ಕೇವಲ ₹22 ಹಳೆಯ ಸಾಲ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಉತ್ತರಪ್ರದೇಶ ಮೂಲದ ಮೊಹಮ್ಮದ್ ಸಿರಾಜ್ ಮತ್ತು ಮಹೇಶ ಮೆದಕ್ ಜಿಲ್ಲೆಗೆ ವಲಸೆ ಬಂದು ದಿನಗೂಲಿ ಕೆಲಸ ಮಾಡುತ್ತಿದ್ದರು. ರವಿಕುಮಾರ್ ಎಂಬ ವ್ಯಕ್ತಿಯೊಂದಿಗೆ ಒಂದೇ ಕೋಣೆಯಲ್ಲಿ ವಾಸವಿದ್ದರು. ಮೊಹಮ್ಮದ್ ಸಿರಾಜ್ ಹಾಗೂ ಮಹೇಶ ಇಬ್ಬರು ಮದ್ಯ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಕರ ಸಂಕ್ರಾಂತಿ ದಿನದಂದು ಮರದ ಕೆಳಗೆ ಇಬ್ಬರು ಕುಳಿತು ಮದ್ಯ ಸೇವಿಸುವಾಗ ಮಹೇಶ ಸಿರಾಜ್ನಿಗೆ ಹಳೆಯ ₹22 ಸಾಲ ಮರುಪಾವತಿಸುವಂತೆ ಒತ್ತಾಯ ಮಾಡಿದ್ದಾನೆ. ಬಳಿಕ ಅದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿದ್ದ ಮಹೇಶ ಸಿರಾಜ್ನ ತಲೆಯನ್ನು ಹಿಡಿದು ಮರಕ್ಕೆ ಗುದ್ದಿ, ಬಳಿಕ ಕಲ್ಲಿನಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಸಿರಾಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಬಳಿಕ ಕೊಲೆಗೈದ ಮಹೇಶ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ : ಬೀದರ್ | ಅಧಿಕಾರಿಗಳ ಮನವೋಲಿಕೆ ವಿಫಲ : ಮುಂದುವರೆದ ಅಲೆಮಾರಿಗಳ ಧರಣಿ
ರೂಮ್ಮೆಟ್ ರವಿಕುಮಾರ್ ನೀಡಿದ ದೂರಿನ ಮೇರೆಗೆ ಮೆದಕ್ ಜಿಲ್ಲೆಯ ಚೆಗುಂಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಹೇಶ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ.





