ಬೀದಿ ನಾಯಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದೆ. ನಾಯಿಗಳ ದಾಳಿಯಿಂದ ಸಂಭವಿಸುತ್ತಿರುವ ಮಕ್ಕಳು ಅಥವಾ ವೃದ್ಧರ ಸಾವುಗಳಿಗೆ ಸರ್ಕಾರಗಳು ಯಾವುದೇ ‘ಕ್ರಮ’ ಕೈಗೊಳ್ಳದೇ ಇರುವುದಕ್ಕಾಗಿ ಭಾರೀ ಪರಿಹಾರವನ್ನು ನ್ಯಾಯಾಲಯವೇ ನಿಗದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ.
ನಾಯಿ ದಾಳಿ ಮತ್ತು ಸಾವುಗಳಿಗೆ ಸಂಬಂಧಿಸಿದ ಹಾಗೂ ಹಿಂದಿನ ಆದೇಶವನ್ನು ಮರುಪರಿಶೀಲಿಸುವಂತೆ ಕೂರಿ ಪ್ರಾಣಿಪ್ರಿಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ನಾಯಿಗಳಿಗೆ ಆಹಾರ ನೀಡುವವರು ಎಂದು ಹೇಳಿಕೊಳ್ಳುವವರು ನಾಯಿ ಕಡಿತ ಪ್ರಕರಣಗಳ ಹೊಣೆಗಾರಿಕೆ ಹೊರುವರೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಅವರೆಲ್ಲರೂ ನಾಯಿಗಳನ್ನು ತಮ್ಮ ಮನೆಗೆ ಕರೆದೊಯ್ದು, ತಮ್ಮ ಮನೆಯಲ್ಲೇ ಆಹಾರ ನೀಡುವುದನ್ನು ಮುಂದುವರೆಸಲಿ” ಎಂದು ಹೇಳಿದೆ.
ವಿಚರಣೆ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, “ಪ್ರತಿ ನಾಯಿ ಕಡಿತ, ಮಕ್ಕಳು ಅಥವಾ ವೃದ್ಧರಿಗೆ ಉಂಟಾಗುವ ಸಾವು ಅಥವಾ ಗಾಯಕ್ಕೆ ಯಾರು ಹೊಣೆ? ಈ ಘಟನೆಗಳಿಗೆ ಸಂಬಂಧಿಸಿದಂತೆ ಸರ್ಕಾರಗಳು ಏನನ್ನೂ ಮಾಡಿಲ್ಲ. ಹೀಗಾಗಿ, ನಾವೇ ಭಾರೀ ಮೊತ್ತದ ಪರಿಹಾರವನ್ನು ನಿಗದಿ ಮಾಡಬೇಕಾಗುತ್ತದೆ. ಅಲ್ಲದೆ, ನಾವು ನಾಯಿಗಳಿಗೆ ಆಹಾರ ನೀಡುತ್ತಿದ್ದೇವೆ ಎನ್ನುವವರ ಮೇಲೆ ಹೊಣೆಗಾರಿಕೆ ಹೊರಿಸಬೇಕು. ಅವರು ನಾಯಿಗಳನ್ನು ತಮ್ಮ ಮನೆಗೆ ಕರೆದೊಯ್ಯಬೇಕು” ಎಂದಿದ್ದಾರೆ.
ಅವರ ಅಭಿಪ್ರಾಯಗಳನ್ನು ಸಮ್ಮಿಸಿದ ನ್ಯಾಯಮೂರ್ತಿ ಮೆಹ್ತಾ ಅವರು ನಾಯಿಗಳಿಗೆ ಊಟ ಹಾಕುವ ಕಾರಣಕ್ಕಾಗಿ ಮಹಿಳೆಯರನ್ನು ನಿಂದಿಸಲಾಗುತ್ತಿದೆ ಎಂಬ ವಾದವನ್ನು ಅಲ್ಲಗಳೆದಿದ್ದಾರೆ. “ನಾಯಿಗಳು 9 ವರ್ಷದ ಮಗುವಿನ ಮೇಲೆ ದಾಳಿ ಮಾಡಿದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಅವುಗಳಿಗೆ ಆಹಾರ ನೀಡುವ ಸಂಸ್ಥೆಯನ್ನೇ? ಈ ಸಮಸ್ಯೆಗೆ ನಾವು ಕಣ್ಣು ಮುಚ್ಚಿಕೊಂಡಿರಬೇಕೆಂದು ನೀವು ಬಯಸುತ್ತೀರೇ. ನಾಯಿ ದಾಳಿಗೆ ತುತ್ತಾಗುವವರು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಅಡಿಯಲ್ಲಿ ದೂರು ದಾಖಲಿಸಬಹುದು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ
ಸ್ಥಳೀಯ ನಾಗರಿಕ ಸಂಸ್ಥೆಗಳು ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂಬುದು ಪೀಠವು ಗಮನಿಸಿದೆ. ನಾಯಿ ಕಡಿತದಿಂದ ಮಾತ್ರವಲ್ಲದೆ ಬೀದಿ ಪ್ರಾಣಿಗಳಿಂದ ಉಂಟಾಗುವ ರಸ್ತೆ ಅಪಘಾತಗಳಿಂದಲೂ ಜನರು ಸಾಯುತ್ತಿದ್ದಾರೆ ಎಂಬುದನ್ನೂ ಒತ್ತಿ ಹೇಳಿದೆ.
“ಬೀದಿ ನಾಯಿಗಳನ್ನು ಬೀದಿಗಳಿಂದ ತೆಗೆದುಹಾಕಲು ನ್ಯಾಯಾಲಯವು ಎಂದಿಗೂ ಆದೇಶಿಸಿಲ್ಲ. ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳಿಗೆ ಅನುಸಾರವಾಗಿ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ನಮ್ಮ ನಿರ್ದೇಶನಗಳು ಸೀಮಿತವಾಗಿವೆ” ಎಂದು ಪೀಠವು ಸ್ಪಷ್ಟಪಡಿಸಿದೆ.
ಬೀದಿ ನಾಯಿಗಳ ಪ್ರಕರಣದಲ್ಲಿ ನವೆಂಬರ್ 7ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಲ್ಲಿ, “ಬೀದಿ ನಾಯಿಗಳಿಗೆ ತಾನಹರಣ ಚಿಕಿತ್ಸೆ ಮತ್ತು ಲಸಿಕೆ ಹಾಕಿದ ನಂತರ ಗೊತ್ತುಪಡಿಸಿದ ಆಶ್ರಯಗಳಿಗೆ ಸ್ಥಳಾಂತರಿಸಬೇಕು. ಚಿಕಿತ್ಸೆ ಮತ್ತು ಲಸಿಕೆಗಾಗಿ ಕೊಂಡೊಯ್ದ ನಾಯಿಗಳನ್ನು ಮತ್ತೆ ಬೀದಿಗಳಿಗೆ ಬಿಡಬಾರದು ಎಂದು ಆದೇಶಿಸಿತ್ತು.




