ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ. ಹೊಸ ನಿಯಮವು ಜಾತಿ ಆಧಾರಿತ ತಾರತಮ್ಯ ಮಾಡುತ್ತದೆ, ಕೆಲವು ವರ್ಗಗಳನ್ನು ಹೊರಗಿಟ್ಟಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿ ವಿಚಾರಣೆ ನಡೆಸಲಿದೆ. “ಏನಾಗುತ್ತಿದೆ ಎಂದು ನಮಗೆ ತಿಳಿದಿದೆ. ದೋಷಗಳನ್ನು ಸರಿಪಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ನಾವು ಅರ್ಜಿಯ ವಿಚಾರಣೆಗ ನಡೆಸುತ್ತೇವೆ” ಎಂದು ಸಿಜೆಐ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಯುಜಿಸಿಯ ಹೊಸ ನಿಯಮಗಳ ವಿರುದ್ಧ ಯುಪಿಯಲ್ಲಿ ಪ್ರಬಲ ಜಾತಿಗಳ ಪ್ರತಿಭಟನೆ: ಹಲವು ಬಿಜೆಪಿ ನಾಯಕರು ರಾಜೀನಾಮೆ!
ಇನ್ನು ಹೊಸ ನಿಯಮದ ಪ್ರಕಾರ ತಾರತಮ್ಯದ ದೂರುಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಬೇಕಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026 ಪ್ರಕಾರ ಈ ಸಮಿತಿಯಲ್ಲಿ ಇತರ ಹಿಂದುಳಿದ ವರ್ಗಗಳ (OBC), ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಮತ್ತು ಮಹಿಳೆಯರನ್ನು ಒಳಗೊಂಡಿರಬೇಕು.
ಹಾಗೆಯೇ ಹೊಸ ನಿಯಮಗಳು ಜಾತಿ ಆಧಾರಿತ ತಾರತಮ್ಯವನ್ನು ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿರುದ್ಧದ ತಾರತಮ್ಯ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ಜಾತಿ ತಾರತಮ್ಯವನ್ನು ಬರೀ ಈ ವರ್ಗಗಳಿಗೆ ಸೀಮಿತಗೊಳಿಸಬಾರದು, ಸಾಮಾನ್ಯ ಅಥವಾ ಮೀಸಲಾತಿ ರಹಿತ ವರ್ಗಗಳಿಗೆ ಸೇರಿದವರಿಗೂ ರಕ್ಷಣೆ ಬೇಕಿದೆ. ಅವರೂ ಜಾತಿ ಆಧಾರದಲ್ಲಿ ಕಿರುಕುಳ ಅಥವಾ ತಾರತಮ್ಯಕ್ಕೆ ಒಳಗಾಗಬಹುದು ಎಂಬುದು ಅರ್ಜಿದಾರರ ವಾದವಾಗಿದೆ.
ಇನ್ನು ಈಗಾಗಲೇ ಯುಜಿಸಿ ಹೊಸ ನಿಯಮಗಳನ್ನು ವಿರೋಧಿಸಿ ದೇಶದ ಹಲವೆಡೆ ಪ್ರಬಲ ಜಾತಿಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 10ಕ್ಕೂ ಅಧಿಕ ಬಿಜೆಪಿ ನಾಯಕರು ರಾಜೀನಾಮೆ ನೀಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿಗ್ರಹಕ್ಕೆ ಯುಜಿಸಿ ತಂದ ಹೊಸ ನಿಯಮಗಳೇನು?
ಜಾತಿ ತಾರತಮ್ಯಕ್ಕೆ ಒಳಗಾಗಿ ದಲಿತ ವಿದ್ಯಾರ್ಥಿಗಳು ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಬಳಿಕ 2012ರ ಯುಜಿಸಿ ನಿಯಮಗಳ ಅನುಷ್ಠಾನವನ್ನು ಪ್ರಶ್ನಿಸಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಹೊಸ ನಿಯಮಗಳನ್ನು ಜಾರಿಗೊಳಿಸುವಂತೆ ಯುಜಿಸಿಗೆ ಹೇಳಿತ್ತು. ಸುಪ್ರೀಂ ಸೂಚನೆಯಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಈ ನಿಯಮಗಳ ಕರಡನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ ‘ತಾರತಮ್ಯ’ದ ವ್ಯಾಖ್ಯಾನ ಸೇರಿದಂತೆ ಕರಡಿನ ವಿಭಾಗಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಗುಂಪುಗಳು ಆಕ್ಷೇಪಣೆಗಳನ್ನು ಎತ್ತಿದ್ದವು. ಅಖಿಲ ಭಾರತ ಒಬಿಸಿ ವಿದ್ಯಾರ್ಥಿ ಸಂಘವು ಕರಡಿನಲ್ಲಿ ಸಮಾನತಾ ಸಮಿತಿಗಳಲ್ಲಿ ಮತ್ತು ‘ಜಾತಿ ತಾರತಮ್ಯ’ದ ವ್ಯಾಖ್ಯಾನದಲ್ಲಿ ಒಬಿಸಿಗಳನ್ನು ಹೊರಗಿಡಬಾರದು ಎಂದು ಹೇಳಿತ್ತು. ಭಾಷೆ ಮತ್ತು ಜನಾಂಗೀಯತೆಯ ಆಧಾರದ ಮೇಲೆ ತಾರತಮ್ಯವನ್ನೂ ಸೇರಿಸಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಕೆಲವು ತಿದ್ದುಪಡಿಗಳನ್ನು ಮಾಡಿ ಅಧಿಕೃತವಾಗಿ ನಿಯಮವನ್ನು ಜಾರಿಗೊಳಿಸಿದೆ.





