ತಮಿಳುನಾಡು ಚುನಾವಣೆಗಾಗಿ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿಯ ಮಾತುಕತೆಗಾಗಿ ಎಐಎಡಿಎಂಕೆಯ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ದೆಹಲಿಯಲ್ಲಿ ಅಮಿತ್ ಶಾ, ಮೋದಿ ಅವರಿಗೋಸ್ಕರ ಕಾಯುವಂತಹ ಪರಿಸ್ಥಿತಿ ಬಂದಿರುವುದು ಎಐಎಡಿಎಂಕೆ ಪಕ್ಷದ ದುರಂತ ಸ್ಥಿತಿ ಎಂದು ವಿಸಿಕೆ ಪಕ್ಷದ ಅಧ್ಯಕ್ಷ ತೋಲ್ ತಿರುಮಾವುಳವನ್ ವ್ಯಂಗ್ಯವಾಡಿದ್ದಾರೆ.
ಜಯಲಲಿತ ಮುಖ್ಯಮಂತ್ರಿಯಾಗಿದ್ದಾಗ ಚುನಾವಣೆಗಾಗಿ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ದ್ರಾವಿಡ ಚಳುವಳಿಯನ್ನು ಮರೆತಿರಲಿಲ್ಲ. ಪಕ್ಷದ ಮೂಲ ಸಿದ್ಧಾಂತವನ್ನು ಬಿಟ್ಟುಕೊಟ್ಟಿರಲಿಲ್ಲ. ಎಡಪ್ಪಾಡಿ ಪಳನಿಸ್ವಾಮಿ ಸಾಮಾಜಿಕ ನ್ಯಾಯ ಕೊಡಿಸುವ ತಮ್ಮ ಪಕ್ಷದ ಮೂಲ ತತ್ವ ಮರೆತು ದೆಹಲಿಯಲ್ಲಿ ಅಮಿತ್ ಶಾ ಮತ್ತು ಮೋದಿಗಾಗಿ ಕಾಯುತ್ತಿದ್ದಾರೆ. ಜಯಲಲಿತ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ಪಕ್ಷಗಳ ನಾಯಕರು ತಮಿಳುನಾಡಿಗೆ ಬಂದು ಜಯಲಲಿತ ಅವರಿಗಾಗಿ ಕಾದು ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಅವರೇ ಮೈತ್ರಿಯನ್ನು ಮುನ್ನಡೆಸುತ್ತಿದ್ದರು. ಆದರೆ ಈಗ ಮೈತ್ರಿಯ ನೇತೃತ್ವವನ್ನು ಕೂಡ ಎಐಎಡಿಎಂಕೆ ಬಿಜೆಪಿಗೆ ಬಿಟ್ಟುಕೊಟ್ಟಿದೆ. ಬಿಜೆಪಿ ಮುಂದೆ ಎಐಎಡಿಎಂಕೆ ಮಂಡಿಯೂರಿದೆ. ಬಿಜೆಪಿಯ ಬಾಗಿಲು ಕಾಯುತ್ತಿದೆ. ಮೈತ್ರಿಯ ನೇತೃತ್ವ ಎಐಎಡಿಎಂಕೆ ಪಕ್ಷವೇ ವಹಿಸಿಕೊಳ್ಳಬೇಕು. ಆ ದಕ್ಷತೆ ಇರಿಸಿಕೊಳ್ಳಿ ಎಂದು ನಾನು ಪಳನಿಸ್ವಾಮಿ ಅವರಿಗೆ ಸಲಹೆ ನೀಡಲು ಬಯಸುವುದಾಗಿ ಹೇಳಿದ್ದಾರೆ.
ಇನ್ನು, ಡಿಎಂಕೆ ಜೊತೆಗಿನ ಮೈತ್ರಿಯ ಸೀಟು ಹಂಚಿಕೆಯ ಮಾತುಕತೆ ಬಗ್ಗೆ ತಿಳಿಸಿದ ತಿರುಮಾವುಳವನ್, ನಮ್ಮ ಮೈತ್ರಿಯ ನೇತೃತ್ವ ವಹಿಸಿರುವ ಡಿಎಂಕೆ ನಮಗೆ ಸೀಟು ಹಂಚಿಕೆ ಮಾಡಿದ ಮೇಲೆ ನಮ್ಮ ಅಭ್ಯರ್ಥಿಗಳ ಪಟ್ಟಿ ಮತ್ತು ಯಾವ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಪ್ರಕಟಿಸುತ್ತೇವೆ. ಡಿಎಂಕೆ ನೇತೃತ್ವದ ಮೈತ್ರಿಗೆ ಹತ್ತಕ್ಕೂ ಹೆಚ್ಚು ಪಕ್ಷಗಳು ಸೇರ್ಪಡೆಗೊಂಡಿರುವ ಕಾರಣ ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳನ್ನು ವಿಶ್ವಾಸದಿಂದ ನೋಡಿಕೊಳ್ಳಬೇಕಿದೆ. ಡಿಎಂಕೆ ಎಲ್ಲಾ ಪಕ್ಷಗಳ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಲಿದೆ. ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 04ರಂದು ಫಲಿತಾಂಶ ಹೊರಬರಲಿದೆ.
ಇದನ್ನೂ ಓದಿ : ಬಿಜೆಪಿ ಅಸ್ತ್ರಕ್ಕೆ ಟಿಎಂಸಿ ಪ್ರತ್ಯಸ್ತ್ರ; ಸುವೇಂದು ಎದುರು ಸ್ಪರ್ಧಿಸಿರುವ ‘ಪಬಿತ್ರ ಕರ್’ ಯಾರು ಗೊತ್ತೆ?
ತಮಿಳುನಾಡು ಚುನಾವಣೆ | ಬಿಜೆಪಿಯ ಬಾಗಿಲು ಕಾಯುತ್ತಿದೆ ಅಣ್ಣಾ ಡಿಎಂಕೆ : ತಿರುಮಾವುಳವನ್
Date:
ಪೋಸ್ಟ್ ಹಂಚಿಕೊಳ್ಳಿ:




