ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕ್ ತಂಡಗಳ ನಡುವಿನ ಪಂದ್ಯವು ಶ್ರೀಲಂಕಾದ ಕೊಲಂಬೋ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆಯಲಿದೆ. ಪಂದ್ಯದ ವೇಳೆ, ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಜೊತೆ ಕೈಕುಲುಕದೇ ಇರಲು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನಿರ್ಧರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಶ್ವಕಪ್ ಟೂರ್ನಿಯ ‘ಎ ಗ್ರೂಪ್’ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಗುಂಪಿನೊಳಗಿನ ಪಂದ್ಯಗಳಲ್ಲಿ ಭಾರತ ಮತ್ತು ಪಾಕ್ ತಂಡಗಳಿಗೆ ಈ ಪಂದ್ಯವು ಮೂರನೇ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿವೆ. ಮೂರನೇ ಗೆಲುವಿಗಾಗಿ ಪರಸ್ಪರ ಸೆಣೆಸಡಲಿವೆ.
ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇದು, ಕ್ರೀಡೆಯನ್ನೂ ಆವರಿಸಿಕೊಂಡಿದೆ. 2025ರ ಸೆಪ್ಟೆಂಬರ್ನಲ್ಲಿ ನಡೆದ ಏಷ್ಯಾ ಕಪ್ ಸಮಯದಲ್ಲಿಯೂ ಭಾರತವು ಪಾಕ್ ತಂಡದೊಂದಿಗೆ ‘ಹ್ಯಾಂಡ್ಶೇಕ್’ ಮಾಡುವುದಿಲ್ಲವೆಂದು ಘೋಷಿಸಿತ್ತು. ಅಂದಿನಿಂದಲೂ, ಪಾಕ್ ಆಟಗಾರರೊಂದಿಗೆ ಕೈಕುಲುವುದನ್ನು ಭಾರತದ ಆಟಗಾರರು ತಪ್ಪಿಸುತ್ತಲೇ ಬಂದಿದ್ದಾರೆ. ಈಗಲೂ, ಭಾರತೀಯ ತಂಡವು ‘ಹ್ಯಾಂಡ್ಶೇಕಿಂಗ್’ ಸಂಪ್ರದಾಯದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತದೆ. ಹೀಗಾಗಿ, ಸೂರ್ಯಕುಮಾರ್ ಅವರು ಟಾಸ್ನಲ್ಲಿ ಪಾಕ್ ನಾಯಕನಿಗೆ ಕೈ ಚಾಚುವುದಿಲ್ಲ ಎಂದು ವರದಿಯಾಗಿದೆ.
ಶನಿವಾರ, ಸೂರ್ಯಕುಮಾರ್ ಯಾದವ್ ಅವರಿಗೆ, ಸುದ್ದಿಗಾರರು ‘ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಭಾರತವು ಹ್ಯಾಂಡ್ಶೇಕ್ ನಿಯಮವನ್ನು ಅನುಸರಿಸುವುದನ್ನು ಮುಂದುವರಿಸುತ್ತದೆಯೇ’ ಎಂದು ಕೇಳಿದ್ದರು. ಆದರೆ, ಸೂರ್ಯಕುಮಾರ್ ಯಾವುದೇ ಉತ್ತರ ನೀಡಿರಲಿಲ್ಲ. ಬದಲಾಗಿ, ’24 ಗಂಟೆಗಳ ಕಾಲ ಕಾಯಿರಿ. ಚೆನ್ನಾಗಿ ತಿನ್ನಿರಿ, ಚೆನ್ನಾಗಿ ನಿದ್ದೆ ಮಾಡಿ, ನಾಳೆ ನೋಡೋಣ’ ಎಂದಿದ್ದರು
ಮತ್ತೊಂದೆಡೆ, ಪಾಕಿಸ್ತಾನ ನಾಯಕ ಆಘಾ ಅವರು ತಮ್ಮ ತಂಡದೊಂದಿಗೆ ಹ್ಯಾಂಡ್ಶೇಕ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಭಾರತದ ಆಟಗಾರರಿಗೆ ಬಿಟ್ಟದ್ದು ಎಂದು ಹೇಳಿದ್ದರು. “ಆಟವನ್ನು ಆಟದ ರೀತಿಯಲ್ಲಿ ನಿಜವಾದ ಉತ್ಸಾಹದಲ್ಲಿ ಆಡಬೇಕು. ಉಳಿದದ್ದು ಅವರಿಗೆ (ಭಾರತ) ಬಿಟ್ಟದ್ದು, ಅವರು ಏನು ಮಾಡಲು ಬಯಸುತ್ತಾರೆ, ಅವರೇ ನಿರ್ಧರಿಸುತ್ತಾರೆ” ಎಂದು ಅಘಾ ಹೇಳಿದ್ದರು.




