ನಿಗದಿಯಾಗಿದ್ದ ಮದುವೆಯನ್ನು ವರನ ಕಡೆಯವರು ಏಕಾಏಕಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಆಕೆಯ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ಮಾರ್ಚೂರು ಎಂಬಲ್ಲಿ ನಡೆದಿದೆ.
ಮೃತರನ್ನು ಬಿ.ಸಿ ಕಾಲೊನಿ ನಿವಾಸಿ ಸಿರಿಕೊಂಡ ಶ್ರೀನಿವಾಸರಾವ್ ಅವರ ಪತ್ನಿ ಸುಜಾತಾ (46) ಹಾಗೂ ಪುತ್ರಿ ದಿವ್ಯಾ (25) ಎಂದು ಗುರುತಿಸಲಾಗಿದೆ.
ಶ್ರೀನಿವಾಸರಾವ್ ದಂಪತಿಯ ಪುತ್ರ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೆ, ಪುತ್ರಿ ದಿವ್ಯಾ ಕಳೆದ ಮೂರು ವರ್ಷಗಳಿಂದ ಹೈದರಾಬಾದ್ನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ದಿವ್ಯಾ ಅವರಿಗೆ ಮಾರ್ಚೂರು ಮೂಲದವರೇ ಆದ ಮತ್ತೊಬ್ಬ ಸಾಫ್ಟ್ವೇರ್ ಎಂಜಿನಿಯರ್ ಶೇಷು ಬಾಬು ಎಂಬಾತನ ಜೊತೆ ವಿವಾಹ ನಿಶ್ಚಯವಾಗಿತ್ತು. ಕಳೆದ ವರ್ಷ ಡಿಸೆಂಬರ್ 14 ರಂದು ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಈ ಬೇಸಿಗೆಯಲ್ಲಿ ಮದುವೆ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿದ್ದವು.
ಇದನ್ನು ಓದಿದ್ದೀರಾ? ಟ್ರಂಪ್ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ
ರಹಸ್ಯ ವಿಡಿಯೊ ತೋರಿಸಿ ಮದುವೆ ರದ್ದು
ಮಾರ್ಚ್ 4 ರಂದು ಈ ಮದುವೆ ಪ್ರಕರಣ ದಿಢೀರ್ ತಿರುವು ಪಡೆದುಕೊಂಡಿತು. ವರ ಶೇಷು ಬಾಬು, ದಿವ್ಯಾ ಹಾಗೂ ಆಕೆಯ ಪೋಷಕರನ್ನು ಮಾರ್ಚೂರಿನಲ್ಲಿರುವ ತನ್ನ ಮನೆಗೆ ಮಾತುಕತೆಗೆಂದು ಕರೆಸಿದ್ದನು. ಹೈದರಾಬಾದ್ನಲ್ಲಿ ದಿವ್ಯಾ ಅವರ ಹಿಂದೆಯೇ ರಹಸ್ಯವಾಗಿ ಹಿಂಬಾಲಿಸಿ ಚಿತ್ರೀಕರಿಸಿದ್ದಾಗಿ ಹೇಳಲಾದ ಕೆಲವು ಫೋಟೊ ಮತ್ತು ವಿಡಿಯೊಗಳನ್ನು ಆತ ಈ ಸಂದರ್ಭದಲ್ಲಿ ಅವರಿಗೆ ತೋರಿಸಿದ್ದಾನೆ. ಇವುಗಳನ್ನೇ ಮುಂದಿಟ್ಟುಕೊಂಡು, ತನಗೆ ಈ ಮದುವೆಗೆ ಇಷ್ಟವಿಲ್ಲ ಎಂದು ಹೇಳಿ ಏಕಾಏಕಿ ವಿವಾಹವನ್ನು ರದ್ದುಗೊಳಿಸಿದ್ದಾನೆ.
ಅನಿರೀಕ್ಷಿತವಾಗಿ ಮದುವೆ ಮುರಿದುಬಿದ್ದಿದ್ದರಿಂದ ದಿವ್ಯಾ ಹಾಗೂ ಅವರ ತಾಯಿ ಸುಜಾತಾ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಸಂಬಂಧಿಕರು ನೀಡಿರುವ ಮಾಹಿತಿ ಪ್ರಕಾರ, ಇವರಿಬ್ಬರೂ ಮಾರ್ಚೂರಿನಲ್ಲಿ ಇಲಿ ಪಾಷಾಣ ಹಾಗೂ ಕಳೆನಾಶಕ ಖರೀದಿಸಿ, ನಂತರ ದ್ರೋಣಾದುಲ ಗ್ರಾಮಕ್ಕೆ ತೆರಳಿ ಅಲ್ಲಿ ವಿಷ ಸೇವಿಸಿದ್ದಾರೆ.
ಮಾರ್ಚ್ 5ರ ಸಂಜೆ ಇವರಿಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ತಂದೆ ಶ್ರೀನಿವಾಸರಾವ್ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಇಬ್ಬರನ್ನೂ ಚಿಲಕಲೂರಿಪೇಟೆಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರಿನ ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಗುರುವಾರ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸರಾವ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತ ಮಾಹಿತಿಯನ್ನು ಮಾರ್ಚೂರು ಠಾಣಾ ಪೊಲೀಸರಿಗೆ ರವಾನಿಸಲಾಗಿದ್ದು, ಅವರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





