ಮಹಿಳೆಯ ಸ್ತನಗಳನ್ನು ಮುಟ್ಟುವುದು, ಪೈಜಾಮಾ ಲಾಡಿ ಎಳೆಯುವುದು ಅಥವಾ ಮುಟ್ಟುವುದು ಅತ್ಯಾಚಾರ ಯತ್ನವಲ್ಲ ಎಂದು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇವುಗಳು ಅತ್ಯಾಚಾರ ಯತ್ನ ಅಥವಾ ಅತ್ಯಚಾರವಲ್ಲ ಎಂದಾದರೆ, ಬೇರೆ ಯಾವ ಕ್ರಿಯೆ ಅತ್ಯಾಚಾರ ಯತ್ನವಾಗುತ್ತದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಈ ತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.
ಇದನ್ನು ಓದಿದ್ದೀರಾ? ಸ್ತನ ಮುಟ್ಟುವುದು – ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ; ಹೈಕೋರ್ಟ್ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ
2021ರಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪವನ್ ಮತ್ತು ಆಕಾಶ್ ಎಂಬ ಇಬ್ಬರು ಪುರುಷರು ಅತ್ಯಾಚಾರಕ್ಕೆ ಯತ್ನ ನಡೆಸಿದ್ದರು. ಆಕೆಯ ಸ್ತನವನ್ನು ಮುಟ್ಟಿ, ಆಕೆಯ ಪೈಜಾಮಾದ ಲಾಡಿವನ್ನು ಎಳೆದು, ತುಂಡರಿಸಿದ್ದರು. ಆಕೆಯನ್ನು ಕಾಲುವೆಯೆಡೆ ಎಳೆದೊಯ್ಯಲು ಕೂಡಾ ಯತ್ನಿಸಿದ್ದರು. ಈ ಪ್ರಕರಣದ ಆದೇಶ ನೀಡಿದ ಅಲಹಾಬಾದ್ ಹೈಕೋರ್ಟ್ “ಇದು ಅತ್ಯಾಚಾರವಲ್ಲ, ಇದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಯತ್ನ” ಎಂದು ಹೇಳಿದೆ.
ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ (ಸುವೋ ಮೋಟೋ) ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಮ ಮನೋಹರ್ ನಾರಾಯಣ ಮಿಶ್ರಾ ನೀಡಿದ ತೀರ್ಪಿಗೆ ತಡೆ ನೀಡಿದೆ.
“ತೀರ್ಪು ಬರೆದವರಲ್ಲಿ ಸಂಪೂರ್ಣವಾಗಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಲು ನಮಗೆ ಕಷ್ಟವಾಗುತ್ತಿದೆ. ತೀರ್ಪು ಆ ಕ್ಷಣದಲ್ಲಿ ಬಂದಿಲ್ಲ. ತೀರ್ಪನ್ನು ಕಾಯ್ದಿರಿಸಿದ ನಾಲ್ಕು ತಿಂಗಳ ನಂತರ ನೀಡಲಾಗಿರುವುದರಿಂದ ಮನಸ್ಸಿಗೆ ಬಂದಂತೆ ತೀರ್ಪು ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ ಹೇಳಿದೆ.
“ನಾವು ಸಾಮಾನ್ಯವಾಗಿ ಈ ಹಂತದಲ್ಲಿ ತಡೆ ನೀಡಲು ಹಿಂಜರಿಯುತ್ತೇವೆ. ಆದರೆ ಅಮಾನವೀಯವಾಗಿ ಕಾಣುವುದರಿಂದಾಗಿ ನಾವು ಈ ತೀರ್ಪನ್ನು ತಡೆಹಿಡಿಯುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಾಗೆಯೇ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್ ಕಳುಹಿಸಿದೆ.





