4ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಹಾಸ್ಟೆಲ್ನಲ್ಲಿ ಸರಪಳಿ ಹಾಕಿ ಕಟ್ಟಿಹಾಕಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಸರ್ಕಾರಿ ಹಾಸ್ಟೆಲ್ನಲ್ಲಿ ನಡೆದಿದೆ. ವಿದ್ಯಾರ್ಥಿಯ ತಂದೆ ಮತ್ತು ಹಾಸ್ಟೆಲ್ ಸಿಬ್ಬಂದಿಗಳು ಆತನನ್ನು ಕಟ್ಟಿಹಾಕಿದ್ದರು ಎಂದು ಹೇಳಲಾಗಿದೆ. ಘಟನೆ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.
ಜಿಲ್ಲೆಯ ನೀಲಗಿರಿ ಬ್ಲಾಕ್ನ ಬೆಗುನಿಯಾದಲ್ಲಿರುವ ಸರ್ಕಾರಿ ಯುಪಿ ಶಾಲೆಯಲ್ಲಿ ಘಟನೆ ನಡೆದಿದೆ. 8 ವರ್ಷದ ಬಾಲಕನನ್ನು ಕಬ್ಬಿಣದ ಸರಪಳಿಯಿಂದ ಮಂಚದ ಕಾಲಿಗೆ ಕಟ್ಟಿಹಾಕಲಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸ್ಟೆಲ್ ಮೇಲ್ವಿಚಾರಕರ ಅನುಮತಿ ಇಲ್ಲದೆ ಬಾಲಕ ಹಾಸ್ಟೆಲ್ನಿಂದ ತನ್ನ ಮನೆಗೆ ಓಡಿಹೋಗುತ್ತಿದ್ದ. ಆತನ ಉಪಟಳವನ್ನು ತಡೆಯುವಂತೆ ವಿದ್ಯಾರ್ಥಿಯ ತಂದೆ ಶಿಕ್ಷಕರಲ್ಲಿ ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ಆತನನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಆತನನ್ನು ಕಟ್ಟಿಹಾಕಿದ್ದದ್ದು ವಿದ್ಯಾರ್ಥಿಯ ತಂದೆಗೂ ಗೊತ್ತಿತ್ತು ಎಂದು ವರದಿಯಾಗಿದೆ.
ಬಾಲಕ ಓಡಿಹೋಗದಂತೆ ತಡೆಯಲು ಒಂದು ದಿನದ ಮಟ್ಟಿಗೆ ಆತನನ್ನು ಸರಪಳಿಯಲ್ಲಿ ಬಂಧಿಸಲಾಗಿತ್ತು. ಆದರೆ, ಅದು ಸುಮಾರು 10 ದಿನಗಳವರೆಗೆ ಮುಂದುವರೆದಿದೆ. ಆತನ ತಂದೆಯ ಸಮ್ಮತಿಯ ಮೇರೆಗೆ ಬಾಲಕನನ್ನು ಕಟ್ಟಿಹಾಕಲಾಗಿತ್ತು ಎಂದು ಶಾಲೆಯ ಮುಖ್ಯೋಪಾಧ್ಯಯ ರಘುನಾಥ್ ಬುಗುಡೈ ತಿಳಿಸಿದ್ದಾರೆ.
“ಬಾಲಕ ಪದೇ-ಪದೇ ಮನೆಗೆ ಓಡಿ ಹೋಗುವುದರಿಂದ ಆತನ ತಂದೆ ಕೋಪಗೊಂಡಿದ್ದರು. ಮಗನನ್ನು ಶಾಲೆಗೆ ಕರೆತಂದಿದ್ದ ತಂದೆ, ಆತನನ್ನು ತರಗತಿಗಳಿಗೆ ಹಾಜರಾಗಬೇಕಾದಾಗ ಹೊರತುಪಡಿಸಿ, ಉಳಿದೆಲ್ಲ ಸಮಯದಲ್ಲಿಯೂ ಸರಪಳಿಯಲ್ಲಿ ಕಟ್ಟಿಹಾಕುವಂತೆ ಹಾಸ್ಟೆಲ್ ಪ್ಯೂನ್ ಬಳಿ ಮನವಿ ಮಾಡಿದ್ದರು” ಎಂದು ರಘುನಾಥ್ ಬುಗುಡೈ ಹೇಳಿದ್ದಾರೆ.
ಇತ್ತೀಚೆಗೆ, ಹಾಸ್ಟೆಲ್ಗೆ ತೆರಳಿದ್ದ ಕೆಲವು ಶಿಕ್ಷಕರು ಬಾಲಕನನ್ನು ಕಟ್ಟಿಹಾಕಿರುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನೀಲಗಿರಿ ಉಪ-ಕಲೆಕ್ಟರ್ ಮಧುಸ್ಮಿತಾ ಸಮಂತರಾಯ ಅವರು ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯ, ಸಿಬ್ಬಂದಿಗಳು ಹಾಗೂ ಬಾಲಕನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
“ನಾವು ಮತ್ತೊಮ್ಮೆ ಹೇಳಿಕೆಗಳನ್ನು ಪರಿಶೀಲಿಸುತ್ತೇವೆ. ತನಿಖಾ ವರದಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇವೆ. ಘಟನೆ ಹಾಸ್ಟೆಲ್ ಆವರಣದಲ್ಲಿ ನಡೆದಿರುವುದರಿಂದ, ಇದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.




