ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ಈ ನಡುವೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ಹೊಂದಿರುವ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು (CAQM) ಸೂಚಿಸಿದೆ.
ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ, ವಿಶೇಷವಾಗಿ ದೀಪಾವಳಿಯ ನಂತರ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸೂಕ್ತ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠವು CAQMನಿಂದ ಉತ್ತರ ಕೇಳಿದೆ.
ಇದನ್ನು ಓದಿದ್ದೀರಾ? ಚಳಿಗಾಲ | ಕುಸಿಯುತ್ತಿದೆ ಗಾಳಿಯ ಗುಣಮಟ್ಟ; ಅಪಾಯಕಾರಿ ಹಂತದಲ್ಲಿದೆ ದೆಹಲಿ
ದೀಪಾವಳಿಯ ಸಮಯದಲ್ಲಿ ಹಲವಾರು ವಾಯು ಮೇಲ್ವಿಚಾರಣಾ ಕೇಂದ್ರಗಳು ಕಾರ್ಯನಿರ್ವಹಿಸಿಲ್ಲ ಎಂದು ತಿಳಿದ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. “ಮೇಲ್ವಿಚಾರಣಾ ಕೇಂದ್ರಗಳು ಕಾರ್ಯನಿರ್ವಹಿಸದಿದ್ದರೆ, ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಯಾವಾಗ ಕಾರ್ಯಗತಗೊಳಿಸಿರುವುದು ಎಂಬುದು ನಮಗೆ ತಿಳಿದಿಲ್ಲ” ಎಂದು ವಕೀಲರು ಹೇಳಿದೆ.
“37 ಮೇಲ್ವಿಚಾರಣಾ ಕೇಂದ್ರಗಳಲ್ಲಿ, ದೀಪಾವಳಿಯ ದಿನದಂದು ಕೇವಲ ಒಂಬತ್ತು ಮಾತ್ರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದವು” ಎಂದು ಪ್ರಕರಣದ ಅಮಿಕಸ್ ಕ್ಯೂರಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಹೇಳಿದರು. ಈ ವೇಳೆ ಮೇಲ್ವಿಚಾರಣಾ ವ್ಯವಸ್ಥೆಗಳ ಕಾರ್ಯಾಚರಣೆಯ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ ಕೋರಿದೆ.
ಈ ಹಿಂದಿನ ವಿಚಾರಣೆಯಂದು ವರದಿಯನ್ನು ಸಲ್ಲಿಸಲಾಗಿದೆ. ಆದರೆ ಸಮಯದ ಕೊರತೆಯಿಂದಾಗಿ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಿಎಕ್ಯೂಎಂ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಮೇಲ್ವಿಚಾರಣಾ ವ್ಯವಸ್ಥೆಗಳ ಅಸಮರ್ಪಕ ಕಾರ್ಯ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಯೋಜಿತ ಕ್ರಮಗಳೆರಡನ್ನೂ ಪರಿಹರಿಸಲು ಹೊಸ ಅಫಿಡವಿಟ್ ಅನ್ನು ಸಲ್ಲಿಸಬೇಕು ಎಂದು ಸಿಂಗ್ ಸೂಚಿಸಿದರು.
ಅಕ್ಟೋಬರ್ 15ರಂದು ನಡೆದ ತನ್ನ ಕೊನೆಯ ವಿಚಾರಣೆಯಲ್ಲಿ, ದೀಪಾವಳಿ ಹಿನ್ನೆಲೆ ಅಕ್ಟೋಬರ್ 18-20ರವರೆಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ ದೀಪಾವಳಿ ವೇಳೆ ನಿಯಮ ಉಲ್ಲಂಘನೆ ನಡೆದ ಕಾರಣ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ.





