ವಿಶ್ವದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ‘ವಿಶ್ವವಿದ್ಯಾಲಯ ಅನುದಾನ ಆಯೋಗ’ (ಯುಜಿಸಿ) ರೂಪಿಸಿರುವ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಸೂಚಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು-2026’ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಯುಜಿಸಿ ರೂಪಿಸಿರುವ ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ರೀತಿಯಲ್ಲಿವೆ ಎಂದು ಕೋರ್ಟ್ ಹೇಳಿದೆ.
ಯುಜಿಸಿ ಸಿದ್ದಪಡಿಸಿರುವ ಹೊಸ ನಿಯಮಗಳು ‘ಸಾಮಾನ್ಯ ವರ್ಗ’ಗಳ ವಿರುದ್ಧ ತಾರತಮ್ಯಕ್ಕೆ ಆಸ್ಪದ ನೀಡುತ್ತವೆ ಎಂದು ಆಕ್ಷೇಪಿಸಿ ಹಲವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿದೆ. ಯುಜಿಸಿ ನಿಯಮಗಳಿಗೆ ತಡೆಯೊಡ್ಡಿದೆ.
“ಹೊಸ ನಿಮಯಗಳನ್ನು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರು ಇರುವ ಸಮಿತಿಯ ಮೂಲಕ ಮರುಪರಿಶೀಲಿಸಬೇಕು” ಎಂದು ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿ ಮಾಡಿರುವ ಕೋರ್ಟ್, ಮಾರ್ಚ್ 19ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯ, ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ವಿಶ್ವವಿದ್ಯಾಲಯಗಳಲ್ಲಿನ ಜಾತಿ ತಾರತಮ್ಯಕ್ಕೆ ರೋಹಿತ್ ವೇಮುಲಾ ಸೇರಿದಂತೆ ಹಲವರು ಬಲಿಯಾಗಿದ್ದಾರೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ನಲ್ಲಿ ಜಾತಿ ತಾರತಮ್ಯಗಳನ್ನು ತಡೆಯಲು ನಿಯಮಗಳನ್ನು ರೂಪಿಸುವಂತೆ ಯುಜಿಸಿಗೆ ತಾಕೀತು ಮಾಡಿತ್ತು. ಅದರಂತೆ, ಯುಜಿಸಿ ನಿಯಮಗಳನ್ನು ರೂಪಿಸಿತ್ತು. ಇದೀಗ, ಆ ನಿಮಯಗಳ ಸುತ್ತ ಕೆಲವು ಸಮುದಾಯಗಳು ವಿವಾದ ಸೃಷ್ಟಿಸಿವೆ.




