ಬೀದಿ ನಾಯಿಗಳ ಹಾವಳಿ, ದಾಳಿ ಹೆಚ್ಚಾಗುತ್ತಿರುವ ನಡುವೆ ನವಜಾತ ಶಿಶುವನ್ನು ಬೀದಿ ನಾಯಿಗಳು ರಾತ್ರಿಯಿಡೀ ಕಾವಲು ಕಾದ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನದಿ ಪಟ್ಟಣದಲ್ಲಿ ನಡೆದಿದೆ.
ರೈಲ್ವೆ ಕಾರ್ಮಿಕರ ಕಾಲೋನಿಯ ಸ್ನಾನಗೃಹದ ಹೊರಗೆ ಶಿಶು ಕಂಡುಬಂದಿದೆ. ಮಗು ಜನಿಸಿ ಒಂದು ದಿನವೂ ಆಗಿರಲಿಲ್ಲ. ಪ್ರಾಯಶಃ ಕೆಲವೇ ಗಂಟೆಗಳು ಆಗಿರಬಹುದು. ಇನ್ನೂ ಮೈಯಲ್ಲಿ ರಕ್ತವಿತ್ತು. ಸಮೀಪದಲ್ಲಿ ಯಾರೂ ಇರಲಿಲ್ಲ. ರಾತ್ರಿ ಕತ್ತಲಲ್ಲಿ ಯಾರನ್ನೂ ಸ್ನಾನಗೃಹದ ಸಮೀಪ ಹೋಗಲು ನಾಯಿಗಳು ಬಿಟ್ಟಿಲ್ಲ. ಬೆಳಗ್ಗಿನ ಜಾವ ನೋಡಿದಾಗ ಮಗುವಿನ ಸುತ್ತ ನಾಯಿಗಳು ಕಾವಲು ಕಾಯುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಬೀದಿ ನಾಯಿಗಳ ದಾಳಿ: ಮಹಿಳೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಮಗುವನ್ನು ಮೊದಲು ನೋಡಿದ ಸ್ಥಳೀಯ ನಿವಾಸಿ ಸುಕ್ಲಾ ಮೊಂಡಲ್, “ಸ್ನಾನಗೃಹದ ಬಳಿ ಬೆಳಗ್ಗಿನ ಜಾವ ಹೋದಾಗ ನವಜಾತ ಶಿಶುವನ್ನು ನೋಡಿ ಮೂಕವಿಸ್ಮಿತಗೊಂಡೆವು. ರಕ್ತದಿಂದ ಕೂಡಿದ್ದ ಮಗುವಿನ ಮೇಲೆ ನಾಯಿಗಳು ಆಕ್ರಮಣ ಮಾಡಿರಲಿಲ್ಲ. ಬದಲಾಗಿ ಎಚ್ಚರವಾಗಿ ಕಾವಲು ಕಾಯುತ್ತಿದ್ದವು” ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇನ್ನೋರ್ವ ನಿವಾಸಿ ಸುಭಾಷ್ ಪಾಲ್, “ಬೆಳಗಿನ ಜಾವ ಮಗು ಅಳುವ ಸದ್ದು ಕೇಳಿಸಿತು. ಯಾವುದೋ ಕುಟುಂಬದಲ್ಲಿ ಮಗು ಅಸ್ವಸ್ಥಗೊಂಡಿರಬೇಕು. ಹಾಗಾಗಿ ಅಳುತ್ತಿದೆ ಎಂದು ಭಾವಿಸಿದೆ. ಆದರೆ ನವಜಾತ ಶಿಶು ಹೊರಗೆ ಮಲಗಿದೆ, ನಾಯಿಗಳು ಕಾವಲು ಕಾಯುತ್ತಿವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅದನ್ನು ನೋಡಿ ಆಶ್ಚರ್ಯಚಕಿತನಾದೆ” ಎಂದು ಹೇಳಿದ್ದಾರೆ.
ಆರಂಭದಲ್ಲಿ ಯಾರಿಗೂ ಹತ್ತಿರ ಹೋಗಲು ಬಿಡದ ನಾಯಿಗಳು ಕೊಂಚ ಬೆಳಕು ಹರಿಯುತ್ತಿದ್ದಂತೆ ಮಗುವಿನ ಹತ್ತಿರ ಹೋಗಲು ಬಿಟ್ಟಿದೆ. ಬಳಿಕ ಮಗುವನ್ನು ದುಪಟ್ಟಾದಲ್ಲಿ ಸುತ್ತಿ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದೆ ಎನ್ನುತ್ತಾರೆ ಸುಕ್ಲಾ. ಹಾಗೆಯೇ “ಮಗುವನ್ನು ತೊರೆದು ಹೋದವರಿಗಿಂತ ಹೆಚ್ಚು ಮಾನವೀಯತೆಯನ್ನು ನಾಯಿಗಳು ತೋರಿವೆ” ಎಂದು ರೈಲ್ವೆ ಕೆಲಸಗಾರರೊಬ್ಬರು ಹೇಳಿದ್ದಾರೆ.
ಇನ್ನು ಶಿಶುವನ್ನು ಮೊದಲು ಮಹೇಶ್ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾದ ಬಳಿಕ ವೈದ್ಯರು ಯಾವುದೇ ಗಾಯಗಳಿಲ್ಲ ಎಂದು ಹೇಳಿದರು. ಮಗುವಿನ ತಲೆಯ ಮೇಲಿನ ರಕ್ತವು ಹೆರಿಗೆಯ ರಕ್ತವಾಗಿದೆ. ಹೆರಿಗೆ ಆದ ಕೂಡಲೇ ಮಗುವನ್ನು ಬಿಟ್ಟು ಹೋಗಿರುವುದಕ್ಕೆ ಈ ರಕ್ತವೇ ಸಾಕ್ಷಿ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ.
ಆದರೆ ಹೆಣ್ಣು ಶಿಶುವೇ ಅಥವಾ ಗಂಡು ಶಿಶುವೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯ ನಬದ್ವೀಪ್ ಪೊಲೀಸರು ಮತ್ತು ಮಕ್ಕಳ ಸಹಾಯ ಅಧಿಕಾರಿಗಳು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಬಾಲಕನ ಮೇಲೆ ಬೀದಿ ನಾಯಿ ದಾಳಿ
ದೇಶದಲ್ಲಿ ಇತ್ತೀಚೆಗೆ ಬೀದಿ ನಾಯಿ ದಾಳಿ ಪ್ರಕರಣಗಳು ಅಧಿಕವಾಗುತ್ತಿದೆ. ನಿರ್ದಿಷ್ಟವಾಗಿ ಕರ್ನಾಟಕ ಮತ್ತು ಹೈದರಾಬಾದ್ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ ಎಂದು ವರದಿಗಳು ಹೇಳುತ್ತವೆ. ಜುಲೈನಲ್ಲಿ ಗುಜರಾತ್ನ ಪೋರ್ಬಂದರ್ನ ಕುತಿಯಾನಾ ಗ್ರಾಮದಲ್ಲಿ ಮನೆಯ ಹೊರಗೆ ತೊಟ್ಟಿಲಲ್ಲಿ ಮಲಗಿದ್ದ ಎರಡು ತಿಂಗಳ ಹಸುಗೂಸಿನ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿದ್ದವು. ಉತ್ತರ ಪ್ರದೇಶದಲ್ಲಿ 2025ರಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ.
2023ರ ಏಪ್ರಿಲ್ನಲ್ಲಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಾಯಿ ಮೃತ ನವಜಾತ ಶಿಶುವಿನ ಮೃತ ದೇಹವನ್ನು ಎಳೆದೊಯ್ಯುತ್ತಿರುವುದು ಕಂಡುಬಂದಿತ್ತು. ಮಗು ಸಾವನ್ನಪ್ಪಿದ ನಂತರ ನಾಯಿ ಎತ್ತಿಕೊಂಡು ಹೋಗಿದೆಯೇ ಅಥವಾ ನಾಯಿಯೇ ಕೊಂದಿದೆಯೇ ಎಂಬ ಬಗ್ಗೆ ತನಿಖೆ ನಡೆದಿತ್ತು. ತನಿಖೆ ನಂತರ, ಹೆತ್ತ ತಾಯಿಯೇ ಮಗುವನ್ನು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರುವುದು ತಿಳಿದುಬಂದಿತ್ತು. ಆಕೆಯ ಬಂಧನ ಮಾಡಲಾಗಿತ್ತು.
ಮಗುವಿನ ಮೇಲೆ, ಜನರ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿರುವ ನಡುವೆ ಬೀದಿ ನಾಯಿಗಳೇ ಮಗುವನ್ನು ಕಾವಲು ಕಾದಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ.





