ತಮಿಳುನಾಡು ಚುನಾವಣೆ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಸಂಚಲನ ಮೂಡಿಸಿದ್ದು, ಈಗಾಗಲೇ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಕೈಚಾಚಿದೆ ಎನ್ನುವ ವರದಿಗಳಿವೆ. ಟಿವಿಕೆಯ ಸೆಂಗೊಟ್ಟಿಯನ್, ವಿಜಯ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಒಪ್ಪುವ ಪಕ್ಷದೊಂದಿಗೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ಸಾರ್ವಜನಿಕ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಮೈತ್ರಿಗೆ ಒಪ್ಪಿದರೆ, ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಪೈಕಿ 90 ಕ್ಷೇತ್ರಗಳನ್ನು ಟಿವಿಕೆ ಪಕ್ಷಕ್ಕೆ ಬಿಟ್ಟುಕೊಡುವುದಾಗಿಯೂ ಮತ್ತು ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯ ಭರವಸೆ ನೀಡಿದೆ ಎಂದು ಹೇಳಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಈ ಒಪ್ಪಂದವನ್ನು ಮುಂದೆ ಇಟ್ಟಿರುವ ಪಕ್ಷ ಯಾವುದು ಎನ್ನುವುದರ ಬಗ್ಗೆ ತಮ್ಮ ಸಾರ್ವಜನಿಕ ಭಾಷಣದಲ್ಲಿ ಅವರು ಉಲ್ಲೇಖಿಸಿಲ್ಲ. ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಮತ್ತು ವಿಶ್ವಾಸ ಗಳಿಸುವ ಸರ್ಕಾರ ರಚನೆ ಮಾಡುವ ಉದ್ದೇಶ ಟಿವಿಕೆ ಪಕ್ಷ ಹೊಂದಿದೆ ಎಂದು ವಿಜಯ್ ಈ ಮೈತ್ರಿಗೆ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದಲ್ಲದೇ, ನಮ್ಮ ನಾಯಕ(ವಿಜಯ್) ದೆಹಲಿ ನಾಯಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಯಾಗುವವರಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಟಿ.ವಿ.ಕೆ ಸ್ಪರ್ಧಿಸಲಿದೆ ಎಂದು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸ್ನೇಹಿತರಿಗೆ ತಿಳಿಸಲು ಬಯಸುತ್ತೇನೆ. ನಿಜವಾದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರಿಗೆ ನಾವು ಸತ್ಯವಂತರಾಗಿರುತ್ತೇವೆ ಎಂದು ಅವರು ಹೇಳುವ ಮೂಲಕ ಚುಣಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.




