ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯ ಒತ್ತಾಯವನ್ನು ನಿಷೇಧಿಸುವ ಗುರಿಯನ್ನು ಹೊಂದಿರುವ ಮಸೂದೆಯೊಂದನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆದಿದ್ದು, ಈ ಮಸೂದೆಯ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಈ ಮಸೂದೆಯು ತಮಿಳುನಾಡಿನಾದ್ಯಂತ ಹಿಂದಿ ಫಲಕಗಳು, ಬೋರ್ಡ್ಗಳು, ಚಲನಚಿತ್ರಗಳು ಮತ್ತು ಗೀತೆಗಳನ್ನು ನಿಷೇಧಿಸುವ ಉದ್ದೇಶ ಹೊಂದಿದೆ. ಆದರೆ, ಈ ಕ್ರಮವು ಭಾರತೀಯ ಸಂವಿಧಾನಕ್ಕೆ ಅನುಗುಣವಾಗುವ ರೀತಿಯಲ್ಲಿ ಮಸೂದೆ ಮಂಡಿಸಲು ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಇಳಂಗೋವನ್ ಈ ಬಗ್ಗೆ ಪ್ರತಿಕ್ರಿಯಿಸಿ, “ನಾವು ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ನಮ್ಮ ವಿರೋಧವು ಕೇವಲ ಹಿಂದಿಯ ಒತ್ತಾಯಕ್ಕೆ ಮಾತ್ರ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್ಎಸ್ಎಸ್ಗೆ ಸುಲಭವಲ್ಲ!
ಈ ನಡೆಯನ್ನು ಬಿಜೆಪಿಯ ವಿನೋಜ್ ಸೆಲ್ವಂ “ಮೂರ್ಖತನ ಮತ್ತು ಅಸಂಗತ” ಎಂದು ಕರೆದಿದ್ದಾರೆ. “ಭಾಷೆಯನ್ನು ರಾಜಕೀಯ ಉಪಕರಣವಾಗಿ ಬಳಸಬಾರದು” ಎಂದು ವಾದಿಸಿದ ಅವರು, ಆಡಳಿತಾರೂಢ ಡಿಎಂಕೆ ಪಕ್ಷವು ಕರೂರ್ ತನಿಖೆ ಮತ್ತು ಆರ್ಮ್ಸ್ಟ್ರಾಂಗ್ ವಿವಾದಗಳಂತಹ ಇತ್ತೀಚಿನ ಕಾನೂನು ಸೋಲುಗಳಿಂದ ಗಮನ ಬೇರೆಡೆಗೆ ಸೆಳೆಯಲು ಈ ಭಾಷಾ ವಿವಾದವನ್ನು ಎತ್ತಿಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಫಾಕ್ಸ್ಕಾನ್ ಹೂಡಿಕೆ ವಿವಾದದಿಂದಲೂ ಗಮನ ಬೇರೆಡೆಗೆ ಸೆಳೆಯುವ ಯತ್ನವಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರವು 2025-26ರ ರಾಜ್ಯ ಬಜೆಟ್ನ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಯನ್ನು ತಮಿಳಿನ (ರೂ) ಅಕ್ಷರದಿಂದ ಬದಲಾಯಿಸಿತ್ತು. ಈ ಕ್ರಮವು ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಟೀಕೆಗೆ ಗುರಿಯಾಗಿತ್ತು. ಆದರೆ, ಡಿಎಂಕೆ ಇದನ್ನು ತಮಿಳು ಭಾಷೆಯನ್ನು ಉತ್ತೇಜಿಸುವ ಪ್ರಯತ್ನವೆಂದು ಸಮರ್ಥಿಸಿಕೊಂಡಿತ್ತು, ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.





