ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ವೋಟ್ ಚೋರಿ ಮಹಾ ರ್ಯಾಲಿಯಲ್ಲಿ “ಮೋದಿಯವರಿಗೆ ಸಮಾಧಿಗೆ ಗುಂಡಿ ಅಗೆಯುತ್ತೇವೆ” ಎಂದು ಪ್ರಚೋದನಕಾರಿಯಾಗಿ ಹೇಳಿಕೆ ನೀಡಲಾಗಿದೆ ಎಂಬ ಆಡಳಿತ ಪಕ್ಷದ ಆರೋಪ ಗದ್ದಲಕ್ಕೆ ಕಾರಣವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಮುಂದೂಡಿದ ಘಟನೆ ಸೋಮವಾರ ನಡೆದಿದೆ.
ಸೋಮವಾರ ಕಲಾಪ ಶುರವಾದ ಕೆಲವೇ ನಿಮಿಷಗಳ ನಂತರ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ನಾವು ಪರಸ್ಪರ ವಿರೋಧಿಗಳು, ಶತ್ರುಗಳಲ್ಲ. 2014 ರಲ್ಲಿ, ಬಿಜೆಪಿ ಸಂಸದರು ಎದುರಾಳಿಯ ವಿರುದ್ಧ ಅನುಚಿತ ಪದಗಳನ್ನು ಬಳಸಿದರು. ಪ್ರಧಾನಿ ಮೋದಿ ತಕ್ಷಣವೇ ತಮ್ಮ ಸಂಸದರನ್ನು ಕ್ಷಮೆಯಾಚಿಸಲು ಕೇಳಿಕೊಂಡರು. ನಿನ್ನೆ, ಕಾಂಗ್ರೆಸ್ ರ್ಯಾಲಿಯಲ್ಲಿ, ಪ್ರಧಾನಿ ಮೋದಿಯವರಿಗೆ ಸಮಾಧಿಗೆ ಗುಂಡಿ ತೋಡುವ ಹೇಳಿಕೆ ನೀಡಲಾಗಿದೆ. ಇದು ದೇಶಕ್ಕೇ ತುಂಬಾ ದುಃಖಕರ ಕ್ಷಣ. ಕಾಂಗ್ರೆಸ್ ಪಕ್ಷವು ಇಂತಹ ಪದಗಳನ್ನು ಬಳಸುತ್ತದೆ. ಆ ರ್ಯಾಲಿಯಲ್ಲಿ ಇಡೀ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಹಾಜರಿದ್ದಾಗಲೇ, ಪ್ರಧಾನಿಯವರಿಗೆ ಸಮಾಧಿ ಕಟ್ಟುವ ಘೋಷಣೆಗಳನ್ನು ಕೂಗಿದರು. ಈ ದೇಶಕ್ಕೆ ಇದಕ್ಕಿಂತ ದುರದೃಷ್ಟಕರ ಘಟನೆ ಇನ್ನೊಂದಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ ದೇಶಕ್ಕೆ ಕ್ಷಮೆಯಾಚಿಸಬೇಕು” ಎಂದು ರಿಜಿಜು ಹೇಳಿದರು. ಉಳಿದ ಸದಸ್ಯರು ಧ್ವನಿಗೂಡಿಸಿದರು. ಘೋಷಣೆಗಳ ನಡುವೆ ಗದ್ದಲ ಹೆಚ್ಚಾದಾಗ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ‘ವೋಟ್ ಚೋರಿ’ ವಿರುದ್ಧದ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜಮಾಯಿಸಿದ್ದರು. ಕೇಂದ್ರ ಮತ್ತು ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ತಿರುಚಲು ಕೈಜೋಡಿಸುತ್ತಿದೆ. ಮೋದಿಯವರು ಮತಗಳ್ಳತನದಿಂದ ಗೆದ್ದು ಬರುತ್ತಿದ್ದಾರೆ ಎಂದು ಘೋಷಣೆಗಳನ್ನು ಕೂಗಲಾಗಿದೆ.
ಕೆಲವು ಕಾರ್ಯಕರ್ತರು “ಮೋದಿ ತೇರಿ ಕಬ್ರಾ ಖುದೇಗಿ, ಆಜ್ ನಹಿ ತೋ ಕಲ್ ಖುದೇಗಿ (ಮೋದಿ, ನಿಮ್ಮ ಸಮಾಧಿಯನ್ನು ಇಂದಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ) ವೋಟ್ ಚೋರ್, ಗಡ್ಡಿ ಛೋಡ್” ಎಂದು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಿದ್ದರು.
ಈ ಬಗ್ಗೆ ಲೋಕಸಭೆಯ ಹೊರಗೆ ಪ್ರತಿಕ್ರಿಯಿಸಿದ ಸಂಸದೆ ಪ್ರಿಯಾಂಕಾ ಗಾಂಧಿ, “ರಸ್ತೆಯಲ್ಲಿ ಯಾರೋ ಕೂಗಿದರೆ ಅದಕ್ಕೆ ನಾವು ಹೊಣೆಯಾಗಲ್ಲ. ಇದು ಬಿಜೆಪಿಯವರ ವಿಷಯಾಂತರದ ನಾಟಕ” ಎಂದು ಹೇಳಿದ್ದಾರೆ.
ಘೋಷಣೆ ಕೂಗಿದ್ದು ನಾನೇ ಎಂದು ಕಾಂಗ್ರೆಸ್ ಸ್ಥಳೀಯ ನಾಯಕಿ ಮಂಜುಲತಾ ಹೇಳಿಕೆ ನೀಡಿದ್ದಾರೆ.





