ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಗಂಭೀರ ಚರ್ಚೆಗಳು ನಡೆಯುವ ವೇಳೆ, ಸದನದಲ್ಲಿ ಕುರಿತು ಆನ್ಲೈನ್ ರಮ್ಮಿ ಆಡಿದ್ದ ಸಚಿವ ಮಾಣಿಕ್ರಾವ್ ಕೊಕಾಟೆ ಅವರಿಗೆ ಕ್ರೀಡಾ ಮತ್ತು ಯುವ ಕಲ್ಯಾಣ ಖಾತೆ ನೀಡಲಾಗಿದೆ. ಈ ಹಿಂದೆ, ಅವರು ಕೃಷಿ ಖಾತೆಯನ್ನು ನಿರ್ವಹಿಸುತ್ತಿದ್ದರು. ಅವರ ಖಾತೆಯನ್ನು ಬದಲಿಸಲಾಗಿದ್ದು, ಈಗ ಕ್ರೀಡಾ ಖಾತೆ ನೀಡಲಾಗಿದೆ.
ಅಧಿವೇಶನದಲ್ಲಿ ಮಾಣಿಕ್ರಾವ್ ಅವರು ರಮ್ಮಿ ಆಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಪಕ್ಷಗಳು ಮಾಣಿಕ್ರಾವ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.
ಇದೆಲ್ಲದರ ನಡುವೆ ಮಹಾರಾಷ್ಟ್ರ ಸಚಿವ ಸಂಪುಟದ ಪುನರ್ರಚನೆಯಾಗಿದೆ. ಆದರೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನಾ (ಶಿಂಧೆ ಬಣ)ಕ್ಕೆ ಸೇರಿದವರಾದ ಮಾಣಿಕ್ರಾವ್ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಬದಲು, ಅವರ ಖಾತೆಯನ್ನು ಬದಲಿಸಲಾಗಿದೆ. ಕ್ರೀಡಾ ಖಾತೆಯನ್ನು ಮಾಣಿಕ್ರಾವ್ ಅವರಿಗೆ ನೀಡಲಾಗಿದ್ದು, ಕೃಷಿ ಖಾತೆಗೆ ದತ್ತಾತ್ರೇಯ ಭರಾಣೆ ಅವರನ್ನು ನೇಮಿಸಲಾಗಿದೆ. ಆದಾಗ್ಯೂ, ತಮ್ಮ ಪಕ್ಷದ ಸಚಿವರಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವಂತೆ ಏಕನಾತ್ ಶಿಂಧೆ ಅವರಿಗೆ ಸೂಚಿಸಲಾಗಿದೆ.
ಸದನದಲ್ಲಿ ಮಾಣಿಕ್ರಾವ್ ರಮ್ಮಿ ಆಡುತ್ತಿದ್ದ ವಿಡಿಯೋ ಹಂಚಿಕೊಂಡಿದ್ದ ಎನ್ಸಿಪಿ (ಶರದ್ ಬಣ) ಶಾಸಕ ರೋಹಿತ್ ಪವಾತ್, “ಮಹಾರಾಷ್ಟ್ರದಲ್ಲಿನ ಕೃಷಿ ಬಿಕ್ಕಟ್ಟು ತೀವ್ರಗೊಂಡಿದೆ. ಇಂತಹ ಸಂದರ್ಭದಲ್ಲಿ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಯೋಜನೆ, ಚಿಂತನೆ ನಡೆಸಬೇಕಾದ ಸಚಿವರು ರಮ್ಮಿ ಆಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕೃಷಿ ಸಚಿವರ ವರ್ತನೆ ಮತ್ತು ಬೇಜವಾಬ್ದಾರಿಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಮಾಣಿಕ್ರಾವ್ ವಿರುದ್ಧ ಶಾಸಕಾಂಗ ತನಿಖೆ ನಡೆದಿದ್ದು, ಅವರು ಸುಮಾರು 18 ರಿಂದ 22 ನಿಮಿಷಗಳ ಕಾಲ ಮೊಬೈಲ್ನಲ್ಲಿ ರಮ್ಮಿ ಆಡಿದ್ದಾರೆ ಎಂಬುದು ತಿಳಿದುಬಂದಿದೆ.




