ಶುಕ್ರವಾರ ಮುಂಜಾನೆ ಕಣ್ಣುಜ್ಜಿ ಚಹಾ ಸೇವಿಸುವ ಹೊತ್ತಿಗಾಗಲೇ ಒಂದೂಕಾಲು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ತಲಾ ಐದು ಸಾವಿರ ರುಪಾಯಿ ಜಮೆಯಾಗಿ ಹೋಗಿತ್ತು. ‘ಉರಿಮೈ ತೊಗೈ’ (ಹಕ್ಕಿನ ಧನಸಹಾಯ) ಯೋಜನೆಯಡಿ ಗುರುವಾರ ಮಧ್ಯರಾತ್ರಿಯ ನಂತರ ಹೀಗೆ ಬಟವಾಡೆಯಾದ ಒಟ್ಟು ಹಣದ ಮೊತ್ತ 6,550 ಕೋಟಿ ರುಪಾಯಿ.
ಯಾವುದೇ ಆಡಳಿತಾತ್ಮಕ ಅಡೆತಡೆಗಳು ಇಲ್ಲವೇ ಚುನಾವಣಾ ಆಯೋಗದ ಅಡ್ಡಿ ಆತಂಕಗಳಿಗೆ ಅವಕಾಶವನ್ನೇ ನೀಡದ ರಹಸ್ಯ ರಾಜಕೀಯ ಕಾರ್ಯಾಚರಣೆಯಿದು. ಮೂರು ತಿಂಗಳ ಸಹಾಯಧನವಾಗಿ (ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿಗೆ ತಲಾ ಒಂದು ಸಾವಿರ) ರೂ. 3,000 ಮತ್ತು ವಿಶೇಷ ಬೇಸಿಗೆ ಪ್ಯಾಕೇಜ್ ರೂಪದಲ್ಲಿ ಹೆಚ್ಚುವರಿ ಎರಡು ಸಾವಿರ ರುಪಾಯಿ. ಪ್ರತಿಪಕ್ಷಗಳು ಪ್ರತಿಕ್ರಿಯಿಸುವಷ್ಟರಲ್ಲಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿ ಸೇರಿತ್ತು.
“ಈ ‘ಉರಿಮೈ ತೊಗೈ’ ತಮಿಳುನಾಡಿನ ಮಹಿಳೆಯರಿಗೆ ಸ್ಟಾಲಿನ್ ನೀಡಿದ ಭರವಸೆ. ಯಾರು ಅಡೆತಡೆ ಸೃಷ್ಟಿಸಿದರೂ ನಾನು ಹಿಂದೆ ಸರಿಯುವುದಿಲ್ಲ” ಎಂದು ಹಣ ವರ್ಗಾವಣೆ ಪೂರ್ಣಗೊಂಡ ನಂತರ ಸ್ಟ್ಯಾಲಿನ್ ಶುಕ್ರವಾರ ಸಾರಿ ಹೇಳಿದ್ದಾರೆ.
ಇದೇ ಏಪ್ರಿಲ್ ಅಥವಾ ಮೇನಲ್ಲಿ ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ದಿಸೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವುದು ನಿಶ್ಚಿತ, ಈ ಯೋಜನೆಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸುವ ಪ್ರಯತ್ನಗಳು ನಡೆಯಬಹುದು ಎಂಬ ಊಹಾಪೋಹ ಜರುಗಿತ್ತು.
“ಚುನಾವಣೆ ನೀತಿಸಂಹಿತೆಯ ನೆಪ ಹೇಳಿ, ಬಿಜೆಪಿಯ ಕೇಂದ್ರ ಸರ್ಕಾರ ಮೂರು ತಿಂಗಳ ಹಕ್ಕುಧನವನ್ನು ತಡೆಯಲು ಯತ್ನಿಸುತ್ತಿದೆ. ನಮ್ಮ ದ್ರಾವಿಡ ಮಾದರಿ ಸರ್ಕಾರವು ಅವರ ತಂತ್ರ ಫಲಿಸದಂತೆ ಮಾಡಿದೆ” ಎಂದು ಸ್ಟ್ಯಾಲಿನ್, ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಹಣ ವರ್ಗಾವಣೆಗೆ ಮುನ್ನ ಯೋಜನೆಯನ್ನು ಘೋಷಿಸುವುದು ರೂಢಿ. ಆದರೆ ಖಾತೆಗಳಿಗೆ ಹಣ ಜಮೆಯಾದ ನಂತರವೇ ಘೋಷಣೆ ಮಾಡಿದ್ದಾರೆ ಸ್ಟ್ಯಾಲಿನ್.
“ಸ್ಟಾಲಿನ್ ಹೊಡೆದ ಮೊದಲ ಸಿಕ್ಸರ್ನಿಂದ ಆರಂಭವಾದ ಪಂದ್ಯ” ಎಂದು ತಮಿಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲಿಗರು ಬಣ್ಣಿಸಿದ್ದಾರೆ. “ವಿರೋಧ ಪಕ್ಷ ಎಚ್ಚರವಾಗುವಷ್ಟರಲ್ಲಿ ಪಂದ್ಯ ಆರಂಭವಾಗಿತ್ತು,” ಎಂದು ಒಬ್ಬರು ಬಣ್ಣಿಸಿದ್ದಾರೆ. ಪಕ್ಷದ ಹ್ಯಾಂಡಲ್ಗಳು “ದ್ರಾವಿಡ ಮಾದರಿ 2.0” ಎಂಬ ಗ್ರ್ಯಾಫಿಕ್ಸ್ ಮತ್ತು ಹಣ ಜಮೆಯಾದ ಬ್ಯಾಂಕ್ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿವೆ.
ಸೆಪ್ಟೆಂಬರ್ 2023ರಲ್ಲಿ ಆರಂಭವಾದ ಈ ಯೋಜನೆ ಮೊದಲಿಗೆ 1.13 ಕೋಟಿ ಮಹಿಳಾ ಕುಟುಂಬ ಮುಖ್ಯಸ್ಥರನ್ನು ಒಳಗೊಂಡಿತ್ತು; ಪ್ರತಿ ತಿಂಗಳು ಅವರಿಗೆ ರೂ. 1,000 ನೀಡಲಾಗುತ್ತಿತ್ತು. ಈಗ ಇದು 1.31 ಕೋಟಿ ಫಲಾನುಭವಿಗಳಿಗೆ ವಿಸ್ತರಣೆಗೊಂಡಿದೆ.
“ಇದು ಕೇವಲ ಆರ್ಥಿಕ ಸಹಾಯವಲ್ಲ. ಸಮಾಜಕ್ಕೆ ಮಹಿಳೆಯರು ನೀಡುವ ಕೊಡುಗೆಯನ್ನು ಮಾನ್ಯಗೊಳಿಸುವ ಹಕ್ಕಿನ ಸಹಾಯ. ಈ ಮೊತ್ತದಿಂದ ಮಹಿಳೆಯರು ದಿನನಿತ್ಯದ ಗೃಹ ಖರ್ಚು, ಕುಟುಂಬದಲ್ಲಿ ಉಂಟಾಗುವ ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ವೆಚ್ಚ ಸೇರಿದಂತೆ ಅನೇಕ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಿದೆ” ಎಂದು ಸ್ಟ್ಯಾಲಿನ್ ಬಣ್ಣಿಸಿದ್ದಾರೆ.
ಚುನಾವಣಾ ಭರವಸೆಯಂತೆ, ಮತ್ತೆ ಅಧಿಕಾರಕ್ಕೆ ಬಂದರೆ ಮಾಸಿಕ ಧನಸಹಾಯವನ್ನು ರೂ. 2,000ಕ್ಕೆ ಹೆಚ್ಚಿಸಲಾಗುವುದು. ಮುಂದಿನ ದ್ರಾವಿಡ ಮಾದರಿ 2.0 ಸರ್ಕಾರದಲ್ಲಿ ನಿಮ್ಮ ಹಕ್ಕುಧನ ರೂ. 2,000 ಆಗುತ್ತದೆ. ಮಾತು ಕೊಟ್ಟದ್ದನ್ನು ನೆರವೇರಿಸುವ ಮುತ್ತುವೇಲ್ ಕರೂಣಾನಿಧಿ ಸ್ಟಾಲಿನ್ ನೀಡಿದ ಭರವಸೆ ಇದು,” ಎಂದು ಹೇಳಿದ್ದರು. “ಕೆಲವರು ನ್ಯಾಯಾಲಯಕ್ಕೆ ಹೋಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. “ಮೂರು ತಿಂಗಳು ಧನಸಹಾಯ ನಿಲ್ಲಿಸಿದರೆ ನಿಮಗೆ ಎಷ್ಟು ಕಷ್ಟವಾಗುತ್ತದೆ ಎಂಬುದು ನಿಮ್ಮ ಮನೆಯವನಾಗಿ ನನಗೆ ಗೊತ್ತು ಎಂದಿದ್ದಾರೆ.
ಆಡಳಿತಾರೂಢ ಡಿಎಂಕೆ ಪಕ್ಷದೊಳಗಿನ 30 ರಿಂದ 70 ವರ್ಷದ ಮಹಿಳಾ ಮತದಾರರನ್ನು ಸಕ್ರಿಯಗೊಳಿಸಿ, ಗ್ರಾಮೀಣ ಮತಬ್ಯಾಂಕ್ಗಳನ್ನು ಬಲಪಡಿಸಿ, ರಾಜ್ಯದ ಕೆಲವು ಭಾಗಗಳಲ್ಲಿ ಕಂಡುಬರುತ್ತಿದ್ದ ಪ್ರತಿಕೂಲ ಗಾಳಿಯನ್ನು ತಗ್ಗಿಸಲು ಈ ನಡೆ ನೆರವಾಗಲಿದೆ. ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸೇರಿದಂತೆ ಮಹಿಳಾ ಮತದಾರರ ಒಲವು ಹೊಸ ಪಕ್ಷಗಳತ್ತ ಸರಿಯುವುದನ್ನು ತಡೆಯುವುದೂ ಈ ‘ತಿರುಮಂತ್ರ’ದ ಉದ್ದೇಶವಾಗಿದೆ.
ಮಹಾರಾಷ್ಟ್ರದಲ್ಲಿ 2024ರ ವಿಧಾನಸಭಾ ಚುನಾವಣೆಗೆ ಮುನ್ನ, ಏಕನಾಥ್ ಶಿಂಧ ನೇತೃತ್ವದ ಸರ್ಕಾರ ‘ಮುಖ್ಯಮಂತ್ರಿ ಮಾಝಿ ಲಾಡಕಿ ಬಾಹಿನ್ ಯೋಜನೆ’ಯನ್ನು ಆರಂಭಿಸಿ, ಅರ್ಹ ಮಹಿಳೆಯರಿಗೆ ತಿಂಗಳಿಗೆ ರೂ. 1,500 ನೀಡಿತು. ಈ ಯೋಜನೆ ಆಡಳಿತಾರೂಢ ಮೈತ್ರಿ ಕೂಟದ ಚುನಾವಣಾ ಸಾಧನೆಗೆ ಸಹಕಾರಿಯಾಯಿತು ಎಂದು ಹೇಳಲಾಗಿದೆ.
ಬಿಹಾರದಲ್ಲಿ, ಸೆಪ್ಟೆಂಬರ್ 2025ರ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ‘ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ’ಯನ್ನು ಪ್ರಾರಂಭಿಸಿ, 75 ಲಕ್ಷ ಮಹಿಳೆಯರಿಗೆ ತಲಾ ರೂ. 10,000 ಸ್ವಯಂ ಉದ್ಯೋಗ ಉದ್ದೇಶಕ್ಕಾಗಿ ವರ್ಗಾವಣೆ ಮಾಡಿ ಗೆದ್ದಿತ್ತು





