ತಮಿಳುನಾಡಿನ ವಿಧಾನಸಭಾ ಚುನಾವಣೆಗಾಗಿ ವಿ.ಕೆ ಶಶಿಕಲಾ ನೇತೃತ್ವದ ʼಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ (ಎಐಪಿಟಿಎಂಎಂಕೆ) ಪಕ್ಷ ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಚುನಾವಣಾ ಕಣದಲ್ಲಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ.
ಈ ಸಂಬಂಧಿಸಿದಂತೆ ಶಶಿಕಲಾ ಮತ್ತು ರಾಮದಾಸ್ ಅವರು ಜಂಟಿಯಾಗಿ ತಿಂಡಿವನಂ ಬಳಿಯ ತೈಲಪುರಂನಲ್ಲಿರುವ ತೋಟದ ಮನೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಮೊದಲು ಎನ್.ಡಿ.ಎ ಮೈತ್ರಿಕೂಟವನ್ನು ಸೇರುವುದಕ್ಕೆ ಶಶಿಕಲಾ ಮತ್ತು ರಾಮದಾಸ್ ಇಬ್ಬರೂ ಪ್ರಯತ್ನಿಸಿದ್ದರು. ಮಾತುಕತೆ ಸರಿಹೊಂದದ ಕಾರಣಕ್ಕಾಗಿ ಎನ್.ಡಿ.ಎ ಜೊತೆ ಮೈತ್ರಿ ಸಾಧ್ಯವಾಗಿಲ್ಲ. ಆ ಸಂದರ್ಭದಲ್ಲೇ ಇಬ್ಬರು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.
ಇನ್ನು, ತಮ್ಮ ಪುತ್ರ ಆರ್. ಅನ್ಸುಮಣಿ ಅವರಿಂದ ದೂರ ಇರುವ ರಾಮದಾಸ್ ಅವರು ವಣ್ಣಿಯಾರ್ ಪ್ರಾಬಲ್ಯದ ಉತ್ತರ ತಮಿಳುನಾಡಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಆ ಭಾಗದಲ್ಲಿ ವಣ್ಣಿಯಾರ್ ಸಮುದಾಯದ ಮತಗಳನ್ನು ರಾಮದಾಸ್ ಅವರ ಪಿಎಂಕೆ ಬಣದ ಅಭ್ಯರ್ಥಿಗಳು ಸೆಳೆಯಬಹುದು ಎಂದು ಹೇಳಲಾಗುತ್ತಿದೆ.
ಎಐಎಡಿಎಂಕೆ ಹಾಗೂ ಪಿಎಂಕೆ ಅಭ್ಯರ್ಥಿಗಳಿಗೆ ಶಶಿಕಲಾ ಅವರ ಪಕ್ಷ ಮತ್ತು ರಾಮದಾಸ್ ಅವರ ಬಣದ ಅಭ್ಯರ್ಥಿಗಳ ಸ್ಪರ್ಧೆಯಿಂದ ಮತಗಳು ಕೊಂಚ ಮಟ್ಟಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.





