2020ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಜಾಮೀನು ನಿರಾಕರಣೆಯನ್ನು ಖಂಡಿಸಿ ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅವರ ಘೋಷಣೆಗಳು ಆಕ್ಷೇಪಾರ್ಹವಾಗಿವೆ ಎಂದು ವಿದ್ಯಾರ್ಥಿಗಳ ವಿರುದ್ಧ ಜೆಎನ್ಯು ಆಡಳಿತವು ದೂರು ದಾಖಲಿಸಿದೆ. ಪೊಲೀಸರು ಎಫ್ಐಆರ್ಅನ್ನೂ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯು ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸುವುದರ ಜೊತೆಗೆ, 2020ರ ಜನವರಿ 5ರಂದು ಕ್ಯಾಂಪಸ್ನಲ್ಲಿ ಮುಸುಕುಧಾರಿ ಗುಂಪೊಂದು ನಡೆಸಿದ್ದ ಹಿಂಸಾಚಾರವನ್ನು ಗುರುತಿಸುವ ‘ಪ್ರತಿರೋಧ’ ಕಾರ್ಯಕ್ರಮವೂ ಆಗಿತ್ತು. ಅಂದು (2020ರ ಜ.5) ಮುಸುಕುಧಾರಿ ದಾಳಿಕೋರರ ಗುಂಪೊಂದು ಕ್ಯಾಂಪಸ್ನಲ್ಲಿ ಎಡಪಂಥೀಯ ವಿಚಾರಧಾರೆಗಳುಳ್ಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ದಾಳಿ ನಡೆಸಿತ್ತು. ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆಗೈದಿತ್ತು. ಗಲಭೆ ಸೃಷ್ಟಿಸಿತ್ತು. ಘಟನೆಯಲ್ಲಿ ಸುಮಾರು 31 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಗಾಯಗಳಾಗಿದ್ದವು. ಕ್ಯಾಂಪಸ್ನ ಆಸ್ತಿಗಳಿಗೂ ಹಾನಿಯಾಗಿತ್ತು. ಆ ದಾಳಿಕೋರರು ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಆದರೆ, ಆ ಘಟನೆಗೆ ಸಂಬಂಧಿದಂತೆ ಜೆಎನ್ಯು ಆಡಳಿತ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳೂ ಇವೆ.
ಸೋಮವಾರ ನಡೆದ ಪ್ರತಿಭಟನೆಯ ಕಾರಣಕ್ಕಾಗಿ, ವಿದ್ಯಾರ್ಥಿಗಳ ವಿರುದ್ಧ ಜೆಎನ್ಯು ಆಡಳಿತದ ತ್ವರಿತ ಕ್ರಮ, ಪೊಲೀಸರು ತಕ್ಷಣವೇ ದಾಖಲಿಸಿದ ಎಫ್ಐಆರ್ಗಳೂ ಈಗ ಚರ್ಚೆಯಲ್ಲಿವೆ. 2020ರಲ್ಲಿ ಕ್ಯಾಂಪಸ್ನಲ್ಲಿ ಆಪಾದಿತ ಎಬಿವಿಪಿ ಗೂಂಡಾಗಳು ನಡೆಸಿದ ಗಲಭೆಯಲ್ಲಿ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಆಡಳಿತವು, ಈಗ, ಘೋಷಣೆಗಳ ಕಾರಣಕ್ಕೆ ತ್ವರಿತ ಕ್ರಮಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಲಾಗುತ್ತಿದೆ. ಜೆಎನ್ಯು ಆಡಳಿತವು ಬಿಜೆಪಿ ಮತ್ತು ಬಲಪಂಥೀಯ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಮೋದಿ-ಶಾ ಅಣತಿಗೆ ಸಿಲುಕಿದೆ ಎಂಬ ಆರೋಪಗಳಿಗೆ ಕಾರಣವೂ ಆಗಿದೆ.
ಜೆಎನ್ಯು ಆಡಳಿತವು ದೆಹಲಿ ಪೊಲೀಸರಿಗೆ ದೂರು ಪತ್ರ ಬರೆದಿದ್ದು; “ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕೆಲವು ವಿದ್ಯಾರ್ಥಿಗಳು ‘ಅತ್ಯಂತ ಆಕ್ಷೇಪಾರ್ಹ, ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಇದು ಸುಪ್ರೀಂ ಕೋರ್ಟ್ ತೀರ್ಪಿನ ನೇರ ತಿರಸ್ಕಾರವಾಗಿದೆ. ಸಾಂವಿಧಾನಿಕ ಸಂಸ್ಥೆ, ಪ್ರಜಾಪ್ರಭುತ್ವದ ಸ್ಥಾಪಿತ ಮಾನದಂಡಗಳನ್ನು ಅಗೌರವಿಸಿದೆ. ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು” ಎಂದು ಹೇಳಿದೆ.
ತನ್ನ ದೂರಿನಲ್ಲಿ ಆಡಳಿತವು ಹಾಲಿ ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ’ದ (ಜೆಎನ್ಯುಎಸ್ಯು) ಅಧ್ಯಕ್ಷೆ ಅದಿತಿ ಮಿಶ್ರಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಹೆಸರಿಸಿದೆ. ಅವರ ಘೋಷಣೆಗಳು ‘ಸಾರ್ವಜನಿಕ ಸುವ್ಯವಸ್ಥೆ, ಕ್ಯಾಂಪಸ್ ಸಾಮರಸ್ಯ ಹಾಗೂ ಭದ್ರತೆ’ಯನ್ನು ಗಂಭೀರವಾಗಿ ಅಡ್ಡಿಪಡಿಸುವ ರೀತಿಯಲ್ಲಿದ್ದವು ಎಂದು ಆರೋಪಿಸಿದೆ.
ಅಲ್ಲದೆ, ವಿದ್ಯಾರ್ಥಿಗಳ ಘೋಷಣೆಗಳು ‘ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬೆಂಬಲಿಸುವ ನಗರ ನಕ್ಸಲ್ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಅವರ ಆರೋಪದಂತೆ ಜೆಎನ್ಯು ಆಡಳಿತವು ಆಂತರಿಕ ತನಿಖೆಗೂ ಆದೇಶಿಸಿದೆ.
“2020ರ ಜನವರಿ 5ರಂದು ಕ್ಯಾಂಪಸ್ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಲು ಪ್ರತಿ ವರ್ಷ ವಿದ್ಯಾರ್ಥಿಗಳು ಜ.5ರಂದು ಪ್ರತಿರೋಧ ಸಭೆ ನಡೆಸುತ್ತಾರೆ. ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕೂಗಲಾದ ಘೋಷಣೆಗಳು ಸೈದ್ಧಾಂತಿಕವಾಗಿದ್ದವು. ಯಾರ ಮೇಲೂ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲಾಗಿಲ್ಲ. ಘೋಷಣೆಗಳು ಯಾರನ್ನೂ ಉದ್ದೇಶಿಸಿಲ್ಲ” ಎಂದು ಅದಿತಿ ಮಿಶ್ರಾ ಹೇಳಿದ್ದಾರೆ.
ಮಾಧ್ಯಮಗಳ ವಿರುದ್ಧವೂ ವಿದ್ಯಾರ್ಥಿ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. “ಮಾಧ್ಯಮಗಳು ವಿದ್ಯಾರ್ಥಿಗಳ ಪ್ರತಿರೋಧ ಕಾರ್ಯಕ್ರಮವನ್ನು ತಪ್ಪಾಗಿ ಬಿಂಬಿಸಿ ವರದಿ ಮಾಡುತ್ತಿವೆ. ಪತ್ರಿಕಾ ನೀತಿಯನ್ನು ಎತ್ತಿಹಿಡಿಯುವ ಮತ್ತು ಸತ್ಯವನ್ನು ಹೇಳುವ ಬದಲು, ಕೆಲವು ಮಾಧ್ಯಮಗಳು ಸತ್ಯವನ್ನು ದೂರವಿಟ್ಟು, ಸುಳ್ಳು ನಿರೂಪಣೆಗಳನ್ನು ಹೆಣೆದು ವರದಿ ಪ್ರಸಾರ ಮಾಡಿವೆ” ಎಂದು ಹೇಳಿದೆ.
ಆದರೆ, ಉಮರ್ ಖಾಲಿದ್ ಮತ್ತು ಶಾರ್ಜೀಲಾ ಇಮಾಮ್ ಪರವಾಗಿ ಕೂಗಲಾದ ಘೋಷಣೆಗಳನ್ನು ವಿಶ್ವವಿದ್ಯಾಲಯದ ಆಡಳಿತವು ‘ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ’ ಎಂದು ವಾದಿಸಿದೆ. ಈ ಘೋಷಣೆಗಳು ಸುಪ್ರೀಂ ಕೋರ್ಟ್ನ ತಿರಸ್ಕಾರಕ್ಕೆ ಸಮಾನವಾಗಿವೆ ಮತ್ತು ಜೆಎನ್ಯು ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಹೇಳಿಕೊಂಡಿದೆ. ಆಂತರಿಕ ತನಿಖೆ ನಡೆಸಿ, ತಪ್ಪಿತಸ್ಥರೆಂದು ಗುರುತಿಸಲಾದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜೆಎನ್ಯು ಅಧಿಕಾರಿಗಳು ಹೇಳಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
ಘಟನೆ ಬಗ್ಗೆ ಮಾತನಾಡಿರುವ ದೆಹಲಿ ಸಚಿವ ಕಪಿಲ್ ಮಿಶ್ರಾ, ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಆಶಿಶ್ ಸೂದ್, “ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರಿಗೆ ವಿರೋಧ ಪಕ್ಷಗಳು ಆಶ್ರಯ ನೀಡುತ್ತಿವೆ” ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, “ಸುರಕ್ಷಿತ ಮತ್ತು ಮುಕ್ತ ಭಾರತದಲ್ಲಿ, ಈ ಜನರು ಪ್ರಧಾನಿಯನ್ನು ನಿಂದಿಸುತ್ತಲೇ ಇರುತ್ತಾರೆ. ನಾವು ಪ್ರಧಾನಿಯನ್ನು ಬಹಿರಂಗವಾಗಿ ನಿಂದಿಸುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಆದರೂ, ಈ ಮಾನಸಿಕ ಅಸ್ವಸ್ಥರು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ನಂತರ ಖಾಲಿದ್ ಮತ್ತು ಇಮಾಮ್ನಂತಹ ‘ರಾಷ್ಟ್ರವಿರೋಧಿ’ಗಳನ್ನು ಬೆಂಬಲಿಸಿದ ‘ನಗರ ನಕ್ಸಲ್ ಮನಸ್ಥಿತಿ’ಯನ್ನು ಈ ಘೋಷಣೆಗಳು ಪ್ರತಿಬಿಂಬಿಸುತ್ತವೆ” ಎಂದಿದ್ದಾರೆ.
ಪ್ರತಿಭಟನೆಯನ್ನು ನಾಗರಿಕರ ಹಕ್ಕು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು, “ಘೋಷಣೆಗಳನ್ನು ಕೂಗುವುದು, ಪ್ರತಿರೋಧ ವ್ಯಕ್ತಪಡಿಸುವುದು ಪ್ರತಿಭಟನೆಯನ್ನು ದಾಖಲಿಸುವ ಒಂದು ಮಾರ್ಗ. ಇದು ರಾಜಕೀಯ ಭಾಷೆ. ಖಾಲಿದ್ ಮತ್ತು ಇಮಾಮ್ ಮುಸ್ಲಿಮರಾಗಿರುವ ಕಾರಣಕ್ಕೆ ಅವರನ್ನು ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಜೆಎನ್ಯು ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಅನ್ಯಾಯ ಮಾಡಲಾಗಿದೆ ಎಂಬ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ.




