1996ರ ಮಾದಕ ದ್ರವ್ಯ ವಶ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠವು ಭಟ್ ಅವರ ಮೇಲ್ಮನವಿಯನ್ನು ಸ್ವೀಕರಿಸಲು ನಿರಾಕರಿಸಿತು.
ಸುಮಾರು ಮೂರು ದಶಕಗಳ ಹಿಂದೆ ರಾಜಸ್ಥಾನ ಮೂಲದ ವಕೀಲ ಸುಮೇರ್ಸಿಂಗ್ ರಾಜಪುರೋಹಿತ್ ಅವರನ್ನು ನಕಲಿ ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸುವಲ್ಲಿ ಭಟ್ ಅವರ ಪಾತ್ರ ಇತ್ತು ಎಂಬ ಆರೋಪದಲ್ಲಿ ಗುಜರಾತ್ನ ಪಾಲನ್ಪುರದ ಸೆಷನ್ಸ್ ನ್ಯಾಯಾಲಯವು ಭಟ್ ಅವರನ್ನು ದೋಷಿ ಎಂದು ಘೋಷಿಸಿತು. ಘಟನೆಯ ಸಮಯದಲ್ಲಿ, ಭಟ್ ಬನಸ್ಕಾಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ತಂಡವು ಹೋಟೆಲ್ ಕೋಣೆಯಲ್ಲಿ ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲಾಗಿದೆ ಎಂದು ಆರೋಪಿಸಿ ರಾಜ್ಪುರೋಹಿತ್ ಅವರನ್ನು ಬಂಧಿಸಿತು. ಆದರೆ, ರಾಜಸ್ಥಾನ ಪೊಲೀಸರು ನಡೆಸಿದ ತನಿಖೆಯಲ್ಲಿ ಇಡೀ ಘಟನೆಯು ಒಂದು ಪೂರ್ವಯೋಜಿತ ಎಂದು ಕಂಡುಬಂದಿತ್ತು. ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಐ.ಬಿ. ವ್ಯಾಸ್ 1999ರಲ್ಲಿ ಗುಜರಾತ್ ಹೈಕೋರ್ಟ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ ನಂತರ ಈ ಪ್ರಕರಣ ಮತ್ತೆ ಬೆಳಕಿಗೆ ಬಂದಿತು.
2015 ರಲ್ಲಿ ಪೊಲೀಸ್ ಸೇವೆಯಿಂದ ವಜಾಗೊಳಿಸಲ್ಪಟ್ಟ ಭಟ್ ಅವರನ್ನು ಸೆಪ್ಟೆಂಬರ್ 2018 ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಅಂದಿನಿಂದ ಪಾಲನ್ಪುರ ಉಪ-ಜೈಲಿನಲ್ಲಿದ್ದಾರೆ. ಕಳೆದ ವರ್ಷ, ನ್ಯಾಯಾಧೀಶರ ಪಕ್ಷಪಾತದ ಆರೋಪದ ಮೇಲೆ ವಿಚಾರಣೆಯನ್ನು ವರ್ಗಾಯಿಸಲು ಕೋರಿದ್ದ ಅವರ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಮತ್ತು ಅವರಿಗೆ 3 ಲಕ್ಷ ರೂ. ದಂಡ ವಿಧಿಸಿತ್ತು.
2002 ಗುಜರಾತ್ ಗಲಭೆಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಸಂಜೀವ್ ಭಟ್ ವರದಿ ನೀಡಿರುವುದು ಬಿಜೆಪಿಯ ಕೆಂಗಣ್ಣಿಗೆ ಕಾರಣವಾಗಿದೆ ಎಂಬ ಭಟ್ ಕುಟುಂಬ, ಸ್ನೇಹಿತರು ಆರೋಪಿಸಿದ್ದಾರೆ.





