ತಮಿಳುನಾಡು ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಮತ್ತು ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ಸವಾಲು ಹಾಕಿ ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಪಕ್ಷದ ಮುಖ್ಯಸ್ಥ ಸೀಮನ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಆಡಳಿತವನ್ನು ವಿಕೇಂದ್ರೀಕರಣಗೊಳಿಸುವ ಭರಸವೆಯನ್ನು ತನ್ನ ಪ್ರಣಾಳಿಕೆಯಲ್ಲಿ ಎನ್ ಟಿಕೆ ನೀಡಿದ್ದು, ತಮಿಳುನಾಡು ಆಡಳಿತದಲ್ಲಿ ಸುಧಾರಣೆ ತರುವುದಾಗಿ ಹೇಳಿದೆ.
ಐದು ಆಡಳಿತ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದು, ಆಡಳಿತ ಸುಧಾರಣಾ ಕ್ರಮಗಳನ್ನು ಕೂಡ ಪ್ರಸ್ತಾಪಿಸಿದೆ. ತಿರುಚ್ಚಿಯನ್ನು ಆಡಳಿತ ರಾಜಧಾನಿಯಾಗಿ, ಕೊಯಮತ್ತೂರನ್ನು ಕೈಗಾರಿಕಾ ಮತ್ತು ವ್ಯವಹಾರ ರಾಜಧಾನಿಯಾಗಿ, ಚೆನ್ನೈಯನ್ನು ತಂತ್ರಜ್ಞಾನ ರಾಜಧಾನಿಯಾಗಿ, ಮಧುರೈಯನ್ನು ಸಾಂಸ್ಕೃತಿಕ ಮತ್ತು ಪರಂಪರೆಯ ರಾಜಧಾನಿಯಾಗಿ ಮತ್ತು ಕನ್ಯಾಕುಮಾರಿಯನ್ನು ತಾತ್ವಿಕ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದೆ.
ಈ ಆಡಳಿತ ಕ್ರಮದಿಂದ ಪ್ರಾದೇಶಿಕತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದಿರುವ ಎನ್ ಟಿಕೆ, ಆಡಳಿತದಲ್ಲಿ ಸ್ಥಳೀಯರಿಗೆ ಮೀಸಲಾತಿ ಆಧಾರದಲ್ಲಿ ಅವಕಾಶ ಮಾಡಿಕೊಡುತ್ತದೆ ಎಂದು ವಿವರಿಸಿದೆ.
ಇದನ್ನೂ ಓದಿ : ಕೇರಳ ಚುನಾವಣೆ | ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ…
400 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಮುಖ್ಯಸ್ಥ ಸೀಮನ್, ಎಸ್ಪಿ ಆದಿತನಾರ್ ಹೆಸರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಭರಸವೆ ನೀಡುವುದರ ಜೊತೆಗೆ ಉಚಿತ ಶುದ್ಧ ನೀರಿನ ಪೂರೈಕೆ ಮಾಡುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಹಾಗೂ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರಿನ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಸಿದ್ಧ ಔಷಧಕ್ಕಾಗಿ ಮತ್ತು ನ್ಯಾಚುರಲ್ ಟ್ರೀಟ್ಮೆಂಟ್ ನೀಡುವ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯವನ್ನು ರಚಿಸಲು ಕ್ರಮ ತೆಗದುಕೊಳ್ಳಲಾಗುವುದು. ಮದ್ಯ, ತಂಬಾಕು, ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳ ಮೇಲೆ ಸಂಪರ್ಣ ನಿಷೇಧವನ್ನು ಹೇರಲಾಗುವುದು. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ವಿಶೇಷ ಪಡೆಯನ್ನು ರಚಿಸುವುದಾಗಿಯೂ, ಕೃಷಿ ಕೀಟನಾಶಕವನ್ನು ಹಂತಹಂತವಾಗಿ ನಿಷೇಧ ಮಾಡುವ ಭರವಸೆಯ ಜೊತೆಗೆ, 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ಪಿಂಚಣಿ ನೀಡಲಾಗುವುದು ಎಂದು ಹೇಳಿದ್ದಾರೆ.





