ಪೂರ್ವಾನುಮತಿ ಇಲ್ಲದೆ ರಾತ್ರಿ ಕ್ಯಾಂಪಸ್ನಿಂದ ಹೊರಗೆ ಹೋಗಿದ್ದರೆಂಬ ಕಾರಣಕ್ಕೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಆಡಳಿತ ಮಂಡಳಿಯ ನಿರ್ಧಾರವನ್ನು ಐಐಎಂ ನಾಗ್ಪುರದ ವಿದ್ಯಾರ್ಥಿಗಳು ಖಂಡಿಸಿದ್ದಾರೆ. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮಧ್ಯಂತರ ಪರೀಕ್ಷೆಗಳನ್ನು (Mid-term exams) ಬಹಿಷ್ಕರಿಸುವ ಮೂಲಕ ಅಪರೂಪದ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ಫೆಬ್ರವರಿ 21ರ ರಾತ್ರಿ ಸುಮಾರು 75 ವಿದ್ಯಾರ್ಥಿಗಳು ರಾತ್ರಿಯ ಊಟಕ್ಕಾಗಿ ಕ್ಯಾಂಪಸ್ನಿಂದ ಹೊರಗೆ ಹೋಗಿದ್ದರು. ವಿದ್ಯಾರ್ಥಿಗಳ ಪ್ರಕಾರ, ತಾವು ವಾಪಸ್ ಬರುವುದು ತಡವಾಗುತ್ತದೆ ಎಂದು ಕ್ಯಾಂಪಸ್ನ ಎರಡು ಹಾಸ್ಟೆಲ್ಗಳ ಅಧಿಕಾರಿಗಳಿಗೆ ಮೊದಲೇ ತಿಳಿಸಿದ್ದರು. ಆದರೆ, ಈ ಗುಂಪು ವಾಪಸ್ ಬಂದಾಗ ಅವರನ್ನು ಗೇಟ್ನಲ್ಲಿಯೇ ತಡೆಯಲಾಯಿತು. ಈ ಗುಂಪಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳೂ ಇದ್ದರು.
ಮರುದಿನ, 40 ವಿದ್ಯಾರ್ಥಿಗಳಿಗೆ ಐಐಎಂಎನ್ ಎಂಬಿಎ ಮಧ್ಯಂತರ ಪರೀಕ್ಷೆಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂಬ ನೋಟಿಸ್ಅನ್ನು ಕ್ಯಾಂಪಸ್ ಆಡಳಿತವು ಇಮೇಲ್ ಮೂಲಕ ಕಳಿಸಿತ್ತು. ಅವರಲ್ಲಿ ಹೆಚ್ಚಿವರು ಮೊದಲ ವರ್ಷದ ವಿದ್ಯಾರ್ಥಿಗಳು. ತಮ್ಮ ಕಿರಿಯರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂಬುದನ್ನು ತಿಳಿದ ಹಿರಿಯ ವಿದ್ಯಾರ್ಥಿಗಳು ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ಹೇಳುವಂತೆ; “ಹಿರಿಯ ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಮುಗಿಸಿ ಕ್ಯಾಂಪಸ್ನಿಂದ ಹೊರಡಲು ಕೆಲವೇ ದಿನಗಳು ಮಾತ್ರವೇ ಉಳಿದಿವೆ. ಆದ್ದರಿಂದ, ಅನೌಪಚಾರಿಕ ಬೀಳ್ಕೊಡುಗೆ ಕೂಟವಾಗಿ ಹೊರಗೆ ಊಟ ಸವಿಯಲು ಹೋಗಿದ್ದೆವು. ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ಸಂಸ್ಥೆಗೆ ಮಾಹಿತಿ ನೀಡಿದ್ದರು. ಆದರೂ, ಸಹ ಎಲ್ಲರನ್ನು ಗೇಟ್ನಲ್ಲಿ ತಡೆಯಲಾಗಿದೆ. ಪರೀಕ್ಷೆಗೆ ಹಾಜರಾಗದಂತೆ ನೋಟಿಸ್ ನೀಡಲಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಕ್ಯಾಂಪಸ್ನ ಅಧಿಕಾರಿಗಳು ಕೆಲವು ವಿದ್ಯಾರ್ಥಿನಿಯರ ಪೋಷಕರಿಗೆ ಕರೆ ಮಾಡಿ, ಅಸಭ್ಯವಾಗಿ ಮಾತನಾಡಿದ್ದಾರೆ ಎಂದೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ನಾವು ಇನ್ನೂ ಮಕ್ಕಳಲ್ಲ; ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು. ನಮ್ಮನ್ನು ಈ ರೀತಿ ನಡೆಸಿಕೊಳ್ಳಬಾರದು. ಕೆಲವೊಮ್ಮೆ ತರಗತಿಗಳು ರಾತ್ರಿ 11 ಗಂಟೆಗೆ ಮುಗಿಯುತ್ತವೆ, ಆಗ ನಾವು ಸ್ವಲ್ಪ ದೂರ ನಡೆಯಲು ಕ್ಯಾಂಪಸ್ನಿಂದ ಹೊರಗೆ ಹೋಗುತ್ತೇವೆ” ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾರೆ.
ಕಿರಿಯ ವಿದ್ಯಾರ್ಥಿಗಳ ಮೇಲೆ ಕ್ಯಾಂಪಸ್ ಆಡಳಿತದ ಅನೈತಿಕ ಪೊಲೀಸ್ಗಿರಿ ಅಗತ್ಯವಿತ್ತೇ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ವಿದ್ಯಾರ್ಥಿಗಳು ಪೂರ್ವಾನುಮತಿ ಇಲ್ಲದೆ ಇಡೀ ರಾತ್ರಿ ಹೊರಗೆ ಉಳಿದಿದ್ದಾರೆ. ವಿದ್ಯಾರ್ಥಿಗಳು ಹಾಸ್ಟೆಲ್ ಅಥವಾ ಆಡಳಿತ ಮಂಡಳಿಯಿಂದ ಅನುಮತಿ ಪಡೆಯದೆ, ಹೊರಗೆ ಹೋಗುವವರಿಗಾಗಿ ನಿರ್ವಹಿಸುತ್ತಿರುವ ರಿಜಿಸ್ಟರ್ನಲ್ಲಿ ‘ಮನೆಗೆ ಹೋಗುತ್ತಿದ್ದೇವೆ’ ಎಂದು ಸುಳ್ಳು ಕಾರಣವನ್ನು ಬರದಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸಂಸ್ಥೆಯ ನಿಯಮಗಳು ಮತ್ತು ಸುರಕ್ಷತಾ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಕ್ಯಾಂಪಸ್ನಿಂದ ಹೊರಹೋಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕ್ಯಾಂಪಸ್ನಲ್ಲಿ ಉಳಿದಿರುವ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ರೂಪಿಸಲಾಗಿದೆ. ಇವುಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ” ಎಂದು ಸಂಸ್ಥೆಯು ಹೇಳಿಕೊಂಡಿದೆ.
ಆದಾಗ್ಯೂ, ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು” ಎಂದು ಸಂಸ್ಥೆ ತಿಳಿಸಿದೆ.




