ಲಡಾಖ್ ಹಿಂಸಾಚಾರದ ಬಳಿಕ ಬಂಧನಕ್ಕೆ ಒಳಗಾಗಿರುವ ಪರಿಸರವಾದಿ, ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ಪಾಕಿಸ್ತಾನ ಸಂಪರ್ಕವಿದೆ, ಆರ್ಥಿಕ ಅಕ್ರಮಗಳನ್ನು ನಡೆಸಿದ್ದಾರೆ ಎಂಬ ಆರೋಪವನ್ನು ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅಳ್ಳಗಳೆದಿದ್ದಾರೆ. “ವಾಂಗ್ಚುಕ್ ಅವರು ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಅವರು ಸಾಧ್ಯವಾದಷ್ಟು ಗಾಂಧಿವಾದಿ ರೀತಿಯಲ್ಲಿ” ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸಾಚಾರಕ್ಕೆ ಭದ್ರತಾ ಪಡೆ ಕ್ರಮವೇ ಕಾರಣ” ಎಂದು ಹೇಳಿಕೊಂಡಿದ್ದಾರೆ.
ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಮತ್ತು ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಲೇಹ್ನಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 60ಕ್ಕೂ ಅಧಿಕ ಮಂಡಿ ಗಾಯಗೊಂಡಿದ್ದಾರೆ. ಇದಾದ ಬೆನ್ನಲ್ಲೇ ಶುಕ್ರವಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಸಂಶೋಧಕ ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್ಚುಕ್, ಸಂಸ್ಥೆಯ ವಿರುದ್ಧ ಎಫ್ಸಿಆರ್ಎ ಉಲ್ಲಂಘನೆ ಆರೋಪ; ಸಿಬಿಐ ತನಿಖೆ
ಲಡಾಖ್ನ ಹಕ್ಕುಗಳಿಗಾಗಿ ಐದು ವರ್ಷಗಳಗೂ ಅಧಿಕ ಕಾಲದಿಂದ ಆಂದೋಲನ ನಡೆಯುತ್ತಿದೆ. 2023ರಿಂದ ವಾಂಗ್ಚುಕ್ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಐದನೇ ಬಾರಿಗೆ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರು. ಸದ್ಯ ಅವರನ್ನು ಬಂಧಿಸಿ ರಾಜಸ್ಥಾನದ ಜೋಧ್ಪುರದಲ್ಲಿ ಜೈಲಿನಲ್ಲಿ ಇರಿಸಲಾಗಿದೆ.
ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ (HIAL) ನ ಸಹ-ಸಂಸ್ಥಾಪಕಿ ಆಂಗ್ಮೋ, “ನನ್ನ ಪತಿ ಬಂಧನಕ್ಕೊಳಗಾದಾಗಿನಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಬಂಧನ ಆದೇಶದ ಪ್ರತಿಯನ್ನು ಹಸ್ತಾಂತರಿಸಲಾಗಿಲ್ಲ. ಶುಕ್ರವಾರ ಪ್ರತಿಯನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
ಇನ್ನು ಪಾಕಿಸ್ತಾನದ ಜೊತೆ ವಾಂಗ್ಚುಕ್ ನಂಟಿನ ಬಗ್ಗೆಯೂ ಪ್ರತಿಕ್ರಿಯಿಸಿದ ಗೀತಾ ಅವರು, “ನೆರೆಯ ದೇಶಕ್ಕೆ ಸೋನಮ್ ಅವರು ಇತ್ತೀಚೆಗೆ ವೃತ್ತಿಪರ ಭೇಟಿ ನೀಡಿದ್ದಾರೆ. ಹವಾಮಾನ ಕೇಂದ್ರಿತ ಕಾರ್ಯಕ್ರಮದ ಭೇಟಿಯಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಆಹ್ವಾನದ ಹಿನ್ನೆಲೆ ಸೋನಮ್ ಅವರು ವಿದೇಶಕ್ಕೆ ಭೇಟಿ ನೀಡಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ನಾವು ವಿಶ್ವಸಂಸ್ಥೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ್ದೆವು. ಅದು ಹವಾಮಾನ ಬದಲಾವಣೆಯ ಕುರಿತ ಕಾರ್ಯಕ್ರಮವಾಗಿತ್ತು. ಹಿಮಾಲಯದ ತುದಿಯಲ್ಲಿರುವ ಹಿಮನದಿ ನಾನು ಪಾಕಿಸ್ತಾನಕ್ಕೆ ಹರಿಯುತ್ತೇನೋ ಅಥವಾ ಭಾರತಕ್ಕೆ ಹರಿಯುತ್ತೇನೋ ಎಂದು ನೋಡುವುದಿಲ್ಲ” ಎಂದರು.
ಇದನ್ನು ಓದಿದ್ದೀರಾ? ಸೋನಮ್ ವಾಂಗ್ಚುಕ್ ಬಂಧನ: ಕೇಂದ್ರ ಸರ್ಕಾರ NSA ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ?
ಫೆಬ್ರವರಿಯಲ್ಲಿ ನಡೆದ ‘ಬ್ರೀತ್ ಪಾಕಿಸ್ತಾನ್’ ಸಮ್ಮೇಳನವನ್ನು ವಿಶ್ವಸಂಸ್ಥೆಯ ಪಾಕಿಸ್ತಾನ ಮತ್ತು ಡಾನ್ ಮೀಡಿಯಾ ಆಯೋಜಿಸಿದ್ದು, ಬಹುರಾಷ್ಟ್ರೀಯ ಸಹಕಾರವನ್ನು ಒಳಗೊಂಡಿತ್ತು. ಐಸಿಐಎಂಒಡಿ ನಂತಹ ಸಂಸ್ಥೆಗಳು ಇವೆ. ಎಲ್ಲಾ ಎಂಟು ಹಿಂದೂ ದೇಶಗಳು ಸಮ್ಮೇಳನದಲ್ಲಿ ಒಳಗೊಂಡಿತ್ತು. ನಾವು ಐಸಿಐಎಂಒಡಿಯ ಹಿಮಾಲಯನ್ ವಿಶ್ವವಿದ್ಯಾಲಯ ಒಕ್ಕೂಟದ ಭಾಗವಾಗಿದ್ದೇವೆ” ಎಂದು ಆಂಗ್ಮೋ ಹೇಳಿದರು.
ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ಮೆಂಟ್(ಐಸಿಐಎಂಒಡಿ) 1983ರಲ್ಲಿ ಸ್ಥಾಪನೆಯಾದ ನೇಪಾಳ ಮೂಲದ ಸಂಸ್ಥೆಯಾಗಿದ್ದು, ಹಿಂದೂ ಕುಶ್ ಹಿಮಾಲಯ ಪ್ರದೇಶದ ಎಂಟು ಪ್ರಾದೇಶಿಕ ಸದಸ್ಯ ರಾಷ್ಟ್ರಗಳಾದ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ.
“ಹವಾಮಾನ ಬದಲಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಪ್ರಬಂಧವನ್ನು ಮಂಡಿಸಲು ನಾನು ಕೂಡ ಅಲ್ಲಿದ್ದೆ. ವಾಸ್ತವವಾಗಿ, ಅವರು (ವಾಂಗ್ಚುಕ್) ಆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಪ್ರಧಾನಿ (ನರೇಂದ್ರ) ಮೋದಿಯವರನ್ನು ಹೊಗಳಿದ್ದರು. ನೇಪಾಳ ಮತ್ತು ಬಾಂಗ್ಲಾದೇಶದ ಉಲ್ಲೇಖವು ವಾಸ್ತವವಾಗಿ ಸೋನಮ್ ಅವರು ನೀಡಿದ ಉದಾಹರಣೆಯಾಗಿದೆ. ಅಂದರೆ, ‘ಸರ್ಕಾರಗಳು ಸ್ಪಂದಿಸದಿದ್ದಾಗ, ಅದು ಕ್ರಾಂತಿಗೆ ಕಾರಣವಾಗುತ್ತದೆ’. ನಾವು ಈ ರೀತಿ ಅನ್ಯರ್ಥ ಭಾವಿಸಬಾರದು” ಎಂದು ಹೇಳಿದ್ದಾರೆ.





