ದರು. ಅದೇ ಕಾರಣಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
“ಅವರು ಕಳೆದ ಕೆಲವು ವಾರಗಳಿಂದ ತಮ್ಮ ದಾಖಲೆಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಸಂಬಂಧಿತ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಆದರೂ, ದಾಖಲೆಗಳನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ದಾಖಲೆಯಲ್ಲಿನ ಸಣ್ಣ ತಪ್ಪಿನ ಕಾರಣಕ್ಕಾಗಿ ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ತನ್ನ ಪೌರತ್ವ ಅಥವಾ ಮತದಾನದ ಅರ್ಹತೆಯನ್ನು ದಢಪಡಿಸಲು ಸಾಧ್ಯವಾಗದೇ ಹೊಗಬಹುದು ಎಂಬ ಆತಂಕ ಅವರಲ್ಲಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಉತ್ತರಪ್ರದೇಶ | ಹೆಚ್ಚುತ್ತಲೇ ಇದೆ ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ; ಕಣ್ಣು-ಕಿವಿ -ಬಾಯಿ ಮುಚ್ಚಿ ಕೂತ ಯೋಗಿ
ಇದೇ ರೀತಿಯಲ್ಲಿ ಬಂಗಾಳದಲ್ಲಿ ಒಂದೇ ವಾರದೊಳಗೆ 7 ಮಂದಿ ಆತ್ಮಹತ್ಯೆಯ ತಪ್ಪು ಹಾದಿ ತುಳಿದಿದ್ದಾರೆ. ‘ಎಸ್ಐಆರ್ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪುಗಳ ಕಾರಣಕ್ಕಾಗಿ ತಮ್ಮ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕಬಹುದು ಎಂಬ ಭಯದಲ್ಲಿ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ವಾರ, ಬಂಗಾಳದ ಕೂಚ್ಬೆಹಾರ್ನಲ್ಲಿ 70 ವರ್ಷ ರೈತ ಖೈರುಲ್ ಶೇಖ್ ಅವರು ತಮ್ಮ ದಾಖಲೆಗಳಲ್ಲಿ ತಪ್ಪುಗಳಿವೆ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




