ಹಾಸ್ಟೆಲ್ನಲ್ಲಿ ಉಪಹಾರ ಕೇಳಿದ್ದಕ್ಕಾಗಿ ವಿದ್ಯಾರ್ಥಿ ಮೇಲೆ ಹಾಸ್ಟೆಲ್ ಸಿಬ್ಬಂದಿಗಳು ಚಾಕುವಿನಿಂದ ಹಲ್ಲೆಗೈದಿರುವ ಆಘಾತಕಾರಿ ಘಟನೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿರುವ ಗುರು ಘಾಸಿದಾಸ್ ಸೆಂಟ್ರಲ್ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ನಡೆದಿದೆ.
ಕ್ಯಾಪಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹರ್ಷ್ ಅಗರ್ವಾಲ್ ಅವರ ಮೇಲೆ ಹಲ್ಲೆ ನಡೆದಿದೆ. ಹರ್ಷ್ ಅವರು ಹಾಸ್ಟೆಲ್ನ ಉಪಾಹಾರ ಸಮಯದ ಮುಗಿಯುವುದರೊಳಗೆ ಉಪಹಾರ ಪಡೆಯಲು ಸಾಧ್ಯವಾಗಿಲ್ಲ. ತಡವಾಗಿ ಬಂದು ಉಪಹಾರ ಕೇಳಿದ್ದಾರೆ. ತಡವಾಗಿ ಬಂದ ಕಾರಣಕ್ಕೆ, ಉಪಹಾರ ಕೊಡಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ. ನಿರಾಕರಣೆಯು ಮಾತಿನ ಚಕಮಕಿಗೆ ಕಾರಣವಾಗಿದೆ. ಕುಪಿತಗೊಂಡ ಸಿಬ್ಬಂದಿಗಳು ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಸಿಬ್ಬಂದಿ ಮತ್ತು ವಿದ್ಯಾರ್ಥಿ ನಡುವಿನ ವಾಗ್ವಾದದ ಸಮಯದಲ್ಲಿ ಮೆಸ್ ಸಿಬ್ಬಂದಿಗಳಾದ ದೀಪಕ್ ಕೆವಾಟ್ ಮತ್ತು ದೀಪೇಂದ್ರ ಕೆವಾಟ್ ಅವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಹಾಸ್ಟೆಲ್ ಆವರಣದಲ್ಲಿ ಚಾಕು ಹಿಡಿದು ಸಿಬ್ಬಂದಿಗಳು ವಿದ್ಯಾರ್ಥಿಯ ಬೆನ್ನಟ್ಟಿದ್ದಾರೆ. ವಿದ್ಯಾರ್ಥಿಗಳ ಎದುರೇ ಈ ಘಟನೆ ನಡೆದಿದ್ದು, ಹಲವರು ಆತಂಕಗೊಂಡಿದ್ದಾರೆ.
ಘಟನೆಯು ಸಿಸಿಟಿವಿಯಲ್ಲಿ ಸೇರೆಯಾಗಿದೆ. ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿವೆ. ಘಟನೆಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಬೆದರಿಕೆಯಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ದೀಪಕ್ ಕೆವಾಟ್ ಮತ್ತು ದೀಪೇಂದ್ರ ಕೆವಾಟ್ ಇಬ್ಬರನ್ನೂ ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ.




