ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್ನಲ್ಲಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಭೆ ನಡೆದಿತ್ತು. ಆ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಿಗರಿಗೆ ಆತಿಥ್ಯ ನೀಡಿದ್ದ 70 ಭಾರತೀಯರ ವಿರುದ್ಧ ದಾಖಲಾಗಿದ್ದ 16 ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ರದ್ದಗೊಳಿಸಿದೆ.
2020ರ ಮಾರ್ಚ್ನಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಿಗರಿಗೆ ಆತಿಥ್ಯ ವಹಿಸಿದ್ದ ಭಾರತೀಯರು ದೇಶದಲ್ಲಿನ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಕೊರೋನಾ ಸೋಂಕು ಹರಡುವಲ್ಲಿ ಕಾರಣರಾಗಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. 70 ಮಂದಿ ವಿರುದ್ಧ 16 ಎಫ್ಐಆರ್ಗಳನ್ನು ದಾಖಲಿಸಿದ್ದರು.
ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ನೀನಾ ಬನ್ಸಾಲ್ ಕೃಷ್ಣ ಅವರು ‘ಚಾರ್ಜ್ಶೀಟ್ಗಳನ್ನು ರದ್ದುಗೊಳಿಸಲಾಗಿದೆ’ ಎಂದು ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ದೆಹಲಿ ಪೊಲೀಸರು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ತಮ್ಮ ವಿರುದ್ಧದ ಪ್ರಕರಣಗಳ ರದ್ದತಿ ಕೋರಿದ್ದ ಅರ್ಜಿದಾರರು, “ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಮತ್ತು ಚಾರ್ಜ್ಶೀಟ್ನಲ್ಲಿ ನಮಗೆ ಕೋವಿಡ್-19 ಸೋಂಕು ತಗುಲಿವೆ ಎಂಬುದಾಗಿ ಸೂಚಿಸುವ ಯಾವುದೇ ದಾಖಲೆಗಳನ್ನು ಉಲ್ಲೇಖಿಸಿಲ್ಲ. ಆದ್ದರಿಂದ, 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ನಮ್ಮನ್ನು ರೋಗ ಹರಡಿದ ಆರೋಪಿಗಳೆಂದು ಆರೋಪಿಸಲು ಸಾಧ್ಯವಿಲ್ಲ” ಎಂದು ವಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಎಲ್ಲ ರಾಜ್ಯಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಇದು ಪರೋಕ್ಷ NRC, CAA ಜಾರಿ ಅಲ್ಲವೇ?
“ಈ ಪ್ರಕರಣಗಳು ಆಧಾರರಹಿತ ಆರೋಪಗಳಿಂದ ಕೂಡಿವೆ. ಉದ್ದೇಶಪೂರ್ವಕವಾಗಿ ಆರೋಪಗಳನ್ನು ರೂಪಿಸಲಾಗಿದೆ ಮತ್ತು ಉತ್ಪ್ರೇಕ್ಷಿಸಲಾಗಿದೆ. ಆ ಸಮಯದಲ್ಲಿ, ದೆಹಲಿ ಸರ್ಕಾರ ಹೊರಡಿಸಿದ ನಿಷೇಧಾಜ್ಞೆಗಳಲ್ಲಿ ಧಾರ್ಮಿಕ ಸಭೆಗಳನ್ನು ನಿರ್ದಿಷ್ಟವಾಗಿ ನಿಷೇಧಿಸಿದ್ದರೂ, ನಾವು ಮಸೀದಿಗಳ ಒಳಗೆ ಅಥವಾ ಮನೆಗಳಲ್ಲಿ ಇದ್ದವರಿಗೆ ಮಾತ್ರ ಕೇವಲ ಆಶ್ರಯವನ್ನಷ್ಟೇ ನೀಡಿದ್ದೀವೆ” ಎಂದು ವಾದ ಮಂಡಿಸಿದ್ದಾರೆ.
ವಾದವನ್ನು ಆಲಿಸಿದ ನ್ಯಾಯಾಧೀಶರು ಎಫ್ಐಆರ್ಗಳನ್ನು ರದ್ದುಗೊಳಿಸಿದ್ದಾರೆ.




