ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮದ್ರಾಸ್ ಹೈಕೋರ್ಟ್ನ ಹಿರಿಯ ವಕೀಲ ಡಾ. ವಿ ಸುರೇಶ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಪಿಯುಸಿಎಲ್ ರಾಷ್ಟ್ರೀಯ ಮತ್ತು ಪಿಯುಸಿಎಲ್ ತಮಿಳುನಾಡು, ಪುದುಚೇರಿ ಘಟಕ ಅವರಿಗೆ ರಕ್ಷಣೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿದೆ.
ತಮಿಳುನಾಡು ರಾಜ್ಯದ ತಿರುನಲ್ವೇಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಅರಪ್ಪೋರ್ ಇಯಕ್ಕಂ ಇಯಕ್ಕಂ(ನ್ಯಾಯಕ್ಕಾಗಿ ಪೀಪಲ್ಸ್ ಕ್ಯಾಂಪೇನ್) ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಪಿಯುಸಿಎಲ್ ಸಂಘಟನಾಕಾರರು ಪತ್ರಿಕೆ ಹೇಳಿಕೆ ನೀಡಿದ್ದು, “ಹಲವು ದಶಕಗಳಿಂದ ತಿರುನಲ್ವೇಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖನಿಜ ಸಂಪನ್ಮೂಲಗಳ ಅಕ್ರಮ, ಶೋಷಣೆ ಅನಿಯಂತ್ರಿತವಾಗಿ ನಡೆಯುತ್ತಿದೆ. ಇದು ಜಿಲ್ಲಾದ್ಯಂತ ತೀವ್ರ ಪರಿಸರ ನಾಶಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದ್ದಾರೆ.
“ಇದಕ್ಕೆ ಪ್ರತಿಕ್ರಿಯೆಯಾಗಿ, ಅರಪ್ಪೋರ್ ಇಯಕ್ಕಂ ತಿರುನಲ್ವೇಲಿಯ ರೋಸ್ ಮಹಲ್ನಲ್ಲಿ ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಅರಪ್ಪೋರ್ ಇಯಕ್ಕಂನ ಸಂಘಟಕರಾದ ಜಯರಾಮನ್, ರಾಷ್ಟ್ರೀಯ ಪಿಯುಸಿಎಲ್ನ ಪ್ರಧಾನ ಕಾರ್ಯದರ್ಶಿ ವಕೀಲ ಡಾ. ವಿ ಸುರೇಶ್ ಮತ್ತು ತನ್ನಚ್ಚಿ(ಸ್ವಯಂ-ಆಡಳಿತ ಚಳುವಳಿ)ಯ ನಂದಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ನವೆಂಬರ್ 2ರ ಬೆಳಿಗ್ಗೆ 10.30ಕ್ಕೆ ಪ್ರಾರಂಭವಾದ ವಿಚಾರಣೆ ಶಾಂತಿಯುತವಾಗಿ ನಡೆಯಿತು. ಆದಾಗ್ಯೂ, ಬೆಳಿಗ್ಗೆ 11 ಗಂಟೆ ಸುಮಾರಿಗೆ, 25 ಮಂದಿ ಬಂದು ಸಭಾಂಗಣದ ಹಿಂಭಾಗದಲ್ಲಿ ಕುಳಿತರು. ಅವರು ನಂತರ ಕ್ವಾರಿ ಮಾಲೀಕರ ಪರ ವಕೀಲರೆಂದು ಹೇಳಿಕೊಂಡರು. ಈ ಪೈಕಿ ಒಬ್ಬರಾದ ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಗುಂಪನ್ನು ಮುನ್ನಡೆಸಿದರು. ಅಲ್ಲದೆ ಬಲವಂತವಾಗಿ ವಿಚಾರಣೆಗೆ ಅಡ್ಡಿಪಡಿಸಲು ಪ್ರಾರಂಭಿಸಿದರು. ಸಾರ್ವಜನಿಕ ವಿಚಾರಣೆಯನ್ನು ಮುಂದುವರೆಸಲು ನಾವು ಬಿಡುವುದಿಲ್ಲ. ಗ್ರಾಮಸ್ಥರು ಸಲ್ಲಿಕೆ ಇಡುವುದನ್ನು ಮುಂದುವರಿಸುತ್ತೇವೆಂದು ಕೂಗಾಡುತ್ತಿದ್ದರು” ಎಂದು ತಿಳಿಸಿದ್ದಾರೆ.
“ವಿಚಾರಣೆಯಲ್ಲಿ ಮಾತನಾಡಲು ಮತ್ತು ಗ್ರಾಮಸ್ಥರ ಸಾಕ್ಷ್ಯಗಳಿಗೆ ಪ್ರತಿಕ್ರಿಯಿಸಲು ಸಮಾನ ಅವಕಾಶ ನೀಡಲಾಗುವುದೆಂದು ಭರವಸೆ ನೀಡಿ, ಶಾಂತವಾಗುವಂತೆ ಡಾ. ಸುರೇಶ್ ವಿನಂತಿಸಿದರೂ ಕೂಡ ಅವರ ಕೋರಿಕೆಗೆ ಅವರು ಕಿವಿಗೊಡಲಿಲ್ಲ. ಹಾಗಾಗಿ ಡಾ. ಸುರೇಶ್ ಅವರು ನಿರ್ದಿಷ್ಟವಾಗಿ ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಅವರಿಗೆ, ‘ನೀವು ಬಯಸಿದರೆ ನೀವೂ ಕೂಡ ತಕ್ಷಣ ಮಾತನಾಡಬಹುದುʼ ಎಂದು ಹೇಳಿದರು. ಅಲ್ಲದೆ ಅವರಿಗೆ ಮೈಕನ್ನೂ ನೀಡಿದರು. ಆದರೆ ಇದನ್ನು ನಿರಾಕರಿಸಿದ ಅವರು ಕೂಡಲೇ ಸಭೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬೆಳೆ ಹಾನಿ; ರೈತರಿಗೆ ₹91 ಕೋಟಿ ರೂ ಪರಿಹಾರ ವಿತರಣೆಗೆ ಚಾಲನೆ
“ಈ ಸಮಯದಲ್ಲಿ, ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಜತೆಗಿದ್ದ ಸದಸ್ಯರಲ್ಲಿ ಒಬ್ಬರು ಡಾ. ಸುರೇಶ್ ಅವರ ತಲೆಗೆ ಗುರಿಯಿಟ್ಟು ಕುರ್ಚಿಯನ್ನು ಎಸೆದು ಹಲ್ಲೆ ಮಾಡಿದರು. ಕುರ್ಚಿ ಡಾ. ಸುರೇಶ್ ಅವರ ತಲೆಯ ಬಲಭಾಗಕ್ಕೆ ಕುತ್ತಿಗೆಯ ಮೇಲೆ ಬಡಿದು ರಕ್ತಸ್ರಾವವಾಗುವುದರ ಜತೆಗೆ ಗಾಯವಾಯಿತು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಅವರ ಸ್ಥಿತಿ ಸ್ಥಿರವಾಗಿದೆ. ಆದರೂ ಅವರ ತಲೆಯಲ್ಲಿನ ನೋವು ಹಾಗೆಯೇ ಇದೆ. ವಿನೋದ್ ಅವರ ಗುಂಪಿನ ಇತರ ಇಬ್ಬರು ಸಭೆಯ ಮೇಲೆ ಕುರ್ಚಿಗಳನ್ನು ಎಸೆದು, ಶಾಂತಿಯುತ ಸಭೆಯನ್ನು ಚದುರಿಸಲು ಪ್ರಯತ್ನಿಸಿದ್ದಾರೆ” ಎಂದು ಆರೋರಪಿಸಿದರು.
ಈ ವೇಳೆ ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ, ತಮಿಳುನಾಡು ಮತ್ತು ಪುದುಚ್ಚರಿ ಅಧ್ಯಕ್ಷ ಆರ್ ಮುರಳಿ, ತಮಿಳುನಾಡು, ಪುದುಚೇರಿ ಕಾರ್ಯದರ್ಶಿ ಶೇಖರ್ ಅಣ್ಣಾ ದುರೈ ಇದ್ದರು.





